ಹವಾಮಾನ ವೈಪರೀತ್ಯ ಕುರಿತಂತೆ ವಿಶ್ವಸಂಸ್ಥೆಯ ಇತ್ತೀಚಿನ ವರದಿ ಮತ್ತೊಮ್ಮೆ ಎಚ್ಚರಿಕೆ ನೀಡಿದೆ. ಜಾಗತಿಕ ತಾಪಮಾನ ಏರಿಕೆ ಬಗ್ಗೆ ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ಐದನೇ ವರದಿ ಇದು. ಈ ಬಾರಿಯ ವರದಿಯಲ್ಲೂ ಜಾಗತಿಕ ತಾಪಮಾನ ಏರಿಕೆಯ ಅಪಾಯಗಳನ್ನು ಎತ್ತಿ ಹೇಳಲಾಗಿದೆ. ವಿಶೇಷ ಎಂದರೆ ಈ ಬಾರಿ ಈ ಎಚ್ಚರಿಕೆಯನ್ನು ಇನ್ನಷ್ಟು ತೀವ್ರ ಮಾತುಗಳಲ್ಲಿ ಹೇಳಲಾಗಿದೆ.
ಏಕೆಂದರೆ ಹಿಂದಿನ ವರದಿಗಳಿಗೆಲ್ಲಾ ಹೆಚ್ಚಿನ ಸ್ಪಂದನ ಸಿಕ್ಕಿಲ್ಲ. ಇದಕ್ಕೆ ಭಾರತವೂ ಹೊರತಲ್ಲ. ಆದರೆ ಹವಾಮಾನ ವೈಪರೀತ್ಯ ಎಂಬುದು ಭಾರತದ ಆರ್ಥಿಕ ವ್ಯವಸ್ಥೆ ಹಾಗೂ ಆಹಾರ ಭದ್ರತೆಗೂ ಧಕ್ಕೆ ತರಬಹುದಾದ ಅಪಾಯ ಇದೆ ಎಂಬುದನ್ನು ನಾವು ನಿರ್ಲಕ್ಷಿಸಲಾಗದು.
ಈ ವರದಿಯಲ್ಲಿ ಪ್ರಸ್ತಾಪಿಸಲಾಗಿರುವ ಅವಘಡಗಳ ಮುನ್ಸೂಚನೆಯ ಸಾಧ್ಯಾಸಾಧ್ಯತೆಗಳನ್ನು ಕುರಿತಂತೆ ನಾವು ವಿಭಿನ್ನ ವಾದಗಳನ್ನೇನೋ ಮಂಡಿಸಬಹುದು. ಆದರೆ ಹವಾಮಾನ ವೈಪರೀತ್ಯಗಳ ಪರಿಣಾಮಗಳಂತೂ ಎದ್ದು ಕಾಣುತ್ತಿದೆ . ನಮ್ಮ ನದಿಗಳ ಉಗಮಸ್ಥಾನವಾದ ಹಿಮಾಲಯ ಪರ್ವತ ಶ್ರೇಣಿಗಳಲ್ಲಿನ ಹಿಮ ನದಿಗಳು ಕರಗುತ್ತಿರುವ ವಿದ್ಯಮಾನ ಘಟಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಭಾರತ, ಯೂರೋಪ್ ಹಾಗೂ ಅಮೆರಿಕದಲ್ಲಿ ಈ ಬಾರಿಯ ಚಳಿಗಾಲದಲ್ಲಿ ಕಂಡು ಬಂದ ಅತಿರೇಕದ ಹವಾಮಾನಕ್ಕೂ ತಾಪಮಾನ ಬದಲಾವಣೆಗೂ ಸಂಬಂಧವಿದೆ ಎಂಬಂತಹ ವಿಶ್ಲೇಷಣೆಗಳು ತಜ್ಞರಿಂದ ಮಂಡಿತವಾಗಿವೆ.
21ನೇ ಶತಮಾನದ ಅಂತ್ಯಕ್ಕೆ 4 ಡಿಗ್ರಿ ಸೆಂಟಿಗ್ರೇಡ್ಗಳಷ್ಟು ತಾಪಮಾನ ಏರಿಕೆ ಆಗಲಿದೆ ಎಂಬುದನ್ನು ವಿಶ್ವಸಂಸ್ಥೆಯ ವರದಿ ಪ್ರಸ್ತಾಪಿಸುತ್ತದೆ. ಕರಗುವ ಹಿಮನದಿಗಳಿಂದ ಸಮುದ್ರಮಟ್ಟಗಳಲ್ಲೂ ಏರಿಕೆ ಆಗಲಿದೆ. ಇದು ಕರಾವಳಿ ನಗರಗಳಿಗೆ ದೊಡ್ಡ ಬೆದರಿಕೆ ಒಡ್ಡಲಿದೆ ಎಂಬಂತಹ ಮಾತು ಈ ವರದಿಯಲ್ಲಿದೆ. ಜಾಗತಿಕ ತಾಪಮಾನ ಏರಿಕೆಯಿಂದ ಹೆಚ್ಚು ಹಾನಿಗೆ ಒಳಗಾಗಲಿರುವ ಸಾಧ್ಯತೆಗಳಿರುವ ರಾಷ್ಟ್ರಗಳಲ್ಲಿ ಭಾರತ ಅಗ್ರ ಸ್ಥಾನದಲ್ಲಿದೆ . ಪ್ರವಾಹ, ಚಂಡಮಾರುತ, ಬರಗಾಲಗಳಂತಹ ನೈಸರ್ಗಿಕ ವಿಕೋಪಗಳ ಅಪಾಯಗಳಿರುವ ಪ್ರದೇಶಗಳು ಭಾರತದಲ್ಲಿವೆ. ಉಷ್ಣಾಂಶ ಏರಿಕೆಯಿಂದ ನಗರಗಳು ಹೆಚ್ಚು ಬಿಸಿಯಾಗಲಿವೆ. ಕಾಯಿಲೆಗಳ ಹರಡುವಿಕೆ ರೀತಿ ಬದಲಾಗಬಹುದು. ಅಡ್ಡಾದಿಡ್ಡಿ ಹವಾಮಾನ, ಕೃಷಿ ಉತ್ಪಾದನೆಗೆ ಮಾರಕವಾಗುವುದಲ್ಲದೆ ಆಹಾರ ಭದ್ರತೆಗೆ ಧಕ್ಕೆ ಉಂಟುಮಾಡುತ್ತದೆ ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕು.
ಇಂಧನ, ಸಾರಿಗೆ, ಕೃಷಿ, ಪ್ರವಾಸೋದ್ಯಮದಂತಹ ಪ್ರಮುಖ ವಲಯಗಳಲ್ಲಿ ಉಂಟಾಗಬಹುದಾದ ನಷ್ಟದ ಪರಿಣಾಮಗಳು ಆರ್ಥಿಕತೆಗೆ ಹೊಡೆತ ನೀಡುವಂತಹದ್ದು. ಹೀಗಾಗಿ ತಾಪಮಾನ ಏರಿಕೆಯ ಪರಿಣಾಮಗಳನ್ನು ತಗ್ಗಿಸಲು ಕೈಗೊಳ್ಳಬೇಕಾದ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಆದ್ಯತೆ ಆಗಬೇಕು. ವಾತಾವರಣದ ಮಾಲಿನ್ಯ ಕಡಿಮೆ ಮಾಡಲು ಇಂಧನ ಬಳಕೆಯಲ್ಲಿ ನಿಯಂತ್ರಣ ಬೇಕು. ಹಾಗೆಯೇ ಇಂಧನ ಉತ್ಪಾದನೆಗಾಗಿ ಹೆಚ್ಚು ದಕ್ಷ ಮಾರ್ಗಗಳನ್ನು ಕಂಡುಕೊಳ್ಳುವುದು ಅನಿವಾರ್ಯ. ಈ ನಿಟ್ಟಿನಲ್ಲಿ ಹೆಚ್ಚಿನ ಸಂಶೋಧನೆಗಳಾಗಬೇಕು. ಸಂಶೋಧನೆಗಳಿಗೆ ಹೆಚ್ಚು ಹಣ ವ್ಯಯಿಸಲು ಹಾಗೂ ಕ್ರಿಯಾಯೋಜನೆಗಳನ್ನು ರೂಪಿಸಲು ಸರ್ಕಾರಗಳು ಬದ್ಧವಾಗಬೇಕು. ಸೌರಶಕ್ತಿ ಬಳಕೆಯಲ್ಲಿ ವಿನೂತನ ಪ್ರಯೋಗಗಳು ದೀರ್ಘಕಾಲೀನ ಪರಿಣಾಮಗಳನ್ನು ಬೀರಬಲ್ಲುದು. ಜನರ ಬದುಕುವ ವಿಧಾನಗಳೂ ಬದಲಾಗುವುದು ಅವಶ್ಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.