ಬೆಂಗಳೂರು: ‘ನ್ಯಾಯಮೂರ್ತಿಗಳಾಗಿ ವಿ.ಆರ್.ಕೃಷ್ಣ ಅಯ್ಯರ್ ಭಾರತೀಯ ಜನಮಾನಸದಲ್ಲಿ ದೀರ್ಘಕಾಲದ ವರೆಗೂ ಉಳಿಯುವ ದೊಡ್ಡ ವ್ಯಕ್ತಿತ್ವ’ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ವಿ.ಗೋಪಾಲಗೌಡ ಬಣ್ಣಿಸಿದರು.
ಶುಕ್ರವಾರ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ದಿವಂಗತ ನ್ಯಾಯಮೂರ್ತಿ ವಿ.ಆರ್.-ಕೃಷ್ಣ ಅಯ್ಯರ್ ಅವರ ಸ್ಮರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಾಮಾಜಿಕ ನ್ಯಾಯ ವಿತರಣೆಯಲ್ಲಿ ಅಯ್ಯರ್ ಅವರು ನ್ಯಾಯಮೂರ್ತಿಯಾಗಿ ನೀಡಿದ ಕೊಡುಗೆ ಭಾರತೀಯ ಪ್ರಜಾಪ್ರಭುತ್ವಕ್ಕೆ ಬಹುದೊಡ್ಡ ಕಾಣ್ಕೆಯಾಗಿದೆ. ಶಿಕ್ಷೆಗೆ ಒಳಗಾದವರ ಸಾಂವಿಧಾನಿಕ ಹಕ್ಕುಗಳನ್ನೂ ರಕ್ಷಿಸಬೇಕು ಎಂಬ ಅಯ್ಯರ್ ಅವರ ಜನಪರ ಧೋರಣೆ ಭಾರತೀಯ ದೀರ್ಘಕಾಲದವರೆಗೆ ಉಳಿಯುತ್ತವೆ’ ಎಂದರು.
ಅಖಿಲ ಭಾರತ ವಕೀಲರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಸ್.ಶಂಕರಪ್ಪ ಮಾತನಾಡಿ, ‘ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಡೆಯುವಲ್ಲಿ ವಿ.ಆರ್.ಅಯ್ಯರ್ ನೇತೃತ್ವದಲ್ಲಿ ಜನ್ಮತಾಳಿದ ಅಖಿಲ ಭಾರತ ವಕೀಲರ ಸಂಘವು ಸಾಮಾಜಿಕ ಸೇವೆಯಲ್ಲಿ ಮಹತ್ವದ ಪಾತ್ರ ವಹಿಸಿದೆ’ ಎಂದರು. ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್, ಹಿರಿಯ ವಕೀಲ ಕೆ.ಸುಬ್ಬರಾವ್, ಸಿ.ಬಿ.ಶ್ರೀನಿವಾಸನ್ ಮಾತನಾಡಿದರು.