ತಿರುವನಂತಪುರ (ಐಎಎನ್ಎಸ್): ತಮಿಳುನಾಡಿನ ಸಲೀಂ ಅಲಿ ಪಕ್ಷಿ ವಿಜ್ಞಾನ ಮತ್ತು ನೈಸರ್ಗಿಕ ಇತಿಹಾಸ ಸಂಸ್ಥೆಯ ಪಕ್ಷಿ ವಿಜ್ಞಾನಿ ಎಸ್. ಭೂಪತಿ (52) ಅವರು ಕೇರಳದ ನೆಯ್ಯಾರ್ ವನ್ಯಮೃಗ ಧಾಮದಲ್ಲಿಯ ಅಗಸ್ತ್ಯಕುಂಡ ಪರ್ವತದ ತುತ್ತತುದಿಯಿಂದ ಕಾಲು ಜಾರಿಬಿದ್ದು ಅಸುನೀಗಿದ್ದಾರೆ.
ಇಬ್ಬರು ವಿದ್ಯಾರ್ಥಿಗಳು 1,868 ಮೀಟರ್ ಎತ್ತರದ ಪ್ರದೇಶದಲ್ಲಿ ಸಂಚರಿಸುತ್ತ ಸಂಶೋಧನಾ ಕಾರ್ಯ ನಡೆಸುತ್ತಿದ್ದಾಗ ಭೂಪತಿ ಅವರು ಮಾರ್ಗದರ್ಶನ ಮಾಡುತ್ತಿದ್ದ ಸಂದರ್ಭದಲ್ಲಿ ಸೋಮವಾರ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭೂಪತಿ ಅವರು ದಟ್ಟವಾದ ಬಿದಿರು ಪೊದೆಗಳ ಮೇಲೆ ಬಿದ್ದಿದ್ದರಿಂದ ಅವರ ಎಡಗಣ್ಣು ಹರಿದುಹೋಗಿದೆ. ವಿದ್ಯಾರ್ಥಿಗಳು ಮತ್ತು ಸ್ಥಳೀಯರು ಅವರ ಮೃತ ದೇಹವನ್ನು ಸುಮಾರು 30 ಕಿ. ಮೀ. ದೂರ ಹೊತ್ತುಕೊಂಡು ವಾಹನ ಸಂಚರಿಸುವ ರಸ್ತೆಗೆ ತಂದಿದ್ದಾರೆ. ನಂತರ ದೇಹವನ್ನು ತಿರುವನಂತಪುರದ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಸಾಗಿಸಲಾಗಿದೆ.