ನವದೆಹಲಿ (ಪಿಟಿಐ): ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಕಾನೂನು ಕುಣಿಕೆಯಲ್ಲಿ ಸಿಲುಕಿಸಲು ಯತ್ನಿಸಿರುವ ಕಾಂಗ್ರೆಸ್, ಈ ಹಿಂದಿನ ಚುನಾವಣೆಗಳ ವೇಳೆ ತಮ್ಮ ವೈವಾಹಿಕ ಮಾಹಿತಿ ಮರೆಮಾಚಿ ಪ್ರಮಾಣಪತ್ರಗಳನ್ನು ಸಲ್ಲಿಸಿದ್ದ ಅವರ ವಿರುದ್ಧ ಎಫ್ಐಆರ್ ದಾಖಲಿಸಬೇಕು ಎಂದು ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಅಲ್ಲದೆ, 2009ರಲ್ಲಿ ಮೋದಿ ಅವರ ಆದೇಶದ ಮೇರೆಗೆ ಯುವತಿಯೊಬ್ಬರ ಚಲನವಲನದ ಮೇಲೆ ಬೇಹುಗಾರಿಕೆ ನಡೆಸಿದ್ದ ಪ್ರಕರಣದ ವಿಚಾರಣೆಗಾಗಿ ಶೀಘ್ರವೇ ನ್ಯಾಯಮೂರ್ತಿಯವರನ್ನು ನೇಮಿಸಲಾಗುವುದು ಎಂದೂ ಕಾನೂನು ಸಚಿವ ಕಪಿಲ್ ಸಿಬಲ್ ಸುದ್ದಿಗಾರರಿಗೆ ತಿಳಿಸಿದರು.
ಮೋದಿ ವಿರುದ್ಧ ದೂರು ದಾಖಲಿಸಬೇಕು ಎಂದು ಒತ್ತಾಯಿಸಿ ಆಯೋಗದ ಕಚೇರಿಗೆ ತಮ್ಮ ನೇತೃತ್ವದಲ್ಲಿ ಅವರು ನಿಯೋಗ ತೆಗೆದುಕೊಂಡು ಹೋಗಿದ್ದರು.
‘ಮೋದಿ ಅವರ ಆದೇಶದ ಮೇರೆಗೆ ನಡೆದಿದೆ ಎನ್ನಲಾದ ಯುವತಿಯ ಬೇಹುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯನ್ನು ಸರ್ಕಾರ ಕೈಬಿಟ್ಟಿಲ್ಲ. ಇದರ ವಿಚಾರಣೆಗೆ ನ್ಯಾಯಮೂರ್ತಿಯಾಗಿ ಯಾರನ್ನು ನೇಮಿಸಬೇಕು ಎಂಬುದೂ ಈಗಾಗಲೇ ನಿಗದಿಯಾಗಿದೆ. ಹೆಸರನ್ನು ಯಾವಾಗ ಪ್ರಕಟಿಸಬೇಕೆಂಬುದನ್ನು ನಿರ್ಧರಿಸಲಾಗುವುದು’ ಎಂದರು.
ಮೋದಿ ಅವರ ವೈವಾಹಿಕ ವಿಷಯ ಮುಂದಿಟ್ಟುಕೊಂಡು ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಟೀಕೆ ಮಾಡಿದ ದಿನದಂದೇ ಕಾಂಗ್ರೆಸ್ ನಿಯೋಗವು ಈ ಕುರಿತು ಆಯೋಗಕ್ಕೆ ದೂರು ನೀಡಿದೆ.
ರಾಹುಲ್ ವ್ಯಂಗ್ಯ:‘ಮಹಿಳೆಯರಿಗೆ ಸುರಕ್ಷತೆಯ ಅಭಯ ನೀಡುವ ಮಾತುಗಳನ್ನು ಬಿಜೆಪಿ ಆಡುತ್ತಿದೆ. ಆದರೆ, ಆ ಪಕ್ಷದ ಪ್ರಧಾನಿ ಅಭ್ಯರ್ಥಿಯಾದವರು ನಾಮಪತ್ರ ಪ್ರಮಾಣಪತ್ರದಲ್ಲಿ ಪತ್ನಿಯ ಹೆಸರು ನಮೂದಿಸಲು ಇಷ್ಟೊಂದು ಚುನಾವಣೆಗಳ ತನಕ ಕಾಯಬೇಕಾಯಿತು’ ಎಂದು ರಾಹುಲ್ ಗಾಂಧಿ ಜಮ್ಮು ಕಾಶ್ಮೀರದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ವ್ಯಂಗ್ಯವಾಡಿದರು.
ತಾವು ವಿವಾಹಿತ ಎಂದು ಮೋದಿ ಇದೇ ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ. ದೆಹಲಿಯಲ್ಲಿ ಅವರು ಮಹಿಳೆಯರನ್ನು ಘನತೆಯಿಂದ ಕಾಣುವ ಬಗ್ಗೆ ದೊಡ್ಡ ಮಾತುಗಳನ್ನು ಆಡುತ್ತಾರೆ. ಆದರೆ, ಪ್ರಮಾಣಪತ್ರದಲ್ಲಿ ಪತ್ನಿಯ ಹೆಸರನ್ನೇ ನಮೂದಿಸುವುದಿಲ್ಲ ಎಂದು ರಾಹುಲ್ ಚುಚ್ಚಿದರು.
ವಡೋದರಾ ಲೋಕಸಭಾ ಕ್ಷೇತ್ರದಿಂದ ಸಲ್ಲಿಸಿದ ನಾಮಪತ್ರದ ಜತೆಗಿನ ಪ್ರಮಾಣಪತ್ರದಲ್ಲಿ ಮೋದಿ ಅವರು ‘ನಾನು ವಿವಾಹಿತ’ ಎಂದು ಘೋಷಿಸಿದ್ದಾರೆ. ಮೋದಿ ಅವರು ತಾವು ವಿವಾಹಿತ ಎಂದು ಬಹಿರಂಗಪಡಿಸಿರುವುದು ಇದೇ ಮೊದಲ ಸಲ. ಈ ಹಿಂದಿನ ಚುನಾವಣೆಗಳಲ್ಲೆಲ್ಲಾ ಅವರು ಪ್ರಮಾಣಪತ್ರದ ವೈವಾಹಿಕ ಸ್ಥಿತಿಯ ಕಾಲಂನಲ್ಲಿ ಏನನ್ನೂ ಬರೆಯದೆ ಹಾಗೆಯೇ ಬಿಟ್ಟಿದ್ದರು.
ಸುಳ್ಳು ಹೇಳಿಲ್ಲ– ಬಿಜೆಪಿ: ವೈವಾಹಿಕ ಸ್ಥಿತಿ ಮಾಹಿತಿ ವಿವಾದಕ್ಕೆ ಸಂಬಂಧಿಸಿದಂತೆ ನರೇಂದ್ರ ಮೋದಿ ಅವರನ್ನು ಸಮರ್ಥಿಸಿಕೊಂಡಿರುವ ಬಿಜೆಪಿ, ‘ಅವರೇನೂ ಈ ವಿಷಯದಲ್ಲಿ ಸುಳ್ಳು ಹೇಳಿಲ್ಲ. ಅಲ್ಲದೆ, ಇದರಿಂದ ಯಾರಿಗೇ ಆಗಲಿ ಅನ್ಯಾಯವಾಗಿಲ್ಲ’ ಎಂದಿದೆ. ಅಲ್ಲದೆ, ತಮ್ಮ ಪಕ್ಷದ ನಾಯಕರ ಖಾಸಗಿ ವಿಷಯಗಳನ್ನು ಬೀದಿಗೆಳೆಯುತ್ತಿರುವ ಕಾಂಗ್ರೆಸ್ಗೆ ಎಚ್ಚರಿಕೆ ನೀಡಿರುವ ಬಿಜೆಪಿ, ಗಾಂಧಿ ಕುಟುಂಬದ ಹಲವು ವಿಷಯಗಳೂ ತನಗೆ ತಿಳಿದಿದೆ ಎಂದು ಹೇಳಿದೆ.
ರಾಹುಲ್ ಗಾಂಧಿ ಅವರ ಟೀಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರೆ ನಿರ್ಮಲಾ ಸೀತಾರಾಮನ್, ‘ಚುನಾವಣಾ ಪ್ರಮಾಣಪತ್ರದಲ್ಲಿ ಮೋದಿ ಸರಿಯಾದ ಮಾಹಿತಿ ನೀಡಿದ್ದು, ರಾಹುಲ್ ಅದನ್ನು ಎಚ್ಚರಿಕೆಯಿಂದ ಓದಿನೋಡಲಿ’ ಎಂದರು.
ಪತಿ ಒಳಿತಿಗೆ ಪತ್ನಿ ಧ್ಯಾನ
ಮೆಹ್ಸಾನಾ (ಪಿಟಿಐ):ರಾಜಕೀಯ ವಿರೋಧಿಗಳು, ಮೋದಿ ಅವರನ್ನು ರಾಜಕೀಯವಾಗಿ ಹಣಿಯಲು ಅವರ ಪತ್ನಿಯ ಹೆಸರು ಬಳಸಿಕೊಳ್ಳುತ್ತಿದ್ದರೂ, ಹಲವು ದಶಕಗಳ ಹಿಂದೆಯೇ ಗಂಡನಿಂದ ಪ್ರತ್ಯೇಕವಾಗಿರುವ ಜಶೋದಾಬೆನ್ ಮಾತ್ರ ತಮ್ಮ ಪತಿ ಪ್ರಧಾನಿಯಾಗಬೇಕೆಂದು ಉಪವಾಸ, ಪ್ರಾರ್ಥನೆಗಳನ್ನು ಮಾಡುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.