ಪಾಕಿಸ್ತಾನದ ಸೈನಿಕರು ಬೆಳಗಿನ ಜಾವ 5.30ರ ವೇಳೆಗೆ ಅಪ್ರಚೋದಿತರಾಗಿ ನಡೆಸಿದ ಈ ದಾಳಿಗೆ ಭಾರತದ ಸೈನಿಕರು ಗುಂಡಿನಿಂದಲೇ ಮಾರುತ್ತರ ನೀಡಿದರು. ಗುಂಡಿನ ಚಕಮಕಿ ವೇಳೆ ನಾಗರಿಕರೊಬ್ಬರು ಮೃತಪಟ್ಟಿದ್ದಾರೆ ಎಂದು ಬಿಎಸ್ಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ಯುವಕನನ್ನು ಸಂಜಯ್ ಕುಮಾರ್ ಎಂದು ಗುರುತಿಸಲಾಗಿದೆ. ದಾಳಿ ಸಂದರ್ಭದಲ್ಲಿ ಭಾರತೀಯ ಯೋಧರಿಗೆ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನದ ಸೈನಿಕರು ಕಳೆದ ಶನಿವಾರ ಆರ್.ಎಸ್.ಪುರ ವಲಯದಲ್ಲಿ ಮತ್ತು ಭಾನುವಾರ ಅಖ್ನೂರ್ ವಲಯದಲ್ಲಿ ಕದನ ವಿರಾಮ ಉಲ್ಲಂಘಿಸಿದ್ದರು. ಪಾಕಿಸ್ತಾನದ ಸೈನಿಕರು ಜುಲೈನಲ್ಲಿ 18 ಬಾರಿ ಕದನ ವಿರಾಮವನ್ನು ಉಲ್ಲಂಘಿಸಿದ್ದಾರೆ. ಈ ಘಟನೆಗಳಲ್ಲಿ ಒಟ್ಟು ಮೂವರು ಯೋಧರು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ, 14 ಮಂದಿ ಗಾಯಗೊಂಡಿದ್ದಾರೆ.