ಚೆನ್ನೈ (ಪಿಟಿಐ): ತಮಿಳುನಾಡಿನ ಹಿರಿಯ ಕಾಂಗ್ರೆಸ್ ನಾಯಕ ಜಿ.ಕೆ. ವಾಸನ್ ಸೋಮವಾರ ಕಾಂಗ್ರೆಸ್ ತೊರೆದಿದ್ದು, ಹೊಸ ಪ್ರಾದೇಶಿಕ ಪಕ್ಷವನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ.
ಶೀಘ್ರದಲ್ಲಿಯೇ ತಿರುಚ್ಚಿಯಲ್ಲಿ ನಡೆಯಲಿರುವ ರ್್ಯಾಲಿಯಲ್ಲಿ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಬಹಿರಂಗಪಡಿಸುವುದಾಗಿ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಲೋಕಸಭೆಯ ಚುನಾವಣೆಯ ನಂತರ ಹಿನ್ನಡೆ ಅನುಭವಿಸುತ್ತಿರುವ ಕಾಂಗ್ರೆಸ್ಗೆ ವಾಸನ್ ನಿರ್ಗಮನದಿಂದ ತಮಿಳುನಾಡಿನಲ್ಲಿ ಮತ್ತೊಂದು ಬಲವಾದ ಪೆಟ್ಟು ಬಿದ್ದಿದೆ.
ತಮಿಳುನಾಡಿನಲ್ಲಿ ಕಾಂಗ್ರೆಸ್ ಬಲಪಡಿಸಲು ಎಐಸಿಸಿ ತಲೆಕೆಡಿಸಿಕೊಳ್ಳದ ಕಾರಣ ಬೇಸತ್ತು ಪಕ್ಷ ತೊರೆಯುತ್ತಿರುವುದಾಗಿ ಅವರು ತಿಳಿಸಿದರು. ಹೊಸ ಪಕ್ಷ ಸ್ಥಾಪಿಸುವ ಮೂಲಕ ರಾಜ್ಯದಲ್ಲಿ ಕಾಮರಾಜ್ ಆಡಳಿತವನ್ನು ಮರಳಿ ತರುವುದಾಗಿ ಅವರು ಭರವಸೆ ನೀಡಿದರು.