ಕೋಲ್ಕತ್ತ (ಐಎಎನ್ಎಸ್): ಶಾರದಾ ಚಿಡ್ಫಂಡ್ ಹಗರಣದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿರುದ್ಧ ಬಲವಾದ ಆರೋಪಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ಅವರು ಪತ್ರಕರ್ತರ ವಿರುದ್ಧ ಸಮರ ಆರಂಭಿಸಿದ್ದಾರೆ.
ವರದಿಗಾರಿಕೆಗೆ ತೆರಳುವ ಪತ್ರಕರ್ತರನ್ನು ಪೊಲೀಸರು ಬಂಧಿಸುವ ಬೆದರಿಕೆ ಒಡ್ಡುತ್ತಿದ್ದಾರೆ ಎನ್ನಲಾಗಿದೆ. ಹೌರಾ ಸಮೀಪದ ನಬನ್ನಾದಲ್ಲಿರುವ ಸಚಿವಾಲಯಗಳ ಕಚೇರಿಯಲ್ಲಿ ಪತ್ರಕರ್ತರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಸುದ್ದಿಗಾಗಿ ತೆರಳಿದ ಪತ್ರಕರ್ತರಿಗೆ ಪೊಲೀಸ್ ಅಧಿಕಾರಿಯೊಬ್ಬರು ಅಲ್ಲಿ ಓಡಾಡಿದರೆ ಬಂಧಿಸುವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ.
ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಕಚೇರಿಗಳಿರುವ ಸಿಜಿಒ ಸಂಕೀರ್ಣದೊಳಗೂ ಪತ್ರಕರ್ತರಿಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಹೇಳಲಾಗಿದೆ. ಪತ್ರಕರ್ತರನ್ನು ಬಂಧಿಸುವ ಬೆದರಿಕೆಯನ್ನು ಗೃಹಸಚಿವ ಬಸುದೇವ್ ಬ್ಯಾನರ್ಜಿ ನಿರಾಕರಿಸಿದ್ದಾರೆ.