ಚಿಕ್ಕಬಳ್ಳಾಪುರ: ಆಗ ಜಕ್ಕಲಮಡಗು ಸಿಲ್ಟ್ ಜಲಾಶಯ ಸ್ಥಳ ಈಗಿನಂತಿರಲಿಲ್ಲ. ಅಣೆಕಟ್ಟು ನಿರ್ಮಾಣ, ಕಟ್ಟಡ ಕಾಮಗಾರಿ ಆಮೆವೇಗದಲ್ಲಿ ಸಾಗುತ್ತಿತ್ತು. ಇದನ್ನು ನಗರಸಭೆಯ ಕೆಲ ಸದಸ್ಯರು ವಿರೋಧಿಸಿದರೆ, ಇನ್ನೂ ಕೆಲವರು ಸಮರ್ಥಿಸಿಕೊಳ್ಳುತ್ತಿದ್ದರು. ಇಲ್ಲಿನ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳ್ಳುವುದೇ ಇಲ್ಲ ಎಂಬ ಮಾತು ಸಹ ಕೇಳಿ ಬಂದಿತ್ತು. ಸದ್ಯಕ್ಕೆ ಪರಿಸ್ಥಿತಿ ಬಹಳಷ್ಟು ಸುಧಾರಿಸಿದೆ. ಆದರೆ ಕಪ್ಪುಚುಕ್ಕೆ ಎಂಬಂತೆ ನಗರಸಭೆ ಕಟ್ಟಡ ಪಾಳು ಬಿದ್ದಿದೆ.
ಜಕ್ಕಲಮಡಗು ಜಲಾಶಯ ಸ್ಥಳಕ್ಕೆ ನಗರಸಭೆ ಅಧಿಕಾರಿಗಳಾಗಲೀ ಜನಪ್ರತಿನಿಧಿಗಳಾಗಲೀ ಹೆಚ್ಚು ಭೇಟಿ ನೀಡುತ್ತಿರಲಿಲ್ಲ. ಅಲ್ಲಿನ ಪರಿಸ್ಥಿತಿ ಪರಿಶೀಲಿಸುವ ನೆಪದಲ್ಲಿ ಮೊದಲ ಬಾರಿಗೆ 2011ರ ಮೇ 25ರಂದು ಜಕ್ಕಲಮಡಗು ಜಲಾಶಯ ಸ್ಥಳದ ಆವರಣದಲ್ಲಿ ಆಗಿನ ನಗರಸಭೆ ಅಧ್ಯಕ್ಷ ಬಿ.ಎ.ಲೋಕೇಶ್ಕುಮಾರ್ ಅಧ್ಯಕ್ಷತೆಯಲ್ಲಿ ನಗರಸಭೆ ಬಜೆಟ್ ಮಂಡನೆಯಾಯಿತು. ನಂತರ ಅಲ್ಲಿ ಸಭೆ ನಡೆಯಲೇ ಇಲ್ಲ.
2009ರವರೆಗೆ ಜಕ್ಕಲಮಡಗು ಜಲಾಶಯದ ಪರಿಸ್ಥಿತಿ ಅಸ್ಪಷ್ಟವಾಗಿತ್ತು. ₨ 27 ಕೋಟಿ ವೆಚ್ಚದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಜಲಾಶಯ ಪುನರ್ನಿರ್ಮಾಣಕ್ಕೆ ಮುಂದಾಗುವವರೆಗೆ ಕಾಮಗಾರಿ ಬಗ್ಗೆ ಸ್ಪಷ್ಟ ಕಲ್ಪನೆ ಇರಲಿಲ್ಲ. ನೀರಿನ ಹಂಚಿಕೆ ಕುರಿತು ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ನಗರಸಭೆಗಳ ನಡುವಿನ ಶೀತಲಸಮರ ಕಾಮಗಾರಿಗೆ ಮುಳುವಾಗಿತ್ತು. 2009ರವರೆಗೆ ಒಟ್ಟು 1 ಸಾವಿರ ಎಂಎಲ್ಡಿ ಮಾತ್ರ ನೀರಿನ ಶೇಖರಣಾ ಸಾಮರ್ಥ್ಯ ಹೊಂದಿದ್ದ ಜಲಾಶಯ ಈಗ ಕೊಂಚ ಅಭಿವೃದ್ಧಿಗೊಂಡು 4,390 ಎಂಎಲ್ಡಿ ನೀರಿನ ಶೇಖರಣಾ ಸಾಮರ್ಥ್ಯ ಗಳಿಸಿದೆ.
ಸೆಪ್ಟೆಂಬರ್ ಮೊದಲನೇ ವಾರದಿಂದ ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ನಗರಗಳಿಗೆ ಕುಡಿಯುವ ನೀರು ಪೂರೈಸಲು ಸಿದ್ಧತೆ ನಡೆಯುತ್ತಿರುವ ಸಂದರ್ಭದಲ್ಲಿ ಹೀಗೆ ನೆನಪು ಮೆಲುಕು ಹಾಕಿದ್ದು ನಗರದ ನಿವಾಸಿ ಅಭಿಷೇಕ್ ಸೀತಾರಾಂ. ಜಲಾಶಯ ಭರ್ತಿಯಾಗಿರುವ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಅವರು, ಅಲ್ಲಿನ ಪರಿಸ್ಥಿತಿ ಬಗ್ಗೆ ಕೊಂಚ ಬೇಸರ ವ್ಯಕ್ತಪಡಿಸಿದರು.
ಕೆಂಪು ನೀರಿನದ್ದೇ ಚರ್ಚೆ: 30–40 ವರ್ಷಗಳ ಹಿಂದೆ ಜಕ್ಕಲಮಡಗು ಜಲಾಶಯದಿಂದ ಕೆಂಪು ನೀರು ಪೂರೈಕೆಯಾಗುತ್ತಿತ್ತು. ಹೋಟೆಲ್, ಕ್ಯಾಂಟೀನ್ ಅಥವಾ ಮನೆಗಳಲ್ಲಿ ಎಲ್ಲಿಯಾದರೂ ಕೆಂಪು ನೀರು ಕಂಡರೆ ಸಾಕು, ಇದು ಜಕ್ಕಲಮಡಗು ನೀರು ಎಂದೇ ತಿಳಿಯುತ್ತಿದ್ದರು. ಆರೋಗ್ಯಕ್ಕೆ ಹಾನಿಯಾಗುವುದಿಲ್ಲ ಎಂಬ ವಿಶ್ವಾಸದಿಂದಲೇ ಆ ನೀರನ್ನು ಕುಡಿಯುತ್ತಿದ್ದರು. ಕೆಲ ವರ್ಷಗಳವರೆಗೆ ಅದೇ ರೂಢಿಯಾಗಿತ್ತು ಎಂದು ಅವರು ತಿಳಿಸಿದರು.
ಶುದ್ಧವಾದ ನೀರನ್ನೇ ಕುಡಿಯಬೇಕೆಂದು ಕೆಲ ಮನೆಗಳವರು ಸ್ಫಟಿಕ (ಆಲಂ) ಇಟ್ಟುಕೊಳ್ಳುತ್ತಿದ್ದರು. ಅದನ್ನು ನೀರಿನಲ್ಲಿ ಹಾಕಿದ ಕೂಡಲೇ ಮಣ್ಣು ಮತ್ತು ಸೂಕ್ಷ್ಮಾಣುಗಳು ತಳ ಸೇರಿ ನೀರು ಶುದ್ಧವಾಗುತ್ತಿತ್ತು.
ಸಿಹಿ ನೀರು ಕುಡಿದಷ್ಟೇ ಸಮಾಧಾನವಾಗುತ್ತಿತ್ತು. ನಂತರದ ವರ್ಷಗಳಲ್ಲಿ ಜಲಾಶಯದ ಸ್ಥಳದಲ್ಲೇ ಎರಡು ಮಹಡಿಗಳ ಜಲ ಶುದ್ಧೀಕರಣ ಘಟಕದ ಕಟ್ಟಡ ನಿರ್ಮಿಸಲಾಯಿತು. ಆಗಿನಿಂದ ಎಲ್ಲರಿಗೂ ಶುದ್ಧ ನೀರು ದೊರೆಯಲಾರಂಭಿಸಿತು ಎಂದು ಅವರು ನೆನಪಿಸಿಕೊಂಡರು.
ಪಾಳುಬಿದ್ದ ಕಟ್ಟಡ ಸದ್ಬಳಕೆಯಾಗಲಿ: ಕೆಂಪು ಮಣ್ಣಿನ ನೀರು ಹೇಗೆ ಶುದ್ಧಗೊಳ್ಳುತದೆ ಎಂಬುದನ್ನು ತಿಳಿದುಕೊಳ್ಳಲೆಂದೇ ಕೆಲ ಮಂದಿ ಜಲ ಶುದ್ಧೀಕರಣ ಘಟಕಕ್ಕೆ ಭೇಟಿ ನೀಡುತ್ತಿದ್ದರು. ಮಣ್ಣು ಮತ್ತು ಸೂಕ್ಷ್ಮಾಣುಗಳಿಂದ ಶುದ್ಧ ನೀರು ಬೇರ್ಪಡುವ ರೀತಿ ಕಂಡು ಅಚ್ಚರಿ ವ್ಯಕ್ತಪಡಿಸುತ್ತಿದ್ದರು. ಆದರೆ ಈಗ ಅದೆಲ್ಲ ಇತಿಹಾಸ. ಪಾಳು ಬಿದ್ದಿರುವ ಕಟ್ಟಡವನ್ನು ಕಂಡರೆ ಈಗ ತುಂಬಾ ಬೇಸರವಾಗುತ್ತದೆ ಎಂದು ಅವರು ತಿಳಿಸಿದರು.
ವರ್ಷಗಳಾದರೂ ಕಿಟಕಿ, ಬಾಗಿಲು, ಪೈಪ್ ಮತ್ತು ಕೆಲ ಉಪಕರಣ ಹೊರತುಪಡಿಸಿದರೆ ಕಟ್ಟಡ ಈಗಲೂ ಬಳಕೆಗೆ ಯೋಗ್ಯವಾಗಿದೆ. ಜಲಾಶಯದಂತಹ ಸುಂದರ ಸ್ಥಳದಲ್ಲಿ ಇಂತಹ ಕಟ್ಟಡ ಪಾಳು ಬಿಡಬಾರದು. ಮೈಸೂರಿನ ಕೆಆರ್ಎಸ್ ಆಣೆಕಟ್ಟು ವೀಕ್ಷಣೆಗೆ ಜನರು ಬರುವ ಮಾದರಿಯಲ್ಲೇ ಇಲ್ಲೂ ಜನರು ಜಲಾಶಯ ವೀಕ್ಷಣೆಗೆ ಬರುವಂತೆ ವ್ಯವಸ್ಥೆ ಮಾಡಬೇಕು. ಪಾಳುಬಿದ್ದ ಕಟ್ಟಡವನ್ನು ಅತಿಥಿಗೃಹ ಅಥವಾ ಉಪಾಹಾರ ಮಂದಿರದ ಸ್ವರೂಪದಲ್ಲಿ ಸದ್ಬಳಕೆ ಮಾಡಿಕೊಂಡರೆ ಎಲ್ಲರಿಗೂ ಪ್ರಯೋಜನವಾಗುತ್ತದೆ ಎಂದು ಅವರು ಹೇಳಿದರು.
ಸದ್ಬಳಕೆಗೆ ಚಿಂತನೆ: ಕಟ್ಟಡದಲ್ಲಿದ್ದ ಕಿಟಕಿ, ಬಾಗಿಲು, ಪೈಪು ಮತ್ತು ಇತರ ಕಬ್ಬಿಣದ ಉಪಕರಣಗಳನ್ನು ಹರಾಜು ಹಾಕಿ ಬಂದ ಸುಮಾರು ಎರಡೂವರೆ ಕೋಟಿ ರೂಪಾಯಿಯನ್ನು ನಗರದ ಹಳೆಯ ಬಸ್ ನಿಲ್ದಾಣದ ಬಳಿ ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕೆ ವಿನಿಯೋಗಿಸಲಾಗುತ್ತಿದೆ. ಪಾಳು ಬಿದ್ದ ಕಟ್ಟಡವನ್ನು ಸದ್ಬಳಕೆ ಮಾಡುವ ಉದ್ದೇಶವಿದೆ. ಆದರೆ ಯಾವ ರೀತಿಯಲ್ಲಿ ಬಳಸಬೇಕೆಂದು ನಿರ್ಧರಿಸಿಲ್ಲ ಎಂದು ನಗರಸಭೆ ಆಯುಕ್ತ ವಿ.ಮುನಿಶಾಮಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.
ಕಟ್ಟಡದ ಬದಿಯಲ್ಲೇ ವರ್ಷಗಳಿಂದ ಲಾರಿಯೊಂದು ನಿಂತಿದ್ದು, ಅದರ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗಿದೆ. ಆಗಿನ ದಿನಗಳಲ್ಲಿ ಆ ಲಾರಿಯನ್ನು ನೀರಿನ ಟ್ಯಾಂಕರ್ ರೂಪದಲ್ಲಿ ಬಳಸಲಾಗುತ್ತಿತ್ತು. ಅದು ಗುತ್ತಿಗೆದಾರರಿಗೆ ಸೇರಿದ್ದು, ತೆಗೆದುಕೊಂಡು ಹೋಗುವಂತೆ ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಯೋಜನೆ ರೂಪಿಸಿ ಜಲಾಶಯವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.