ಬೆಂಗಳೂರು: ತಮ್ಮ 16ನೇ ವಯಸ್ಸಿನಲ್ಲಿ ದೇಶದ ನೌಕಾಪಡೆಗೆ ಸೇರಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, 1982ರಲ್ಲಿ ನಿಧನರಾದ ವೈಸ್ ಅಡ್ಮಿರಲ್ ನೀಲಕಂಠ ಕೃಷ್ಣನ್ ಅವರ ಆತ್ಮಚರಿತ್ರೆ ‘ಎ ಸೇಲರ್ಸ್ ಸ್ಟೋರಿ’ ಪುಸ್ತಕವನ್ನು ನಗರದಲ್ಲಿ ಗುರುವಾರ ಬಿಡುಗಡೆ ಮಾಡಲಾಯಿತು.
ಅಮೆರಿಕದಲ್ಲಿ ಉದ್ಯಮಿಯಾಗಿರುವ ಕೃಷ್ಣನ್ ಅವರ ಪುತ್ರ ಅರ್ಜುನ್ ಅವರು ಈ ಪುಸ್ತಕವನ್ನು ಸಂಪಾದಿಸಿದ್ದಾರೆ. ಎರಡನೇ ವಿಶ್ವ ಸಮರದಿಂದ ಹಿಡಿದು 1971ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಕದನದವರೆಗಿನ ಹಲವಾರು ಯುದ್ಧ ಕಾರ್ಯಾಚರಣೆಗಳಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಕೃಷ್ಣನ್ ಅವರ ವೃತ್ತಿ ಬದುಕಿನ ರೋಚಕ ಘಟನಾವಳಿಗಳು ಈ ಪುಸ್ತಕದಲ್ಲಿವೆ.
ಪುಸ್ತಕ ಬಿಡುಗಡೆ ಮಾಡಿದ ನೌಕಾಪಡೆಯ ನಿವೃತ್ತ ವೈಸ್ ಅಡ್ಮಿರಲ್ ಪಿ.ಜೆ.ಜೇಕಬ್ ಮಾತನಾಡಿ, ‘ದೇಶದ ನೌಕಾಪಡೆಗೆ ಒಂದು ರೂಪ ಕೊಟ್ಟ ಅಗ್ರಗಣ್ಯರಲ್ಲಿ ಒಬ್ಬರಾದ ವೈಸ್ ಅಡ್ಮಿರಲ್ ಎನ್. ಕೃಷ್ಣನ್ ಅವರು ಕಿರಿಯ ಸಹೋದ್ಯೋಗಿಗಳಿಗೆ ಶಿಸ್ತಿನ ಮೇಲ್ಪಂಕ್ತಿ ಹಾಕಿಕೊಟ್ಟವರು’ ಎಂದು ಅಭಿಪ್ರಾಯಪಟ್ಟರು.
‘ಪ್ರಾಮಾಣಿಕ, ಸಹೃದಯಿ, ಉತ್ಸಾಹಿ ಅಧಿಕಾರಿಯಾಗಿದ್ದ ಕೃಷ್ಣನ್ ಅವರು ಅಪ್ರತಿಮ ಸಾಹಸಿ ಕೂಡ ಆಗಿದ್ದರು. ಪ್ರಸ್ತುತ ದೇಶದ ನೌಕಾಪಡೆಯು ಸಂಕಷ್ಟದಲ್ಲಿರುವ ಈ ಸಮಯದಲ್ಲಿ ಈ ಪುಸ್ತಕ ಬಿಡುಗಡೆಗೊಳ್ಳುತ್ತಿರುವುದು ಸಕಾಲಿಕವಾಗಿದೆ’ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ನೌಕಾಪಡೆಯ ನಿವೃತ್ತ ರೇರ್ ಅಡ್ಮಿರಲ್ ಜಿ.ಸಿ.ಥಡಾಣಿ ಮಾತನಾಡಿ, ‘ಬಾಂಗ್ಲಾದೇಶದ ವಿಮೋಚನೆಗಾಗಿ 1971 ರಲ್ಲಿ ಪಾಕಿಸ್ತಾನದ ಜೊತೆ ನಡೆದ ಯುದ್ಧದಲ್ಲಿ ಯುದ್ಧನೌಕೆ ಐಎನ್ಎಸ್ ವಿಕ್ರಾಂತ್ ಪ್ರಮುಖ ಪಾತ್ರ ವಹಿಸಿತ್ತು. ಆ ನೌಕೆ ಮುಖ್ಯಸ್ಥರಲ್ಲಿ ಕೃಷ್ಣನ್ ಕೂಡ ಒಬ್ಬರಾಗಿದ್ದರು. ನಾನು ಆ ನೌಕೆಯ ಪ್ರಧಾನ ತಾಂತ್ರಿಕ ಅಧಿಕಾರಿಯಾಗಿದ್ದೆ’ ಎಂದು ಹಳೆಯ ನೆನಪು ಮೆಲುಕು ಹಾಕಿದರು.
ಪೋರ್ಚುಗೀಸರ ವಿರುದ್ಧ ಜಯ
1961ರಲ್ಲಿ ಗೋವಾದಲ್ಲಿ ಪೋರ್ಚುಗೀಸರ ವಿರುದ್ಧ ನೌಕಾಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ನಾನು ಕೃಷ್ಣನ್ ಅವರ ಕಿರಿಯ ಸಹೋದ್ಯೋಗಿಗಳಲ್ಲಿ ಒಬ್ಬ. ಆ ಯುದ್ಧದಲ್ಲಿ ನಾವು ಪೋರ್ಚುಗೀಸರ ವಿರುದ್ಧ ವಿಜಯ ಸಾಧಿಸಿದೆವು.