ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಜೈಲಿನ ಅಧಿಕಾರಿಗಳು ಬುಧವಾರ 1.5 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ.
ಡಕಾಯಿತಿ ಪ್ರಕರಣದಲ್ಲಿ ಬಂಧಿತನಾಗಿ ಮೂರು ವರ್ಷಗಳಿಂದ ಜೈಲಿನಲ್ಲಿರುವ ಅರುಣ್ ಮೋಹನ್ ಎಂಬಾತನ ಸೆಲ್ನಲ್ಲಿ ಗಾಂಜಾ ಸಿಕ್ಕಿದೆ. ಯಾರು ಆತನಿಗೆ ತಲುಪಿಸಿದ್ದಾರೆ ಎಂಬದರ ಬಗ್ಗೆ ಮಾಹಿತಿ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೈದಿಗಳಿಗೆ ಗಾಂಜಾ ಪೂರೈಕೆ ಮಾಡುತ್ತಿರುವ ಬಗ್ಗೆ ಅನುಮಾನ ಇತ್ತು. ಹೀಗಾಗಿ ಕೈದಿಗಳ ಸೆಲ್ಗಳನ್ನು ಪರಿಶೀಲಿಸಲಾಯಿತು.
ಈ ವೇಳೆ ಅರುಣ್ ಮೋಹನ್ ಇದ್ದ ಸೆಲ್ನ ಕೇರಂ ಬೋರ್ಡ್ನ ಹಿಂಭಾಗದಲ್ಲಿ ಗಾಂಜಾ ಇರಿಸಲಾ ಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ‘ಕೈದಿಗಳಿಗೆ ಕ್ರೀಡಾ ಸಾಮಗ್ರಿ ಗಳನ್ನು ಒದಗಿಸಲು ಅವರ ಕುಟುಂಬ ಸದಸ್ಯರಿಗೆ ಅವಕಾಶ ಇರುತ್ತದೆ. ಈ ವೇಳೆ ಗಾಂಜಾ ಪೂರೈಕೆ ಮಾಡಿರುವ ಸಾಧ್ಯತೆ ಇದೆ. ಅರುಣ್ ಮೋಹನ್ಗೆ ಪೆರೋಲ್ ನೀಡುವುದಿಲ್ಲ ಮತ್ತು ಆತನಿಗೆ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ಅವಕಾಶ ನೀಡದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾ ಗುವುದು’ ಎಂದು ಕಾರಾಗೃಹ ಇಲಾಖೆ ಎಡಿಜಿಪಿ ಕಮಲ್ ಪಂತ್ ಹೇಳಿದರು.
ಲಾರಿ ಹರಿದು ವೃದ್ಧ ಸಾವು
ಶೂಲೆ ವೃತ್ತದಲ್ಲಿ ಗುರುವಾರ ಬೆಳಿಗ್ಗೆ ಬಿಬಿಎಂಪಿ ಕಸದ ಲಾರಿ ಹರಿದು ಕುಪ್ಪಸ್ವಾಮಿ (75) ಎಂಬುವರು ಮೃತಪಟ್ಟಿದ್ದಾರೆ.
ವಿವೇಕನಗರ ನಿವಾಸಿಯಾದ ಕುಪ್ಪಸ್ವಾಮಿ, ಯುಬಿ ಸಿಟಿಯಲ್ಲಿ ಕಾರು ಸ್ವಚ್ಛಗೊಳಿಸುವ ಕೆಲಸ ಮಾಡುತ್ತಾರೆ. ಬೆಳಿಗ್ಗೆ 6.15ರ ಸುಮಾರಿಗೆ ಶೂಲೆ ವೃತ್ತಕ್ಕೆ ಬಂದಿದ್ದರು. ಈ ವೇಳೆ ವಿಕ್ಟೋರಿಯಾ ರಸ್ತೆ ಕಡೆಯಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ.