ದೇವನಹಳ್ಳಿ: ದೇಶದ 17 ರಾಜ್ಯಗಳಲ್ಲಿ ಮಡಿವಾಳ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರಿಸಲಾಗಿದೆ. ಆದರೆ, ಕರ್ನಾಟಕದಲ್ಲಿ ಇನ್ನೂ ಈ ಬಗ್ಗೆ ಯಾವುದೇ ರೀತಿ ಪ್ರಕ್ರಿಯೆ ನಡೆಯುತ್ತಿಲ್ಲ. ಮಡಿವಾಳ ಸಮುದಾಯ ಸಾಮಾಜಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವುದರಿಂದ ಸರ್ಕಾರ ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು ಎಂದು ಮಡಿವಾಳ ಸಂಘದ ರಾಜ್ಯಾಧ್ಯಕ್ಷ ಪಿ. ನಂಜಪ್ಪ ಆಗ್ರಹಿಸಿದರು.
ತಾಲ್ಲೂಕಿನ ಅವತಿ ಗ್ರಾಮದಲ್ಲಿ ಶುಕ್ರವಾರ ಜಿಲ್ಲಾಮಟ್ಟದ ಮಡಿವಾಳ ಸಂಘದ ವತಿಯಿಂದ ಆಯೋಜಿಸಿದ್ದ ಶರಣ ಮಡಿವಾಳ ಮಾಚಿದೇವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ಕಳೆದ ವರ್ಷದ ಬಜೆಟ್ನಲ್ಲಿ ಸವಿತಾ ಸಮಾಜ ಮತ್ತು ಮಡಿವಾಳ ಜನಾಂಗದ ಅಭಿವೃದ್ಧಿಗೆ ₹30 ಕೋಟಿ ಮೀಸಲಿಟ್ಟತ್ತು. ಅದು ಯಾವುದೇ ರೀತಿಯಲ್ಲೂ ಖರ್ಚಾಗಿಲ್ಲ.
ಅದರೂ ಇತ್ತೀಚೆಗೆ ನಡೆದ ಬಜೆಟ್ ಘೊಷಣೆಯಲ್ಲಿ ಯಥಾಸ್ಥಿತಿ ₹30ಕೋಟಿ ಘೋಷಣೆ ಮಾಡಿದೆ. ಆದರೆ ಇದು ಭರವಸೆಯಾಗಿ ಉಳಿಯಬಾರದು. ಪ್ರಾದೇಶಿಕವಾಗಿ ಸಮುದಾಯವನ್ನು ಅಗಸ, ದೋಬಿ, ರಜಕ, ವಣ್ಣನ್ ಎಂದು ಕರೆಯಲಾಗುತ್ತಿದೆ. ಆದರೆ, ಏಪ್ರಿಲ್ 11ರಿಂದ ಸರ್ಕಾರ ಸಮೀಕ್ಷೆ ನಡೆಸಲು ಮುಂದಾಗಿದ್ದು ಮಡಿವಾಳ ಎಂದು ಗಣತಿಯಲ್ಲಿ ನಮೂದಿಸಬೇಕು ಎಂದು ಹೇಳಿದರು. ಶಿವಯೋಗಾನಂದಪುರಿ ಸ್ವಾಮೀಜಿ ಮಾತನಾಡಿ, ಗ್ರಾಮೀಣ ಪ್ರದೇಶದ ಮೂಲಧಾರ್ಮಿಕ ಆಚರಣೆಗಳು ಕೇವಲ ಒಂದೇ ಸಮುದಾಯಕ್ಕೆ ಸೀಮಿತವಾಗದೆ ಪ್ರತಿಯೊಂದು ಸಮುದಾಯ ಪಾಲ್ಗೊಳ್ಳುವಂತಾಗಬೇಕು ಎಂದರು.
ಹನ್ನೆರಡನೆ ಶತ ಮಾನದಲ್ಲಿ ಎಲ್ಲಾ ಜಾತಿ ಧರ್ಮಗಳಲ್ಲಿ ಸಮಾನತೆ ತರುವ ನಿಟ್ಟಿನಲ್ಲಿ ಸಾಮಾಜಿಕ ಭಾವೈಕ್ಯತೆ ಸಾರಿದ ಬಸವಣ್ಣನವರ ದೂರ ದೃಷ್ಠಿ ಚಿಂತನೆಯಿಂದ ಅನೇಕ ಸಮುದಾಯದಲ್ಲಿ ಶರಣರು ಗುರುತಿಸಿಕೊಂಡಿದ್ದಾರೆ. ಅದೆ ರೀತಿ ಮಡಿವಾಳ ಮಾಚಿದೇವರು. ಅವರ ಸಮಕಾಲೀನರು, ಬಸವಣ್ಣನವರ ತತ್ವ ಸಿದ್ದಾಂತವನ್ನೇ ಅನುಸರಿಸಿ ಸಮಾಜಕ್ಕೆ ಬೆಳಕಾದವರು. ಅವರ ನಿಷ್ಠೆ, ಧಾರ್ಮಿಕ ಚಿಂತನೆ,ಸಾಮಾಜಿಕ ಕಳಕಳಿ ಎಲ್ಲಾ ಸಮುದಾಯಕ್ಕೂ ಅದರ್ಶ ಎಂದು ಅವರು ಹೇಳಿದರು.