ಮೀರಠ್ (ಪಿಟಿಐ): ಪ್ರಸವ ಸಮಯದಲ್ಲಿ ವೈದ್ಯರ ನಿರ್ಲಕ್ಷ್ಯವೇ ಪತ್ನಿ ಸಾವಿಗೆ ಕಾರಣ ಎಂದು ಆರೋಪಿಸಿ, ಹೆರಿಗೆ ಮಾಡಿಸಿದ ವೈದ್ಯೆಗೆ ಪತಿ ಗುಂಡಿಕ್ಕಿ ಹತ್ಯೆ ನಡೆಸಲು ಯತ್ನಿಸಿದ ಘಟನೆ ಇಲ್ಲಿನ ಫಜಲ್ಪುರ ಎಂಬಲ್ಲಿ ಭಾನುವಾರ ನಡೆದಿದೆ.
ವೈದ್ಯೆಯನ್ನು ಹತ್ಯೆ ನಡೆಸಲು ಯತ್ನಿಸಿದ ವ್ಯಕ್ತಿಯನ್ನು ಮುರಳಿಪುರ ಗ್ರಾಮದ ನಿವಾಸಿ ಬಾಬುದ್ದೀನ್(32) ಎಂದು ಗುರುತಿಸಲಾಗಿದ್ದು, ಇವರ ಪತ್ನಿ ಶುಕ್ರವಾರ ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾಗಿದ್ದರು. ಹೆರಿಗೆ ಸಮಯದಲ್ಲಿ ಮೃತರಾದ ಪತ್ನಿಯ ಅಂತಿಮ ವಿಧಿಗಳನ್ನು ಶನಿವಾರ ಪೂರೈಸಿದ ಬಳಿಕ ಆಸ್ಪತ್ರೆಗೆ ಬಂದ ಬಾಬುದ್ದೀನ್, ನಾಡ ಬಂದೂಕಿನಿಂದ ವೈದ್ಯೆ ಮುನೇಶ್ ತೋಮರ್ಗೆ ಗುಂಡು ಹಾರಿಸಿದ್ದಾರೆ. ಇದೇ ವೇಳೆ ಸ್ಥಳದಲ್ಲಿದ್ದ ಆಸ್ಪತ್ರೆಯ ಸಿಬ್ಬಂದಿ ಬಾಬುದ್ದೀನ್ಗೆ ಥಳಿಸಿದ್ದಾರೆ.
ಗಾಯಗೊಂಡ ವೈದ್ಯೆ ಅದೇ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಬಾಬುದ್ದೀನ್ನನ್ನು ಮತ್ತೊಂದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಎರಡೂ ಕಡೆಯವರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.