ಜೈಪುರ, ರಾಜಸ್ತಾನ (ಐಎಎನ್ಎಸ್): ಪಟಾಕಿ ಅಂಗಡಿಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಕನಿಷ್ಠ ಏಳು ಜನರು ಸಾವನ್ನಪ್ಪಿದ ಘಟನೆ ರಾಜಸ್ತಾನದ ಬಾರ್ಮೆರ್ ಜಿಲ್ಲೆಯಲ್ಲಿ ಗುರುವಾರ ನಸುಕಿನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜಧಾನಿ ನಗರದಿಂದ ಸುಮಾರು 430 ಕಿಲೋಮೀಟರ್ ದೂರವಿರುವ ಬಾರ್ಮೆರ್ ಜಿಲ್ಲೆಯ ಬಾಲೊತ್ರಾ ಪ್ರದೇಶದಲ್ಲಿ ನಸುಕಿನ 1 ಗಂಟೆಗೆ ಈ ದುರ್ಘಟನೆ ಸಂಭವಿಸಿದೆ.
‘ಈವರೆಗೂ ಏಳು ಮೃತ ದೇಹಗಳನ್ನು ಹೊರಕ್ಕೆ ತೆಗೆಯಲಾಗಿದ್ದು, ರಕ್ಷಣಾ ಕಾರ್ಯ ಜಾರಿಯಲ್ಲಿದೆ’ ಎಂದು ಬಾರ್ಮೆರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಮಂತ್ ಶರ್ಮಾ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಅಲ್ಲದೇ, ‘ದುರಂತದ ವೇಳೆ ಈ ಏಳು ಜನರು ಹೊರಗೆ ಪಾರಾಗದೇ ಸಿಲುಕಿಕೊಂಡಂತೆ ಕಾಣಿಸುತ್ತದೆ. ಬೆಂಕಿಯನ್ನು ನಂದಿಸಲಾಗಿದ್ದು, ದುರುಂತ ಕಾರಣ ಪತ್ತೆಗೆ ತನಿಖೆ ಆರಂಭಿಸಿದ್ದೇವೆ’ ಎಂದೂ ಅವರು ತಿಳಿಸಿದ್ದಾರೆ.