ಬೆಂಗಳೂರು: ‘ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳ ವಿರುದ್ಧದ ಅತ್ಯಾಚಾರ ಪ್ರಕರಣದ ವಿಚಾರಣೆಯನ್ನು ಸೆಷನ್ಸ್ ನ್ಯಾಯಾಧೀಶ ಜಿ.ಬಿ.ಮುದಿಗೌಡರ್ ನಡೆಸುವುದು ಬೇಡ’ ಎಂದು ಕೋರಿ ರಾಮಕಥಾ ಗಾಯಕಿ ಪ್ರೇಮಲತಾ ಶಾಸ್ತ್ರಿ ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯ ಮೇಲಿನ ಆದೇಶವನ್ನು ಹೈಕೋರ್ಟ್ ಕಾಯ್ದಿರಿಸಿದೆ.
ಬುಧವಾರ ಈ ಅರ್ಜಿಯ ವಿಚಾರಣೆ ನಡೆಸಿದ ಪ್ರದೀಪ್ ಡಿ ವೈಂಗಣಕರ ಅವರಿದ್ದ ಏಕಸದಸ್ಯ ಪೀಠವು, ಈ ಕುರಿತಂತೆ ಇದೇ 9ರಂದು ಆದೇಶ ಪ್ರಕಟಿಸುವುದಾಗಿ ತಿಳಿಸಿತು.
ಸ್ವಾಮೀಜಿ ಪರ ಹಾಜರಿದ್ದ ವಕೀಲ ಶಂಕರ ಹೆಗಡೆ ಅವರು, ‘ಅರ್ಜಿದಾರರು ಈ ಪ್ರಕರಣದಲ್ಲಿ ಪದೇ ಪದೇ ಈ ರೀತಿ ನ್ಯಾಯಾಂಗದ ಅಧಿಕಾರಿಗಳ ವಿರುದ್ಧ ಆರೋಪ ಮಾಡುತ್ತಲೇ ಬಂದಿದ್ದಾರೆ. ಇದು ಅವರಿಗೆ ಹವ್ಯಾಸ ಆಗಿದೆ’ ಎಂದು ದೂರಿದರು.
‘ಪ್ರಕರಣವು ಈ ತನಕದ 14 ಮುದ್ದತುಗಳಲ್ಲಿ (ಹಿಯರಿಂಗ್) 4 ಕೋರ್ಟ್ಗಳ ಬದಲಾವಣೆ ಕಂಡಿದೆ. ವಿಚಾರಣೆ ಸರಿಯಾಗಿ ಆರಂಭವಾಗಲು ಬಿಡುತ್ತಿಲ್ಲ. ಅರ್ಜಿದಾರರು ಈವರೆಗೆ ಈ ಪ್ರಕರಣದಲ್ಲಿ ನಾಲ್ವರು ನ್ಯಾಯಾಂಗ ಅಧಿಕಾರಿಗಳು ಹಾಗೂ ನಾಲ್ವರು ತನಿಖಾಧಿಕಾರಿಗಳ ವಿರುದ್ಧ ಆರೋಪ ಮಾಡಿದ್ದಾರೆ. ಇದು ಅವರಿಗೆ ನ್ಯಾಯಾಂಗದ ಮೇಲೆ ವಿಶ್ವಾಸ ಇಲ್ಲ ಎಂಬುದನ್ನು ತೋರಿಸುತ್ತದೆ’ ಎಂದರು.