ಬೆಂಗಳೂರು: ದೀಪಾವಳಿ ಹಬ್ಬದ ಸಡಗರದ ವೇಳೆ ನಗರದಲ್ಲಿ ಪಟಾಕಿ ಅನಾಹುತದಿಂದ ಗಾಯಗೊಂಡವರ ಸಂಖ್ಯೆ 81ಕ್ಕೇರಿದೆ. ಶುಕ್ರವಾರ ಸುಮಾರು 67 ಮಂದಿ ಪಟಾಕಿ ಸಿಡಿತದಿಂದ ಗಾಯಗೊಂಡು ಚಿಕಿತ್ಸೆಗಾಗಿ ವಿವಿಧ ಆಸ್ಪತ್ರೆಗಳಿಗೆ ದಾಖಲಾದರು.
ಮೂರು ದಿನಗಳಿಂದ ನಾರಾಯಣ ನೇತ್ರಾಲಯದಲ್ಲಿ (31), ಮಿಂಟೊ ಆಸ್ಪತ್ರೆಯಲ್ಲಿ (23), ಶಂಕರ ಆಸ್ಪತ್ರೆಯಲ್ಲಿ (13) ಹಾಗೂ ಬೆಂಗಳೂರು ನೇತ್ರಾಲಯ ಆಸ್ಪತ್ರೆಯಲ್ಲಿ (5 ) ಹೆಚ್ಚಿನ ಪ್ರಕರಣಗಳು ದಾಖಲಾಗಿವೆ.
ವೈಷ್ಣವಿ ಎಂಬ 6 ವರ್ಷದ ಬಾಲಕಿಯ ಕಣ್ಣಿನ ಕಾರ್ನಿಯಾಕ್ಕೆ ಬಲವಾದ ಪೆಟ್ಟು ಬಿದ್ದಿದ್ದು ನೇತ್ರಾಲಯ ಆಸ್ಪತ್ರೆ ದಾಖಲಿಸಲಾಗಿದೆ. ಆಕೆಯ ಕಣ್ಣು ರಪ್ಪೆಗಳು ಕೂಡ ಸುಟ್ಟು ಹೋಗಿವೆ. ವೈಷ್ಣವಿ ಸಂಬಂಧಿ 14ರ ಹರೆಯದ ಕರಣ್ ಕೂಡ ಇದೇ ಸಮಸ್ಯೆಗೆ ಒಳಗಾಗಿದ್ದಾನೆ.
ಇವರಿಬ್ಬರು ತಮ್ಮ ನಿವಾಸದ ಬಳಿ ಪಟಾಕಿ ಸಿಡಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. 6 ವರ್ಷದ ರಾಮ್, ಆಶ್ರಯ್ ಕೂಡ ಕಣ್ಣಿನ ಗಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
‘ಕೆಲವರಿಗೆ ತೀವ್ರ ಹಾಗೂ ಇನ್ನು ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಎಲ್ಲರಿಗೂ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ’ ಎಂದು ಬೆಂಗಳೂರು ನೇತ್ರಾಲಯದ ವೈದ್ಯ ಡಾ.ವೀರಭದ್ರ ರಾವ್ ತಿಳಿಸಿದ್ದಾರೆ. ಪಟಾಕಿ ಅನಾಹುತದಿಂದ ಗಾಯಗೊಂಡ ಹಲವು ಮಕ್ಕಳು ಮಿಂಟೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಬುಧವಾರ ಹಾಗೂ ಗುರುವಾರ 14 ಮಂದಿ ಗಾಯಗೊಂಡಿದ್ದರು. ಕೆಲವರು ಚೇತರಿಸಿಕೊಂಡಿದ್ದಾರೆ.