ಇಸ್ಲಾಮಾಬಾದ್(ಪಿಟಿಐ): ಪಾಕಿಸ್ತಾನದ ಖೈಬರ್ ಪ್ರಾಂತ್ಯದಲ್ಲಿ ಸೋಮವಾರ ಸುರಿದ ಕುಂಭದ್ರೋಣ ಮಳೆ 26 ಮಂದಿಯನ್ನು ಬಲಿಪಡೆದಿದೆ. ಮಳೆ ಹೊಡೆತಕ್ಕೆ ಸಿಲುಕಿ 100ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಪೇಶಾವರ, ಚಾರ್ಸಡ್ಡಾ, ನೌಶೆರಾ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ಕೆಲವು ವಾಹಿನಿಗಳು ಮಳೆಯಿಂದ ಸುಮಾರು 35 ಮಂದಿ ಮೃತಪಟ್ಟಿದ್ದಾರೆ ಎಂದು ವರದಿ ಮಾಡಿವೆ. ಆದರೆ ಅಧಿಕಾರಿಗಳು ಈ ವರದಿಯನ್ನು ದೃಢಪಡಿಸಿಲ್ಲ.
ಪೇಶಾವರ, ವಾಹಿದ್ ಘಾರಿ, ಚರಾಸಡ್ಡಾ ರಸ್ತೆ, ಲಿಯಾಖತ್ ಅಬಾದ್, ಸಾಧಿಕ್ ಅಬಾದ್ಗಳಲ್ಲಿ ಬಿರುಗಾಳಿಗೆ ಹಲವು ಮನೆಗಳು ನೆಲಕಚ್ಚಿವೆ. ಗಾಯಾಳುಗಳನ್ನು ಪೇಶಾವರ ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ದಾಖಲು ಮಾಡಲಾಗಿದೆ.
ಪ್ರಧಾನಿ ನವಾಜ್ ಷರೀಫ್ ಘಟನೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮಳೆ ಹಾನಿ ಸಂಭವಿಸಿದ ಜಿಲ್ಲೆಗಳಲ್ಲಿ ಚುರುಕಾಗಿ ಪರಿಹಾರ ಕಾರ್ಯಾಚರಣೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.