ತಮಿಳುನಾಡಿನ ರಾಮೇಶ್ವರ ಮೂಲದ ಐವರು ಮೀನುಗಾರರಿಗೆ ಶ್ರೀಲಂಕಾದ ನ್ಯಾಯಾಲಯವೊಂದು ಮರಣದಂಡನೆ ಶಿಕ್ಷೆ ವಿಧಿಸಿರುವುದು ವರದಿಯಾಗಿದೆ. ಮಾದಕ ವಸ್ತುವಿನ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಆರೋಪದ ಮೇಲೆ 2011ರಲ್ಲಿ ಇವರನ್ನು ಪಾಕ್ ಕೊಲ್ಲಿ ಪ್ರದೇಶದಲ್ಲಿ ಬಂಧಿಸಲಾಗಿತ್ತು. ಭಾರತ ಮೂಲದ ಈ ಬಂಧಿತ ಮೀನುಗಾರರ ಮೇಲೆ ಹಿಂದೆ ಯಾವುದೇ ಕಳಂಕದ ನೆರಳಿಲ್ಲ, ಅವರು ಅಮಾಯಕರು ಎಂದು ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ. ಜೊತೆಗೆ ಅಲ್ಲಿನ ಸುಪ್ರೀಂ ಕೋರ್ಟ್ಗೆ ಇದೇ 14ರ ಒಳಗೆ ಮೇಲ್ಮನವಿ ಸಲ್ಲಿಸುವ ಭರವಸೆ ನೀಡಿರುವುದು ಸ್ವಾಗತಾರ್ಹ.
ಭಾರತ ಹಾಗೂ ಶ್ರೀಲಂಕಾ ನಡುವೆ ಮೀನುಗಾರರು ಅಂತರರಾಷ್ಟ್ರೀಯ ಜಲ ಗಡಿ ಉಲ್ಲಂಘಿಸಿದ ಪ್ರಸಂಗಗಳು ಹಿಂದೆಯೂ ನಡೆದಿದ್ದು ಎರಡೂ ದೇಶಗಳು ಅಂಥ ಆರೋಪಿಗಳನ್ನು ಬಿಡುಗಡೆ ಮಾಡಿವೆ. ಮಾತುಕತೆಗಳ ಮೂಲಕ ಇವು ಇತ್ಯರ್ಥವಾಗುತ್ತಿದ್ದವು. ಆದರೆ ಪ್ರಸಕ್ತ ಮಾದಕ ವಸ್ತುಗಳ ಕಳ್ಳಸಾಗಾಣಿಕೆಯ ಆರೋಪ ಗಂಭೀರವಾದದ್ದು. ಹೀಗಾಗಿ, ಭಾರತದ ಮೀನುಗಾರರ ಪರವಾದ ತನ್ನ ನಿಲುವನ್ನು ಈಗಾಗಲೇ ವ್ಯಕ್ತಪಡಿಸಿರುವ ಭಾರತ, ಕಾನೂನು ಹಾಗೂ ರಾಜತಾಂತ್ರಿಕ ಮಾರ್ಗಗಳ ಮೂಲಕ ತಮಿಳುನಾಡಿನ ಮೀನುಗಾರರ ಬಿಡುಗಡೆಗೆ ಪ್ರಯತ್ನ ನಡೆಸಿದೆ. ಕೇಂದ್ರ ಸರ್ಕಾರ, ಈ ಸಂದರ್ಭದಲ್ಲಿ ಶ್ರೀಲಂಕಾದ ಮೇಲೆ ಮೃದು ಒತ್ತಡ ಹೇರುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಜತೆಗೆ ಶ್ರೀಲಂಕಾ ಶಾಂತಿ ಬೋಧಿಸುವ ಬೌದ್ಧರ ನಾಡು ಎಂಬ ಅಂಶವೂ ಮುಖ್ಯವಾಗಬಹುದು.
ಶ್ರೀಲಂಕಾ ಮತ್ತು ಭಾರತದ ನಡುವಿನ ರಾಜಕೀಯ ಸಂಬಂಧಕ್ಕೆ ತಮಿಳು ಅಸ್ಮಿತೆಯ ಹೋರಾಟದ ಒಂದು ಹಳೆಯ ನಂಟೂ ಇರುವುದರಿಂದ ಶಿಕ್ಷೆ ಪ್ರಕರಣಕ್ಕೆ ಅನಗತ್ಯ ಭಾವುಕತೆ, ಉದ್ವೇಗದ ಆಯಾಮವೂ ಸೇರಬಹುದು. ಶ್ರೀಲಂಕಾ ನ್ಯಾಯಾಲಯದ ತೀರ್ಪನ್ನು ವಿರೋಧಿಸಿ ಈಗಾಗಲೇ ತಮಿಳುನಾಡಿನ ರಾಮೇಶ್ವರಂನಲ್ಲಿ ಮೀನುಗಾರರು ರಸ್ತೆ ಮತ್ತು ರೈಲು ತಡೆ ನಡೆಸಿದ್ದಾರೆ. ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಭಾರತಕ್ಕೆ ಅವಕಾಶವಿದ್ದೇ ಇದೆ. ಅಲ್ಲದೇ ಶ್ರೀಲಂಕಾದ ನ್ಯಾಯ ವ್ಯವಸ್ಥೆಯಲ್ಲಿ ರಾಷ್ಟ್ರಾಧ್ಯಕ್ಷರ ಕ್ಷಮಾದಾನಕ್ಕೂ ಅವಕಾಶ ಇರುವುದರಿಂದ ಅಂಥ ಯಾವುದೇ ಅವಕಾಶವೂ ಕೈತಪ್ಪಿಹೋಗಲು ಬಿಡಬಾರದು. ಜತೆಗೆ ಇದನ್ನು ತಮಿಳು–ಶ್ರೀಲಂಕಾ ಅಭಿಮಾನಗಳ ಕಣವಾಗಿಸಿಕೊಳ್ಳಲೂ ಆಸ್ಪದ ನೀಡಬಾರದು. ಎರಡೂ ದೇಶಗಳು ಇದನ್ನು ಪ್ರತಿಷ್ಠೆಯ ವಿಷಯವಾಗಿಸದೆ ನ್ಯಾಯಯುತ ಶಾಂತಿ ಸಂಧಾನ, ಪರಿಹಾರ ದಾರಿಗಳನ್ನು ಕಂಡುಕೊಳ್ಳಬೇಕು. ಅಮಾಯಕರಿಗೆ ಶಿಕ್ಷೆ ಆಗದಂತೆ ನೋಡಿಕೊಳ್ಳಬೇಕಾದದ್ದು ಉಭಯ ರಾಷ್ಟ್ರಗಳ ಹೊಣೆಗಾರಿಕೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.