ದೇವನಹಳ್ಳಿ: ಪಹಣಿ ವಿತರಣೆಯಲ್ಲಿ ಕಂದಾಯ ಇಲಾಖೆಯ ಸಿಬ್ಬಂದಿ ತಾರತಮ್ಯ ಮಾಡುತ್ತಿದ್ದಾರೆ ಮತ್ತು ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂದು ವಿವಿಧ ಸಂಘಟನೆಗಳು ಅಕ್ರೋಶ ವ್ಯಕ್ತ ಪಡಿಸಿದೆ.
ಮಿನಿ ವಿಧಾನಸೌಧ ಆವರಣದ ಪಹಣಿ ವಿತರಣಾ ಕೇಂದ್ರ ಬಳಿ ಮಾತನಾಡಿದ ಕರ್ನಾಟಕ ದಲಿತ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಹರಳೂರು ದೇವರಾಜ್, ತಾಲ್ಲೂಕು ಕೇಂದ್ರದಲ್ಲಿ ಇತರೆ ಇಲಾಖೆಯ ಜತೆಗೆ ಕಂದಾಯ ಕೆಲಸ ಕಾರ್ಯಗಳಿಗೆ ಗ್ರಾಮಾಂತರ ಪ್ರದೇಶದಿಂದ ಅನೇಕ ರೈತರು ಬರುತ್ತಾರೆ. ಅದರಲ್ಲಿ ಪಹಣಿ ಪಡೆಯುವುದು ಒಂದಾಗಿದೆ. ಆದರೆ ಪಹಣಿ ನೀಡುವ ಸಿಬ್ಬಂದಿಗಳು ಭೂ ಮಾಫಿಯಾ ಜತೆ ಶಾಮೀಲಾಗಿದ್ದಾರೆ. ಅಲ್ಲದೆ ಪಹಣಿ ಕಚೇರಿಯ ಒಳಗೆ ಹೋಗಲು ಅವರಿಗೆ ಮುಕ್ತ ಅವಕಾಶವಿದೆ. ಆದರೆ, ರೈತರು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಸರದಿ ಸಾಲಿನಲ್ಲಿ ಕಾದು ಬಳಲಿದರೂ ಕೇಳುವರೇ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗಣಕಯಂತ್ರ ನಿರ್ವಾಹಕರು ಸಮರ್ಪಕ ನಿರ್ವಹಣೆ ಮಾಡದ ಪರಿಣಾಮ ಸತ್ತವರು ದಾಖಲಾತಿಯಲ್ಲಿ ಬದುಕಿರುತ್ತಾರೆ.
ಬದುಕಿದವರು ಮರಣ ಹೊಂದಿರುತ್ತಾರೆ. ತಂಗಿ ಹೆಸರು ಅಕ್ಕನಿಗೆ, ತಂದೆ ಹೆಸರು ದೊಡ್ಡಪ್ಪನಿಗೆ ಬದಲಾವಣೆಯಾದರೆ ತಿದ್ದುಪಡಿಗಾಗಿ ಎಷ್ಟು ಬಾರಿ ಅಲೆಯಬೇಕು. ಕಚೇರಿ ಬಳಿಗೆ ಹೋದರೆ ಆಚೆ ಹೋಗಿ ಎಂದು ಗದರಿಸುತ್ತಾರೆ. ಇಲ್ಲಿ ಹೇಳೋರು ಕೇ ಳೋರು ಯಾರೂ ಇಲ್ಲ ಎಂದರು. ರೈತರಿಗೆ ಪಹಣಿ ಅಮೂಲ್ಯ ದಾಖಲೆಯಾಗಿದೆ. ಸಕಾಲದಲ್ಲಿ ಪಹಣಿ ಸಿಗದೆ ಕೆಲ ಪ್ರಕರಣಗಳಲ್ಲಿ ಜಾಮೀನು ಸಿಗದೇ ಸೆರೆವಾಸ ಅನುಭಸುತ್ತಿರುವ ಅನೇಕ ಉದಾಹರಣೆಗಳಿವೆ, ಭೂಮಾಫಿಯಾಗಳಿಗೆ, ವಿವಿಧ ಪಕ್ಷಗಳ ಮುಖಂಡರಿಗೆ, ಪಹಣಿ ನೀಡಿಕೆಯಲ್ಲಿ ಗಂಟೆಗಟ್ಟಲೇ ವೈಯಕ್ತಿಕ ಕಾಳಜಿ ವಹಿಸುತ್ತಿರುವುದು ಎಷ್ಟು ಸರಿ ಎಂದು ದೂರಿದರು.