ಬೆಂಗಳೂರು: ‘ಗಲ್ಲು ಶಿಕ್ಷೆಯನ್ನು ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ವಿರೋಧಿಸುತ್ತಿದ್ದರು. ಇಂತಹ ಶಿಕ್ಷೆ ಇರಲೇಬಾರದು ಎಂದು ಪ್ರತಿಪಾದಿಸಿದ್ದರು’ ಎಂದು ಕೆಜೆಪಿಯ ಬಿ.ಆರ್.ಪಾಟೀಲ ಹೇಳಿದರು.
ವಿಧಾನಸಭೆಯಲ್ಲಿ ಗುರುವಾರ ಕಲಾಂ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಂದರ್ಭದಲ್ಲಿ ಅವರು ಮಾತನಾಡಿದರು. ಸರ್ವೋದಯ ಕರ್ನಾಟಕ ಪಕ್ಷದ ಕೆ.ಎಸ್.ಪುಟ್ಟಣ್ಣಯ್ಯ, ‘ಕಲಾಂ ಅವರ ಬಗ್ಗೆ ಭಾಷಣ ಮಾಡಿದರೆ ಸಾಲದು. ಅವರ ಆದರ್ಶಗಳಿಗೆ ಪಠ್ಯ ಪುಸ್ತಕಗಳಲ್ಲೂ ಸ್ಥಾನ ಸಿಗಬೇಕು. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದ ಅವರ ಹೆಸರಿನಲ್ಲಿ ಸರ್ಕಾರ ಪ್ರತಿ ವರ್ಷ ಕಾರ್ಯಕ್ರಮ ಹಮ್ಮಿಕೊಳ್ಳಬೇಕು’ ಎಂದು ಒತ್ತಾಯಿಸಿದರು.
ಕಾಂಗ್ರೆಸ್ನ ಎ.ಎಸ್.ಪಾಟೀಲ ನಡಹಳ್ಳಿ ಇದಕ್ಕೆ ಸಹಮತ ವ್ಯಕ್ತಪಡಿಸಿದರು. ಬಿಜೆಪಿಯ ಗೋವಿಂದ ಕಾರಜೋಳ ಅವರು ಕಲಾಂ ಅವರನ್ನು ‘21ನೇ ಶತಮಾನದ ಸೂಫಿ ಸಂತ’ ಎಂದು ಬಣ್ಣಿಸಿದರು. ಜುಲೈ 25ರಂದು ನಿಧನರಾದ ಮಾಜಿ ಸಚಿವ ವಸಂತ ವಿ. ಸಾಲಿಯಾನ ಅವರಿಗೂ ಸಂತಾಪ ಸೂಚಿಸಲಾಯಿತು.
ವಿಧಾನ ಪರಿಷತ್ತಿನಲ್ಲೂ ಕಲಾಂ ಹಾಗೂ ಸಾಲಿಯಾನ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.