ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಾಯತ್ ಬಲವರ್ಧನೆ: ಅನುಷ್ಠಾ ನದ ಸವಾಲುಗಳು

Last Updated 23 ನವೆಂಬರ್ 2014, 19:40 IST
ಅಕ್ಷರ ಗಾತ್ರ

ಪಂಚಾಯತ್ ರಾಜ್ಯ ವ್ಯವಸ್ಥೆಯ ಬಲ­ವರ್ಧನೆಗೆ ಬೇಕಾದ ತಿದ್ದುಪಡಿ­ಗಳನ್ನು ರಮೇಶ್‌­­ಕುಮಾರ್ ನೇತೃತ್ವದ ಸಮಿತಿ ಸೂಚಿ­ಸಿದೆ. ಆದರೆ ಇದಕ್ಕೆ ಬರುವ ಪಕ್ಷದ ಒಳಗಿನ ಮತ್ತು ಹೊರಗಿನ ವಿರೋಧ­ಗಳನ್ನು ಸಿದ್ಧರಾಮಯ್ಯ ಮತ್ತು ಎಚ್.ಕೆ. ಪಾಟೀಲ್ ಹೇಗೆ ನಿಭಾಯಿಸು­ತ್ತಾರೆ? ಇತಿಹಾಸದ ಪಾಠಗಳು ಮತ್ತು ವರ್ತ­ಮಾನದ ಪರಿಸ್ಥಿತಿಯ ಕುರಿತೊಂದು ಅವಲೋಕನ

ಕರ್ನಾಟಕದಲ್ಲಿ ಮೂರು ದಶಕಗಳ ಕಾಲ ನಡೆದಿರುವ ಪಂಚಾಯತ್ ರಾಜ್ ಪ್ರಯೋಗಕ್ಕೆ ಹಿಡಿದಿರುವ ಜಿಡ್ಡನ್ನು ತೊಳೆಯುವ ಕೆಲಸಕ್ಕೆ ಇದೀಗ ಕಾಲ ಬಂದಂತೆ ಕಾಣುತ್ತಿದೆ. ಅದಕ್ಕಾಗಿ ವಿಧಾನಸಭೆಯ ಮಾಜಿ ಅಧ್ಯಕ್ಷ ರಮೇಶ್‌ಕುಮಾರ್ ಅವರ ಹಿರಿತನದಲ್ಲಿ ನೇಮಿಸಲಾಗಿದ್ದ ಪಂಚಾಯತ್ ರಾಜ್ ಕಾನೂನು ತಿದ್ದುಪಡಿ ಸಮಿತಿ ತನ್ನ ವರದಿಯನ್ನು ಸಲ್ಲಿಸಿದೆ. ಅದನ್ನು ಶೀಘ್ರವಾಗಿ ಅನುಷ್ಠಾನ ಮಾಡಿದರೆ, ಕಾರಣಾಂತರಗಳಿಂದ ತನ್ನ ಮುಖ್ಯ ಗುರಿಯಿಂದ ವಿಮುಖ­­ವಾಗಿದ್ದ ಪಂಚಾಯತ್ ರಾಜ್ ವ್ಯವಸ್ಥೆ ಕಳೆದು­ಕೊಂಡ ತನ್ನ ಹೊಳಹನ್ನು  ಮರಳಿ ಪಡೆದು ಗಾಂಧೀಜಿಯ ಕನಸಾದ ಗ್ರಾಮ ಸ್ವರಾಜ್ಯ ಕಲ್ಪನೆಯನ್ನು ಸಾಕಾರ ಮಾಡುವಲ್ಲಿ ದಾಪುಗಾಲು ಹಾಕುವ ನಿರೀಕ್ಷೆ ಇದೆ. ಇಡೀ ದೇಶದಲ್ಲಿಯೇ ಮೊದಲ ಬಾರಿ ಅಧಿಕಾರ ವಿಕೇಂದ್ರಿಕರಣ ಪ್ರಯೋಗವನ್ನು ಕೈಗೊಂಡ ಕೀರ್ತಿಗೆ ಭಾಜನವಾಗಿದ್ದ ಕರ್ನಾಟಕವು ಗಾಂಧೀಜಿಯ ಸ್ವರಾಜ್ಯದ ಕಲ್ಪನೆಗೆ ಮೂರ್ತ ಸ್ವರೂಪ ಕೊಟ್ಟ ದೇಶದ  ಮೊದಲ ರಾಜ್ಯವೆಂಬ ಇನ್ನೊಂದು ಗರಿಯನ್ನು  ತನ್ನ ಕಿರೀಟಕ್ಕೆ ಸೇರಿಸಿಕೊಳ್ಳಬಹುದಾಗಿದೆ.

ಇದನ್ನು ಈಡೇರಿಸುವದಕ್ಕೆ  ಸರ್ಕಾರವು ಮಾಡ­ಬೇಕಾ­ಗಿ­ರುವದು ಇಷ್ಟೇ. ವರದಿಯನ್ನು ಒಪ್ಪಿ ಕರಡು ವಿಧೇಯಕ­ವನ್ನು ಮುಂದಿನ ತಿಂಗಳಲ್ಲಿ ಬೆಳಗಾವಿಯಲ್ಲಿ ನಡೆ­­ಯುವ ವಿಧಾನ­ಸಭಾ ಅಧಿವೇಶನದಲ್ಲಿ ಮಂಡಿಸಿ,  ಅನು­ಮೋದನೆ ಪಡೆಯಬೇಕು. ಇದರಿಂದ ಇನ್ನು ಕೆಲವೇ ತಿಂಗಳುಗಳಲ್ಲಿ ಬರಲಿರುವ ಪಂಚಾಯಿತಿ ಚುನಾ­­ವಣೆ­ಯಲ್ಲಿ ಆಯ್ಕೆಯಾದ ಸದಸ್ಯರಿಗೆ ತಮ್ಮ ಕರ್ತವ್ಯಗಳನ್ನು ಅರ್ಥಪೂರ್ಣವಾಗಿ ನಿರ್ವಹಿಸಲು ಉಪಯೋಗ­ವಾಗಬಹುದು. ವರದಿಯನ್ನು ಕಾರ್ಯಗತ ಮಾಡುವಲ್ಲಿ ವಿಳಂಬ ತಪ್ಪಿಸಲು ಸಮಿತಿಯೇ ಸೂಕ್ತ ತಿದ್ದುಪಡಿ ಕರಡನ್ನು ತಯಾರಿಸಿ ತನ್ನ ವರದಿಯ ಜೊತೆಗೆ ಸರ್ಕಾರಕ್ಕೆ ಸಲ್ಲಿಸಿದೆ. ಸಮಿತಿಯ ಅಧ್ಯಕ್ಷರಾದ ರಮೇಶ್‌ಕುಮಾರ್ ಅವರ ಆಶಯದಂತೆ ಎಲ್ಲವೂ ನಡೆದರೆ ಬೆಳಗಾವಿಯ ನಡೆಯಲಿರುವ ಮುಂದಿನ ವಿಧಾನಸಭೆಯ ಅಧಿವೇಶನದಲ್ಲಿ ಇದು ಪಾಸಾಗಬೇಕು.

ಹತ್ತಿಗೆ ನೂರು ಕುತ್ತು ಎನ್ನುವುದು  ನಾಣ್ಣುಡಿ ಪಂಚಾ­ಯತ್ ರಾಜ್ ಕಾನೂನಿಗೂ ಅನ್ವಯಿಸುತ್ತದೆ. 1983ರಲ್ಲಿ ಮಾಡಿದ ಮೊದಲ ಕಾನೂನು ನಾಲ್ಕು ವರ್ಷಗಳ ಗಜಗರ್ಭವಾಸ ಅನುಭವಿಸಬೇಕಾಯಿತು.  1993ರ ಕಾನೂನು ಸಂವಿಧಾನದ 73ನೆಯ ತಿದ್ದು­ಪಡಿಯ ಹಿನ್ನೆಲೆಯಲ್ಲಿ ಬೇಗ ಬಂದರೂ ಅದರ ಅನುಷ್ಠಾನಕ್ಕೆ ಒಂದು ವರ್ಷ ಕಾಯಬೇಕಾಯಿತು. ಗ್ರಾಮ ಪಂಚಾಯಿತಿ ಚುನಾವಣೆ ಪರಿಣಾಮದ ಹಿನ್ನೆಲೆಯಲ್ಲಿ ಅಂದಿನ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆ ನಡೆಸಲು ಹಿಂದೇಟು ಹೊಡೆದರು. ಅಂದಿನ ಗ್ರಾಮೀಣಾ­ಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮಂತ್ರಿ, ಎಂ ವೈ ಘೋರ್ಪಡೆಯವರು ಬೇಗ ಚುನಾ­ವಣೆ ನಡೆಸದಿದ್ದರೆ ರಾಜೀನಾಮೆ ಕೊಡುವದಾಗಿ ಬೆದರಿಸಿ­ದರೂ ಮೊಯ್ಲಿ ರಾಜಿನಾಮೆ ಪಡೆದರೇ ಹೊರತು ಬೇಗ ಚುನಾವಣೆ ನಡೆಸಲಿಲ್ಲ. ಎಸ್.ಎಂ.ಕೃಷ್ಣ ಅವರ ಅವಧಿಯಲ್ಲಿ ಈ ಕಾನೂನಿಗೆ ಆಮೂಲಾಗ್ರ ತಿದ್ದುಪಡಿಯ ಅಗತ್ಯ ಕಂಡ ಘೋರ್ಪಡೆಯವರು ಅದರೆ ಕರಡನ್ನು ತಯಾರಿಸಿದರೂ ಉಪಯೋಗ­ವಾಗ­ಲಿಲ್ಲ. ಆಗ ಮುಖ್ಯಮಂತ್ರಿಯಾಗಿದ್ದ ಮುಖ್ಯಮಂತ್ರಿ ಎಸ್. ಎಂ ಕೃಷ್ಣರವರ ನಿರಾಸಕ್ತಿಯಿಂದ ಅದು ಹೊರ­ಬರಲೇ ಇಲ್ಲ.  ಕೇಂದ್ರದಲ್ಲಿ ಪಂಚಾಯತ್ ರಾಜ್ ಮಂತ್ರಿ­ಯಾಗಿದ್ದ ಮಣಿಶಂಕರ್ ಅಯ್ಯರ್ ಹೈಕ­ಮಾಂಡ್ ಶಕ್ತಿ ಉಪಯೋಗಿಸಿ ಕರ್ನಾಟಕದ ಕಾಂಗ್ರೆಸ್ಸಿ­ಗರ ಕಿವಿ ಹಿಂಡಿದ ನಂತರ ಈ ಕಾನೂನನ್ನು ಪಾಸಾ­ಯಿತು. ಪಂಚಾಯತ್ ರಾಜ್ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರ ಕೊಡುವ ಈ ಹೊಸ ಕಾನೂನು ಜಾರಿಯಾದದ್ದು ಮತ್ತೂ ವರ್ಷದ ನಂತರ ಅಂದರೆ ೨೦೦೪ರ ಸಮ್ಮಿಶ್ರ ಸರ್ಕಾರ ಬಂದಮೇಲೆ.  ಅದಕ್ಕೆ ಕಾರಣ­ವಾದದ್ದು ಆಗ ಭರವಸೆಗಳ ಸಮಿತಿಯ ಅಧ್ಯಕ್ಷ­ರಾದ ಡಿ. ಆರ್ ಪಾಟೀಲರು ಇದನ್ನು ಎತ್ತಿ­ಕೊಂಡು ಮಾತನಾಡಲು ಆರಂಭಿಸಿದ ಮೇಲೆ.

ಈಗ ಬರುತ್ತಿರುವವುದು ನಾಲ್ಕನೆಯ ತಿದ್ದುಪಡಿ ಮಸೂದೆ. ಇದರೆ ಹಣೆಬರಹ ಹೇಗಿದೆ ಎನ್ನುವದನ್ನು ಕಾದು ನೋಡಬೇಕು. ಇದನ್ನು  ಶೀಘ್ರವಾಗಿ ಮಾಡ­ಬೇಕೆಂಬ ಇಚ್ಛೆ ಸರ್ಕಾರಕ್ಕೆ  ಇದೆ ಎಂಬ ತಿದ್ದುಪಡಿ ಸಮಿತಿ ಅಧ್ಯಕ್ಷರಾದ ರಮೇಶ್‌ಕುಮಾರ್ ಅವರ  ನಂಬಿಕೆ­ಯಂತೆ ಎಲ್ಲವೂ ನಡೆದರೆ ಮುಂದಿನ ವರ್ಷ ಬರ­ಲಿರುವ ಪಂಚಾಯತ್ ರಾಜ್ ಸಂಸ್ಥೆಗಳ  ಚುನಾವಣೆ­ಗಳು ಹೊಸ ಕಾನೂನಿನಂತೆ ನಡೆದು ಬದ­ಲಾವಣೆಯ ಶಕೆಯೊಂದು ಆರಂಭ­ವಾಗ­ಬಹುದು. ಆದರೆ ಇದನ್ನು ಶಾಸಕಾಂಗವು ನಡೆಸಿ­ಕೊಡುತ್ತದೆಯೇ? ಇದು ಯಕ್ಷ ಪ್ರಶ್ನೆ. ಬಹುಪಾಲು ಶಾಸಕರು ಮತ್ತು ಮಂತ್ರಿಗಳು ಹೊಸ ತಿದ್ದುಪಡಿಗಳಿಗೆ ವಿರುದ್ಧವಾಗಿದ್ದಾ­ರೆಂಬುದು ಬಹಿರಂಗ ಸತ್ಯ.  ಶಾಸಕರಂತೂ ಇದನ್ನು ಪಕ್ಷಾತೀತ­ವಾಗಿ ವಿರೋಧಿಸುತ್ತಾರೆ. ಈ ವಿರೋಧಕ್ಕೆ ಸೈದ್ಧಾಂತಿಕತೆ­ಗಳೇನೂ ಇಲ್ಲ. ಪಂಚಾಯತ್ ರಾಜ್ ವ್ಯವಸ್ಥೆ ಬಲ­ಗೊಂಡರೆ ತಮ್ಮ ಅಧಿಕಾರಕ್ಕೆ ಎಲ್ಲಿ ಸಂಚಕಾರ ಬಂದೀತೋ ಎಂಬ ಅಳುಕು ಈ ವಿರೋಧದ ಹಿಂದಿದೆ.

೧೯೮೩ರ ಮೊದಲ ವಿಧೇಯಕ ಪಕ್ಷದ ಒಳಗಿನವರು ಮತ್ತು ಹೊರಗಿನವರೆಲ್ಲರ ‘ಸಾಮೂಹಿಕ ಪ್ರಯತ್ನ’­ದಿಂದ ಮೂಲೆಗುಂಪಾ­ಗುವ ಪ್ರಸಂಗ ಬಂದಾಗ ಅವ­ರನ್ನು ಓಲೈಸಲು ಶಾಸಕರಿಗೂ ಸಂಸದರಿಗೂ ಅಂದಿನ ಜಿಲ್ಲಾ ಪರಿಷತ್ತಿನ ಪದನಿಮಿತ್ತ ಸದಸ್ಯ ಸ್ಥಾನ ಕೊಟ್ಟದ್ದು ಈಗ ಇತಿಹಾಸ. ಎರಡು ಹಂತದಿಂದ ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆ ಬಂದಾ­ಗಲೂ ಇದೇ ಓಲೈಕೆ  ಮುಂದುವರಿ­ಯಿತು. ಒಂದು ಚುನಾಯಿತ ಸಭೆಗೆ ಆರಿಸಿ ಬಂದ ಸದಸ್ಯರು ಬೇರೊಂದು ಚುನಾಯಿತ ಸಭೆಯ ಪದನಿಮಿತ್ತ ಸದಸ್ಯರಾಗುವುದು ಅಸಂಗತ. ರಾಜ­ಕೀಯ ಅನುಕೂಲಕ್ಕಾಗಿ ಅಸಂಗತವನ್ನು ಸಂಗತ­ಮಾಡುವ ಅನಿವಾರ್ಯತೆ ಬರುವದರ ನಿದರ್ಶನ­ವಿದು. ಶಾಸಕರಿಗೆ ಇನ್ನೂ ಒಂದು ಆಶೆ ಇತ್ತು. ಅದೆಂ­ದರೆ ಇದರ ಮೂಲಕ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾ­ಯಿತಿಗಳ ಅಧ್ಯಕ್ಷರಾಗುವುದು. ಅದೊಂದಕ್ಕೆ  ಸರ್ಕಾರ ಸೊಪ್ಪು ಹಾಕಲಿಲ್ಲ.

ಪದನಿಮಿತ್ತ ಸ್ಥಾನದಿಂದ ಪಂಚಾಯತ್ ರಾಜ್ ಸಂಸ್ಥೆ­ಗಳಿ­ಗಾಗಲಿ ಶಾಸಕರಿಗಾಗಲೀ ಯಾವುದೇ ಉಪ­ಯೋಗ­ವಾಗಿಲ್ಲ.  ಎಷ್ಟೋ ಬಾರಿ  ಶಾಸಕರು ಪಂಚಾ­ಯತ್ ರಾಜ್ ಸಂಸ್ಥೆಗಳ ಸಭೆಗೆ ಹಾಜರೂ ಆಗುವು­ದಿಲ್ಲ.  ಈ ಸಂಸ್ಥೆಗಳ ಸಮಸ್ಯೆಗಳನ್ನು ವಿಧಾನಮಂಡಲದ ಅಧಿ­ವೇಶನಗಳಲ್ಲಿ ಎತ್ತಿ ಸರ್ಕಾರದ ಗಮನ ಸೆಳೆದು ತಮ್ಮ ಉಪಯುಕ್ತತೆಯ್ನೂ ತೋರಿಸಿಲ್ಲ. ಅದರ ಬದಲು ಅವಕಾಶ ಸಿಕ್ಕಾಗಲೆಲ್ಲ ­ಪಂಚಾ­ಯತ್ ರಾಜ್ ಸಂಸ್ಥೆ­ಗಳನ್ನು ಹೀಗಳೆದು ಅವರಿಗೆ ಕೊಟ್ಟಿರುವ ಅಧಿಕಾರ ಹಿಂಪಡೆ­­ಯುವದರ ಬಗ್ಗೆಯೇ ಮಾತನಾಡುತ್ತಲೇ ಇರು­ತ್ತಾರೆ. ಮೊದಲ ಪಂಚಾಯತ್ ರಾಜ್ ಮತ್ತು  ಗ್ರಾಮೀಣಾಭಿವೃದ್ಧಿ ಮಂತ್ರಿ ದಿ. ನಜೀರ ಸಾಬ್‌ರನ್ನು ಬಿಟ್ಟರೆ  ಉಳಿದ ಯಾವ ಮಂತ್ರಿ­ಗಳೂ ಪಂಚಾಯತ್ ರಾಜ್ ಸಂಸ್ಥೆಗಳ ಮಿತ್ರ, ಮಾಗದರ್ಶಕ ಮತ್ತು ತತ್ವಜ್ಞಾನಿಯ ಪಾತ್ರ ವಹಿಸಲಿಲ್ಲ.

ದಿ. ಎಂ. ವೈ ಘೋರ್ಪಡೆಯವರಿಗೆ ಪಂಚಾ­ಯತ್ ರಾಜ್ ವ್ಯವಸ್ಥೆಯ ಬಗ್ಗೆ  ಹೆಚ್ಚಿನ  ಸದಾಶಯ ಸಹಾನು­ಭೂತಿಗಳಿದ್ದರೂ ಅವರ ಲಕ್ಷ್ಯವೆಲ್ಲ ಅಧಿಕಾರಿಗಳ ಮಾರ್ಗ­ದರ್ಶನದಲ್ಲಿ ಬೆಳೆಯುವ ಪಂಚಾಯತ್ ರಾಜ್ ವ್ಯವಸ್ಥೆ ಇತ್ತೇ ಹೊರತು ಪ್ರಜೆಗಳ ಸಹಭಾಗಿತ್ವ­ದಿಂದ ಬೆಳೆಯುವಂತಹ ವ್ಯವಸ್ಥೆಯಲ್ಲ. ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ನಿಂದ ತೊಡಗಿ ಎಲ್ಲಾ ರಾಜಕೀಯ ಪಕ್ಷಗಳೂ ಇದರಲ್ಲಿ ನಿರಾ­ಸಕ್ತ­ರಾಗಿರು­­ವುದು ರಹಸ್ಯವಾಗಿಲ್ಲ. ಇದಕ್ಕೆ ಹೊರ­ತಾಗಿರುವವರು ನಜೀರ್‌ಸಾಬ್ ಅವರ ಅವಧಿಯಲ್ಲಿ ಆದ ಬದಲಾವಣೆ­ಗಳನ್ನು ಗಮ­ನಿಸಿ ಅದು ಮುಂದುವರಿಯಬೇಕೆಂಬ ಸದಾ­ಶಯ­­ವುಳ್ಳ ಬೆರಳೆಣಿಕೆಯ ರಾಜಕಾರಣಿಗಳು ಮಾತ್ರ. ಅದರಲ್ಲಿ ಮುಖ್ಯಮಂತ್ರಿಯೂ ಸೇರಿದ್ದಾರೆ. ಆದ್ದ­ರಿಂದಲೇ ಕಾನೂನಿನ ತಿದ್ದುಪಡಿಗೆ ಒಂದು ಸಮಿತಿ ರಚನೆಯಾಯಿತು.

ಪರಿಸ್ಥಿತಿ ಹೀಗಿರುವಾಗ ತಿದ್ದುಪಡಿ ಸಮಿತಿಯ ಅಧ್ಯಕ್ಷರ ಆಶಯದಂತೆ ಶಾಸಕರು  ವರ್ತಿಸಿ, ಪಂಚಾ­ಯತ್ ರಾಜ್ ಆಂದೋಲನದಲ್ಲಿ ಹೊಸ ಮನ್ವಂತರ ಆರಂಭವಾಗಲು ಅನುವು ಮಾಡಿ­ಕೊಡುತ್ತಾರೆಯೇ? ಮುಖ್ಯ ಮಂತ್ರಿ ಸಿದ್ದರಾಮಯ್ಯ ಮತ್ತು ಗ್ರಾಮೀಣಾ­ಭಿವೃದ್ದಿ ಮತ್ತು ಪಂಚಾಯತ್ ರಾಜ್ ಮಂತ್ರಿಗಳಿಗೆ ಪ್ರಾಮಾ­ಣಿಕವಾದ ಆಸಕ್ತಿ  ಇದೆ. ಕಾಂಗ್ರೆಸ್‌ ಪಕ್ಷದಲ್ಲಿ­ರುವ ವಿಕೇಂದ್ರೀಕರಣದ ನೀತಿಯ ರೂವಾರಿ, ಮಾಜಿ ಮಂತ್ರಿ ಮಣಿಶಂಕರ್ ಅಯ್ಯರ್  ಸಮಿತಿಯ ವರದಿಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಇದರಿಂದ ಶಾಸಕರ ಮನಸ್ಸಿನಲ್ಲಿ ಭದ್ರವಾಗಿ ನಿಂತಿರುವ ಮಾನಸಿಕ ಗೋಡೆ­ಯನ್ನು ಭೇದಿಸಲು ಸಾಧ್ಯವೇ? ಕಾಂಗ್ರೆಸ್ ಶಾಸಕರ ಮನವೊಲಿಸುವ ಕಠಿಣ ಕ್ರಮದಲ್ಲಿ ಸಿದ್ದರಾಮಯ್ಯ­ನವರು  ವಿಜಯ ಸಾಧಿಸಿದರೂ ವಿರೋಧಿ ಪಕ್ಷದವ­ರನ್ನು ಒಲಿಸಿಕೊಳ್ಳುವುದು ಹೇಗೆ? ತಮ್ಮ ಪಕ್ಷದ ಸದಸ್ಯರು ತಿದ್ದುಪಡಿ ಮಸೂದೆ ಪಾಸು ಮಾಡುವಲ್ಲಿ ಸಹಕರಿಸು­ತ್ತಾರೆ ಎಂದು ವಿರೋಧ ಪಕ್ಷದ ನಾಯಕ­ರಾದ ಜಗದೀಶ ಶೆಟ್ಟರ್ ಹೇಳಿದುದನ್ನು  ವಿಕೇಂದ್ರೀ­ಕರಣದ ಕಲ್ಪನೆಗೆ ಹೊಸಬರಾದ ಅವರ ಪಕ್ಷದ ಶಾಸಕರು ಉಳಿಸಿಕೊಡುವರೇ? ತನ್ನಲ್ಲಿರುವ ಧುರೀ­ಣತ್ವದ ಗೊಂದಲಕ್ಕೆ ಪರಿಹಾರ ಕಂಡು­ಕೊಳ್ಳುವಲ್ಲಿಯೇ ಮಗ್ನವಾಗಿರುವ ಜಾತ್ಯತೀತ ಜನತಾದಳಕ್ಕೆ  ಈ ವಿಷಯದ ಬಗ್ಗೆ ಆಲೋಚಿ­ಸುವ ವ್ಯವಧಾನವೆಲ್ಲಿದೆ? ಮೇಲಾಗಿ ದೇವೇ­ಗೌಡರು ವಿಕೇಂದ್ರೀಕರಣ ಪ್ರಯೋಗ­ವನ್ನು ರಾಮಕೃಷ್ಣ ಹೆಗಡೆ–ನಜೀರ್ ಸಾಬ್ ಅವರ ಕಾಲ­­ದಲ್ಲಿಯೇ ವಿರೋಧಿಸಿದವರು. ಅವರ ವಿಚಾರ ಬದಲಾಗಿದೆ ಎನ್ನುವ ಯಾವ ಸೂಚನೆಗಳೂ ಇಲ್ಲ.

ಶಾಸಕರ ಮತ್ತು ರಾಜಕೀಯ ಪಕ್ಷಗಳ ಗೊಂದಲ ನಿಲುವುಗಳು ಏನೇ ಇರಲಿ. ತಿದ್ದುಪಡಿ ಸಮಿತಿ ನೀಡಿ­ದುದು ಒಂದು ಉತ್ತಮ ವರದಿ ಎನ್ನುವದರಲ್ಲಿ ಯಾವ ಅನುಮಾನಗಳೂ ಇಲ್ಲ.  ರಾಮಕೃಷ್ಣ ಹೆಗಡೆ–ನಜೀರ್ ಸಾಬ್ ಕನಸಿನ ಕೂಸಾಗಿ, ವಿಕೇಂದ್ರೀಕರಣದ ಪ್ರಯೋ­ಗದ ಮೊದಲ ಮಸೂದೆ ಜಾರಿಗೆ ಬಂದು ಅದರನ್ವಯ ಎರಡು ಹಂತದ ಚುನಾಯಿತ ಸಂಸ್ಥೆಗಳು ಕಾಲಿಟ್ಟದ್ದು 1987ರಲ್ಲಿ.
ವಿಕೇಂದ್ರೀಕರಣದ ಮುಖ್ಯ ಸಿದ್ಧಾಂತ­ಗಳಾದ, ಜನರ ಸಾರ್ವಭೌಮತ್ವವನ್ನು ಸಾಬೀತು ಪಡಿಸು­ವುದಕ್ಕೆ ಅಗತ್ಯವಿರುವ ಸಾಂಸ್ಥಿಕ ರೂಪ ಇದರ­ಲ್ಲಿತ್ತು.  ಜಿಲ್ಲೆಯ ಅಭಿವೃದ್ಧಿ ಬೇಡಿಕೆಗಳನ್ನು ನೋಡಿ­ಕೊಳ್ಳುವ ಜಿಲ್ಲಾ ಸರ್ಕಾರವಾದ ಜಿಲ್ಲಾ ಪರಿಷತ್ತು ಮತ್ತು ಗ್ರಾಮ ಮಟ್ಟದಲ್ಲಿ ಇದನ್ನು ಸಾಧಿಸುವ ಮಂಡಲ ಪಂಚಾಯಿತಿ ಮೊದಲ ಕಾನೂನಿನಲ್ಲಿ ನಿಚ್ಚಳ­ವಾಗಿತ್ತು. ಮೊದಲ ಚುನಾವಣೆಗಳು ನಡೆದು ಜಿಲ್ಲಾ ಪರಿಷತ್ತು ಮತ್ತು ಮಂಡಲ ಪಂಚಾಯಿತಿಗಳು ಕಾರ್ಯ ನಿರ್ವಹಿಸಲು ಶುರುಮಾಡಿದಾಗ ರಾಜ್ಯದ ಗ್ರಾಮೀಣ ಭಾಗದಲ್ಲಿ ಆಡಳಿತ ಮತ್ತು ರಾಜಕೀಯದ ವಿಕೇಂದ್ರೀ­ಕರಣದ ಹೊಸ ಗಾಳಿ ಬೀಸಲು ತೊಡಗಿತ್ತು.

ಈ ರೀತಿ ಹೊಸ ವಾತವಾರಣವಿದ್ದದ್ದು ಬರೀ ಎರಡು ವರ್ಷಗಳ ಕಾಲ ಮಾತ್ರ. 1989ರ ವಿಧಾನ­ಸಭಾ   ಚುನಾವಣೆಯಲ್ಲಿನ ಜನತಾ­ದಳದ ಪರಾಭವ ಹೊಸ ಪಂಚಾಯತ್ ರಾಜ್ ಪ್ರಯೋಗಕ್ಕೆ ಹಿನ್ನಡೆ ತಂದಿತು. ಅದರ ನಂತರ ಈ ವ್ಯವಸ್ಥೆ ಚೇತರಿಸಿ ಕೊಂಡಿಲ್ಲ. ನಜೀರ್ ಸಾಬ್ ಅವರ ಕಾಲದಲ್ಲಿಯೇ ಕಾಯ್ದೆಯ ಲೋಪ­­ದೋಷ­ಗಳನ್ನು ಗುರುತಿಸಿ ಸರಿಪಡಿಸುವ  ದೃಷ್ಟಿಯಿಂದ  ತಜ್ಞರ ಸಮಿತಿಯನ್ನು ರಚಿಸ­ಲಾ­ಗಿತ್ತು.  ಆ ಸಮಿತಿ ತನ್ನ ವರದಿ ಕೊಡು­ವುದ­ರೊ­ಳಗೆ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ರಾಜೀ­ನಾಮೆ ಕೊಟ್ಟಿದ್ದರು. ನಜೀರ್ ಸಾಬ್ ಕೂಡಾ ವಿಧಿ­ವಶರಾದರು. ಹೆಗಡೆ­ಯವರ ಸ್ಥಾನಕ್ಕೆ ಬಂದ ಎಸ್ ಅರ್ ಬೊಮ್ಮಾಯಿ­ಯವರ ಸರ್ಕಾರ ವರದಿ­­ಯನ್ನು ಪರಿಶೀಲಿಸುವದರೊಳಗೆ ಸರ್ಕಾ­ರವೇ ಉರು­ಳಿತು. ಚುನಾವಣೆಯ ನಂತರ ಬಂದ ಕಾಂಗ್ರೆಸ್ ಸರ್ಕಾರ ಜಿಲ್ಲಾ ಪರಿಷತ್ತು ಮತ್ತು ಮಂಡಲ ಪಂಚಾಯಿತಿ­ಗಳನ್ನು ಮಲಮಕ್ಕಳಂತೆ ಕಂಡಿದ್ದ­ರಿಂದ  ವಿಕೇಂದ್ರೀಕರಣ ಪ್ರಯೋಗ ಮೂಲೆ ಗುಂಪಾಯಿತು.

ತನ್ನ ಐದು ವರ್ಷ ಆಳ್ವಿಕೆಯ ಕೊನೆಯ ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ಸಂವಿಧಾನದ ೭೩ನೆಯ ತಿದ್ದು­ಪಡಿಯ ಹಿನ್ನೆಲೆಯಲ್ಲಿ ಇದ್ದ ಪಂಚಾಯಿತಿ ಕಾನೂನಿಗೆ ತಿದ್ದುಪಡಿ  ತರುವುದರ ಬದಲು ಹೊಸ ಕಾನೂನನ್ನೇ ರಚಿಸಿ ಎರಡು ಹಂತದ ಬದಲು ಮೂರು ಹಂತದ ವ್ಯವಸ್ಥೆ­ಯನ್ನು ಜಾರಿಗೆ ತಂದಿತು. ಅದರನ್ವಯ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ನಡೆಸ­ಲಾಯಿ­ತಾ­ದರೂ  ಮುಂದಿನ ಎರಡು ಹಂತಗಳ ಅಂದರೆ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಗಳ ಚುನಾ­ವಣೆ­ಯನ್ನು ಮಂತ್ರಿಗಳ ಆಗ್ರಹವನ್ನು ಅಲಕ್ಷಿಸಿ ಮುಂದೂ­ಡ­­ಲಾಯಿತು.  1994ರಲ್ಲಿ ಮರಳಿ ಅಧಿ­ಕಾರಕ್ಕೆ ಬಂದ ದೇವೇಗೌಡರ ನೇತೃತ್ವದ ಜನತಾ ದಳದ ಸರ್ಕಾರ ಉಳಿದೆರಡು ಹಂತದ ಚುನಾವಣೆ­­ಗಳನ್ನು ನಡೆಸಿತು. ಹೊಸ ಕಾನೂನಿ­ನಲ್ಲಿ ಹಳೆಯ ಕಾನೂನಿನ ಅನೇಕ ಮುಖ್ಯ ಅಂಶಗಳು ಬಿಟ್ಟು ಹೋಗಿದ್ದವು.  ಮುಖ್ಯ­ವಾಗಿ ಜಿಲ್ಲಾ ಸರ್ಕಾರ­ವೆಂಬ ಕಲ್ಪನೆಯನ್ನು ಸಂಪೂರ್ಣ ಕೈಬಿಟ್ಟಿತಲ್ಲದೇ ಹಳೆಯ ಹುದ್ದೆಗಳ ಹೆಸರು­ಗಳನ್ನು ಕಾರ್ಯ­ವ್ಯಾಪ್ತಿಯನ್ನು ಬದಲು ಮಾಡಿ ಇಡೀ ವ್ಯವಸ್ಥೆಯನ್ನೇ ನಿರ್ವೀರ್ಯಗೊಳಿಸಲಾಗಿತ್ತು.

ಜಿಲ್ಲೆಯ ಸಮಗ್ರ ಅಭಿವೃದ್ದಿಯ ಜವಾಬ್ದಾರಿ ಹೊತ್ತಿರುವ ಜಿಲ್ಲಾ ಪರಿಷತ್ತುಗಳ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳನ್ನು ಮುಖ್ಯ ಕಾರ್ಯದರ್ಶಿ­ಯೆಂದು ಕರೆಯುವ ಹಾಗು ಆ ಹುದ್ದೆಗಳಿಗೆ ಜಿಲ್ಲಾಧಿ­ಕಾರಿಗೂ ಹಿರಿಯರಾದ ಐಎಎಸ್ ಅಧಿಕಾರಿಯನ್ನು ನಿಯೋ­ಜಿಸಬೇಕೆಂಬ ಹೆಗಡೆ ಸರ್ಕಾರದ ವಿಚಾರವನ್ನು ಕೈಬಿಟ್ಟು ಮೊದಲಿನಂತೆ ಜಿಲ್ಲಾಧಿಕಾರಿಗಳ ಪಾಮುಖ್ಯ­ವನ್ನು ಪ್ರತಿಬಿಂಬಿಸುವ ಮೊದಲಿನ ಆಡಳಿತ ಪದ್ಧತಿ­ಯನ್ನು ಶುರುಮಾಡಿತು. ಒಟ್ಟಿನ ಮೇಲೆ ವಿಕೇಂದ್ರಿಕರಣದ ಬದಲಾಗಿ ಅದರ ಹೆಸರಿನಲ್ಲಿ ಮೊದಲಿನಂತಿದ್ದ, ಕೇಂದ್ರೀಕೃತ ಆಡಳಿತ ಪದ್ಧತಿ ಜಾರಿಗೆ ಬಂದಿತ್ತು.

ಕಾಂಗ್ರೆಸ್ ತಂದ ಕಾಯ್ದೆಯಲ್ಲಿನ ನ್ಯೂನತೆ­ಗಳನ್ನು ಅಪಭ್ರಂಶಗಳನ್ನು ಗುರುತಿಸಿ ಮೊದಲಿನ ಕಾನೂನಿಂದ ಮಾಯವಾಗಿರುವ ವಿಕೇಂದ್ರೀ­ಕರಣದ ಹೊಳಹನ್ನು ತರಬೇಕೆಂಬ ಹೆಗಡೆ­ಯ­ವರ ಕೂಗೂ ಅವರ ಪಕ್ಷದ ಸರ್ಕಾರ­ದಲ್ಲಿಯೇ ಅರಣ್ಯರೋಧನ­ವಾದು­ದನ್ನು ಈ ಪ್ರಯೋಗದ ಆಧ್ವರ್ಯುಗಳಾದ ಹೆಗಡೆ­ಯವರೇ ನೋಡ­ಬೇಕಾ­ಯಿತು. ಗಾಯದ ಮೇಲೆ ಬರೆ ಎಳೆಯು­ವಂತೆ ಪಂಚಾಯತ್ ರಾಜ್ ಸಂಸ್ಥೆಗಳ ಅಧ್ಯಕ್ಷ ಉಪಾಧ್ಯಕ್ಷರ ಅವಧಿ­­ಯನ್ನು ಐದು ವರ್ಷದಿಂದ ಇಪ್ಪತ್ತು ತಿಂಗಳಿಗೆ ಇಳಿಸಿ ಅ ಹುದ್ದೆಗಳನ್ನು ಅಪಮೌಲ್ಯ ಗೊಳಿಸಿದ ಪ್ರಖ್ಯಾತಿ(?)ಯನ್ನೂ ಜನತಾದಳದ ಸರ್ಕಾರ ಪಡೆಯಿತು ಅಂದಿನಿಂದ ಈ ಮಹತ್ವದ  ಪ್ರಯೋ­­­ಗಕ್ಕೆ ಹಿಡಿಯ­ಲಾರಂ­ಭಿಸಿದ ಜಿಡ್ಡು ಇಂದಿನ ತನಕ ಮುಂದು­ವರಿಯುತ್ತಲೇ ಬಂದಿದೆ.

“ಎಂ ವೈ ಘೋರ್ಪಡೆಯವರು ಬಹಳ ಜಾಗರೂಕತೆ­ಯಿಂದ ರೂಪಿಸಿದ 1993ರ ಕರ್ನಾಟಕ ಪಂಚಾಯತ್ ರಾಜ್ ಕಾನೂನು ಹಳತಾಗಿದ್ದು ಗ್ರಾಮ ಸ್ವರಾಜ್ಯದ ಕಲ್ಪನೆ­ಯಂತೆ ಅಧಿಕಾರ ವಿಕೇಂದ್ರೀಕರಣವಾಗುವುದರ ಬದಲು, ಹಲವಾರು ತಿದ್ದುಪಡಿ ಮತ್ತು  ಸರ್ಕಾರಿ ಆಜ್ಞೆಗಳ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಕಾರ್ಯ­ಕ್ರಮಗಳನ್ನು ತಂದು ಕೊಡುವಂತಹದಾಗಿದೆ. ಈ ವ್ಯವಸ್ಥೆ­­ಯನ್ನು ಸಂಪೂರ್ಣವಾಗಿ ಬದಲು ಮಾಡುವ ಅವಶ್ಯ­ಕತೆ ಇದೆ. ಇದರ ಬದಲಾಗಿ ಹೊಸ ಕಾನೂನು ರಚಿಸು­ವುದು ಸೂಕ್ತ. ಆದರೆ ಮುಂಬ­­­ರುವ ಪಂಚಾಯತ್ ಚುನಾವಣೆಯ ದೃಷ್ಟಿ­­­ಯಿಂದ ಹೊಸ ಕಾನೂನು ಮಾಡುವ ಬದಲು ತಿದ್ದುಪಡಿಯನ್ನು ಮಾಡಲು ನಿರ್ಧ­ರಿಸ­­­ಲಾಯಿತು” ಎಂದು ತಿದ್ದುಪಡಿಯ ಸಮಿತಿಯ ಅಧ್ಯಕ್ಷ ರಮೇಶ್‌ಕುಮಾರ್ ಹೇಳುತ್ತಾರೆ.

ಒಟ್ಟಿನಲ್ಲಿ ತನ್ನ ವರದಿಯ ಮೂಲಕ ತಿದ್ದುಪಡಿ ಸಮಿತಿಯು ನಜೀರ್‌ಸಾಬ್ ಅವರ ಕಾಲದಲ್ಲಿ ರೂಪಿಸಲಾಗಿದ್ದ ಕಾನೂನಿನಲ್ಲಿದ್ದ ಹಲವು ಅಂಶಗಳನ್ನು ಮತ್ತೆ ತಂದಿದ್ದಾರೆ.  ಉದಾಹರಣೆಗೆ  ಜಿಲ್ಲಾ ಪಂಚಾ­ಯಿತಿ­ಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಮುಖ್ಯ ಕಾರ್ಯದರ್ಶಿಗಳೆಂದು ಪುನರ್‌­ನಾಮಕರಣ ಮಾಡ­ಲಾಗಿದೆ. ಜೊತೆಗೆ ಅಧ್ಯಕ್ಷರಿಗೆ ರಾಜ್ಯ ಮಂತ್ರಿ ಸ್ಥಾನವನ್ನೂ ಕೊಟ್ಟು ಜಿಲ್ಲಾ ಪಂಚಾಯಿತಿಗಳು ಆಯಾ ಜಿಲ್ಲೆಗಳ ಮಟ್ಟಿಗೆ ಜಿಲ್ಲಾ ಸರ್ಕಾರಗಳೇ ಎಂಬ  ಭಾವನೆ ಜನರ ಮನಸ್ಸಿನಲ್ಲಿ ಉಳಿಯುವಂತೆ ಮಾಡಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ  ತಾಲೂಕು ಪಂಚಾ­ಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿ­ಗಳಿಗೂ ಮುಖ್ಯ ಕಾರ್ಯದರ್ಶಿಯೆಂದು ಮರು ನಾಮಕರಣ ಮಾಡಬೇಕೆಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಪ್ರಸಕ್ತ ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆಯ ಬದಲಾಗಿ ಎರಡು ಹಂತದ ವ್ಯವಸ್ಥೆ ಮಾಡುವ ಸಲುವಾಗಿ ಅಗತ್ಯವಾದ ಸಂವಿಧಾನ ತಿದ್ದುಪಡಿ ಮಾಡುವ ವಿಷಯವನ್ನು ಕೇಂದ್ರ ಸರ್ಕಾರದೊಡನೆ ಪ್ರಸ್ತಾಪಿಸ ಬೇಕು ಎಂದು ವರದಿಯಲ್ಲಿ ಹೇಳಿದೆ. ‘ಪ್ರಜಾವಾಣಿ’ಯ ಪಂಚಾ­ಯತ್ ರಾಜ್ ಪುಟದಲ್ಲಿ ಚರ್ಚೆಯಾದ ಹಲವು ವಿಷಯ­ಗಳಿಗೂ ಧನಾತ್ಮಕವಾಗಿ ಪ್ರತಿಕ್ರಿಯಿಸಿದೆ. ರಾಜ್ಯ ಹಣಕಾಸು ಆಯೋಗದ ಶಿಫಾರಸುಗಳನ್ನು ಕಾರ್ಯ­ರೂಪ­ಗೊಳಿಸುವದರಲ್ಲಿ ಇರುವ ಅಸ್ಪಷ್ಟತೆಯನ್ನು ನಿವಾರಿ­ಸುವ ದೃಷ್ಟಿಯಿಂದ ಆಯೋಗ ವರದಿ ಬಂದ ಆರು ತಿಂಗಳ ಒಳಗೆ ವರದಿಯ ಮೇಲೆ ಕೈಗೊಳ್ಳಲಾದ ಕ್ರಮವನ್ನು ವಿಧಾನ ಸಭೆಗೆ  ತಿಳಿಸುವುದನ್ನು ಕಡ್ಡಾಯ ಮಾಡಿದೆ. ಯೋಜನಾ ಪ್ರಕ್ರಿಯೆಯನ್ನು  ಗ್ರಾಮ ಮಟ್ಟದಿಂದ ಪ್ರಾರಂಭಿಸಿ, ರಾಜ್ಯ ಮಟ್ಟದ  ಯೋಜನೆ­ಯಲ್ಲಿ  ಅಳವಡಿಸುವುದಕ್ಕಾಗಿ ಕ್ರಮ ಕೈಗೊಳ್ಳ ಬೇಕು. ಇದಕ್ಕಾಗಿ  ಜಿಲ್ಲಾ ಮಟ್ಟದಲ್ಲಿರುವಂತೆ  ತಾಲೂಕು ಮತ್ತು ಗ್ರಾಮ ಮಟ್ಟದಲ್ಲಿಯೂ ಯೋಜನಾ ಸಮಿತಿ­ಗಳನ್ನು ರಚಿಸುವುದರ ಜೊತೆಗೆ ಇವೆಲ್ಲ ವರದಿಯನ್ನು ಕ್ರೋಡೀಕರಿಸುವುದಕ್ಕಾಗಿ ರಾಜ್ಯ ಮಟ್ಟದಲ್ಲಿ ವಿಕೇಂದ್ರೀ­ಕೃತ ಯೋಜನೆ ಮತ್ತು ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಬೇಕೆಂದು ಹೇಳಿದೆ.

“ನಾವು ರಾಜೀವ್ ಗಾಂಧಿಯವರ ಕನಸಿಗೆ ವಿಧೇಯಕದ ಸ್ವರೂಪಕೊಡುವ ಪ್ರಯತ್ನ ಮಾಡಿ­ದ್ದೇವೆ. ರಾಜೀವ್ ಗಾಂಧಿಯವರು ಹೇಳಿ­ದಂತೆ  ಗ್ರಾಮ, ಪಟ್ಟಣ ಮತ್ತು ನಗರ­ಗಳ­ಲ್ಲಿ­ರುವ ಬಡಜನರನ್ನು ಕಾಡುತ್ತಿರುವ ಆಡಳಿತ­ಶಾಹಿಯ ಬಲಾತ್ಕಾರ, ತಾಂತ್ರಿ­ಕತೆಯ ದೌರ್ಜನ್ಯ, ಹೆಪ್ಪುಗಟ್ಟಿರುವ ಅಸಮರ್ಥತೆ, ಭ್ರಷ್ಟಾ­ಚಾರ ಮೊದಲಾದ ಹಲವಾರು  ಕುಕೃತ್ಯ­ಗಳಿಂದ ಪಾರು ಮಾಡುವುದು ಇದರ ಉದ್ದೇಶ” ಎಂಬ ಸಮಿತಿಯ ಮಾತುಗಳು ಎಷ್ಟರಮಟ್ಟಿಗೆ ಕಾರ್ಯ­ರೂಪಕ್ಕೆ ಬರುತ್ತದೆ ಎಂಬುದನ್ನು ಕಾಲವೇ ಹೇಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT