ಇಸ್ಲಾಮಾಬಾದ್ (ಐಎಎನ್ಎಸ್): 2008ರ ಮುಂಬೈ ದಾಳಿಯ ರೂವಾರಿ ಲಖ್ವಿ ಬಂಧನದ ಆದೇಶದ ಬಗ್ಗೆ ವಿವರಣೆ ನೀಡುವಂತೆ ಇಸ್ಲಾಮಾಬಾದ್ ಹೈಕೋರ್ಟ್ ಸೋಮವಾರ ಫೆಡರಲ್ ಮತ್ತು ಜಿಲ್ಲಾ ನ್ಯಾಯಾಧೀಶರಿಗೆ ನೋಟಿಸ್ ನೀಡಿದೆ.
ತಮ್ಮ ಕಕ್ಷಿದಾರರ ಬಂಧನಕ್ಕೆ ಮೂರನೇ ಬಾರಿಗೆ ಫೆಡರಲ್ ಮತ್ತು ಜಿಲ್ಲಾ ನ್ಯಾಯಾಲಯವು ಆದೇಶ ಹೊರಡಿಸಿವೆ ಎಂದು ಲಖ್ವಿ ಪರ ವಕೀಲರಾದ ರಿಜ್ವಾನ್ ಅಬ್ಬಾಸಿ ನ್ಯಾಯ-ಪೀಠದ ಗಮನಕ್ಕೆ ತಂದರು.
ಫೆಡರಲ್ ಮತ್ತು ಜಿಲ್ಲಾ ನ್ಯಾಯಾಧೀಶರಿಗೆ ಉತ್ತರಿಸುವಂತೆ ನೋಟಿಸ್ ನೀಡಿದ ನ್ಯಾಯಪೀಠವು ವಿಚಾರಣೆಯನ್ನು ಇದೇ 5ಕ್ಕೆ ಮುಂದೂಡಿತು.
‘ಅನುಮತಿ ಅಗತ್ಯ’: ತನ್ನ ಅನುಮತಿ ಇಲ್ಲದೆ ಲಖ್ವಿ ವಿರುದ್ಧ ಇತರ ಯಾವುದೇ ಪ್ರಕರಣ ದಾಖಲಿಸಬಾರದು ಎಂದು ಪಾಕಿಸ್ತಾನದ ಕೋರ್ಟ್ ಹೇಳಿದೆ.
ಲಖ್ವಿಯನ್ನು ಜೈಲಿನಲ್ಲಿಡಲು ಆತನ ವಿರುದ್ಧ ‘ತಪ್ಪು’ ಪ್ರಕರಣಗಳನ್ನು ದಾಖಲಿಸುವ ಸಾಧ್ಯತೆ ಇದೆ ಎಂದು ಲಖ್ವಿ ಪರ ವಕೀಲರು ವಾದಿಸಿದ ನಂತರ ಕೋರ್ಟ್ ಈ ಆದೇಶ ಹೊರಡಿಸಿದೆ.
ಭಯೋತ್ಪಾದನೆಗೆ ಸಂಬಂಧಿಸಿದ ವಿಶೇಷ ನ್ಯಾಯಾಲಯ ಲಖ್ವಿಗೆ ಕಳೆದ ಡಿಸೆಂಬರ್ನಲ್ಲಿ ಜಾಮೀನು ನೀಡಿತ್ತು. ಈ ಬಗ್ಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ನಂತರ ಕಾನೂನು ಸುವ್ಯವಸ್ಥೆ ಕಾಯ್ದೆಯನ್ವಯ ಲಖ್ವಿಯನ್ನು ಮತ್ತೆ ಬಂಧಿಸಿ ರಾವಲ್ಪಿಂಡಿ ಜೈಲಿನಲ್ಲಿ ಇಡಲಾಗಿತ್ತು. ಹೈಕೋರ್ಟ್ ಈ ಬಂಧನದ ಆದೇಶ ಅಮಾನತುಪಡಿಸಿದ್ದರಿಂದ ಆರೂವರೆ ವರ್ಷಗಳ ಹಿಂದಿನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಲಖ್ವಿಯನ್ನು ಮತ್ತೆ ಬಂಧಿಸಲಾಯಿತು.