ಬೆಂಗಳೂರು: ಬೆಂಗಳೂರಿನ ನ್ಯೂಡಾನ್ ಪುನರ್ವಸತಿ ಟ್ರಸ್ಟ್ ಮಾನವ ಕಳ್ಳಸಾಗಾಣಿಕೆಯಲ್ಲಿ ಭಾಗಿಯಾಗಿದೆ ಎಂಬ ಆರೋಪದ ಕುರಿತು ಸಿಐಡಿ ತನಿಖೆಗೆ ಆದೇಶಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಉಮಾಶ್ರೀ ತಿಳಿಸಿದರು.
ವಿಕಾಸಸೌಧದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಅವರು, ‘ಈ ಟ್ರಸ್ಟ್ನ ವ್ಯವಸ್ಥಾಪಕ ನಿರ್ದೇಶಕಿ ರುಕ್ಸಾನಾ ಹಸನ್ ಅವರು ರಾಜ್ಯ ಮಹಿಳಾ ರಕ್ಷಣಾ ನಿಲಯದಲ್ಲಿದ್ದ ಅಲ್ಪಸಂಖ್ಯಾತ ಸಮುದಾಯದ 15 ಮಹಿಳೆಯರನ್ನು ಕೌಶಲ ಅಭಿವೃದ್ಧಿ ತರಬೇತಿಗೆ ಕರೆದೊಯ್ದಿದ್ದರು. ಆರು ತಿಂಗಳ ಅವಧಿ ಬಳಿಕ ಈ ಮಹಿಳೆಯರನ್ನು ವಾಪಸ್ ಕಳಿಸದೇ ಇರುವುದು ಪತ್ತೆಯಾಗಿದೆ’ ಎಂದರು.
ತರಬೇತಿಗೆಂದು ಕರೆದೊಯ್ದಿದ್ದ ರೇಷ್ಮಾ ಎಂಬ ಮಹಿಳೆ ಎರಡೇ ದಿನದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ, ಆಕೆಯ ಸಾವಿನ ಬಗ್ಗೆ ಯಾವುದೇ ಮಾಹಿತಿಯೂ ಇಲ್ಲ. ರೇಷ್ಮಾ ಅವರನ್ನು ನಿವೃತ್ತ ಅರಣ್ಯಾಧಿಕಾರಿಯೊಬ್ಬರ ಮನೆಗೆ ಕೆಲಸಕ್ಕೆ ಕಳುಹಿಸಲಾಗಿತ್ತು ಎಂಬ ಆರೋಪವಿದೆ. ಈ ಎಲ್ಲ ಅಂಶಗಳ ಬಗ್ಗೆಯೂ ತನಿಖೆ ನಡೆಸುವಂತೆ ಸಿಐಡಿ ಪೊಲೀಸರನ್ನು ಕೋರಲಾಗುವುದು ಎಂದು ತಿಳಿಸಿದರು.
ಮಾಣಿಪ್ಪಾಡಿ ಮನೆಕೆಲಸಕ್ಕೆ?: ನ್ಯೂಡಾನ್ ಪುನರ್ವಸತಿ ಟ್ರಸ್ಟ್ನಲ್ಲಿದ್ದ ಸಲ್ಮಾ ಎಂಬ ಮಹಿಳೆ ನಾಪತ್ತೆ ಆಗಿರುವುದಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದರು.
ಸಲ್ಮಾ ಅವರನ್ನು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಅವರ ಮನೆಗೆ ಕೆಲಸಕ್ಕೆ ಕಳುಹಿಸಲಾಗಿತ್ತು ಎಂಬ ಆರೋಪದ ಬಗ್ಗೆ ಕೇಳಿದಾಗ, ‘ಅಂತಹ ಆರೋಪವಿದೆ. ಆ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಾರೆ’ ಎಂದು ಉತ್ತರಿಸಿದರು.
ನ್ಯೂಡಾನ್ ಪುನರ್ವಸತಿ ಟ್ರಸ್ಟ್ ಕಾನೂನು ಪ್ರಕಾರ ಕೆಲಸ ನಿರ್ವಹಿಸುತ್ತಿರಲಿಲ್ಲ ಎಂಬ ಆರೋಪವಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಸಂಸ್ಥೆಗೆ ನೋಟಿಸ್ ನೀಡಿದ್ದರು. ಆದರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಕ್ರಮ ಜರುಗಿಸಿರಲಿಲ್ಲ. ಪ್ರಕರಣದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.