ನವದೆಹಲಿ (ಪಿಟಿಐ): ನನೆಗುದಿಗೆ ಬಿದ್ದಿದ್ದ ಕಡತಗಳನ್ನು ಒಂದು ತಿಂಗಳೊಳಗೆ ವಿಲೇವಾರಿ ಮಾಡಿರುವ ಗೃಹ ಸಚಿವಾಲಯ, ಅನೇಕ ವರ್ಷಗಳಿಂದ ದೂಳು ಹಿಡಿದಿದ್ದ ಸುಮಾರು 1.5 ಲಕ್ಷ ಕಡತಗಳನ್ನು ನಾಶ ಮಾಡಿದೆ.
ಹಳೆಯ ಕಡತಗಳನ್ನು ಶೀಘ್ರ ವಿಲೇವಾರಿ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಸಚಿವಾಲಯಗಳಿಗೆ ಸೂಚಿಸಿದ್ದ ಹಿನ್ನೆಲೆಯಲ್ಲಿ ‘ಕಡತ ಯಜ್ಞ’ ಕೈಗೊಂಡ ಗೃಹ ಸಚಿವಾಲಯಕ್ಕೆ ಅನೇಕ ಆಸಕ್ತಿಕರ ಕಡತಗಳು ಮತ್ತು ಐತಿಹಾಸಿಕ ಘಟನೆಗಳ ದಾಖಲೆಗಳು ದೊರಕಿವೆ.
ಸ್ವತಂತ್ರ ಭಾರತದ ಮೊದಲ ಗರ್ವನರ್ ಜನರಲ್ ಆಗಿದ್ದ ಲಾರ್ಡ್ ಮೌಂಟ್ಬ್ಯಾಟನ್ ಅವರಿಗೆ ತಮ್ಮ ದೇಶಕ್ಕೆ ವಾಪಸು ಹೋಗಲು ₨64 ಸಾವಿರ ಗೌರವಧನದ ರೂಪದಲ್ಲಿ ಮಂಜೂರು ಮಾಡಿದ್ದ ಕಡತ ಸಿಕ್ಕಿದೆ. ಇದಕ್ಕೆ ರಾಷ್ಟ್ರಪತಿ ಸಹಿ ಹಾಕಿದ್ದಾರೆ.
ದೇಶದ ಮೊದಲ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಅವರು ಪಿಂಚಣಿ ಪಡೆಯಲು ನಿರಾಕರಿಸಿದ್ದು ಮತ್ತು ಇದನ್ನು ಸರ್ಕಾರದ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ವರ್ಗಾಯಿಸಿದ್ದರ ದಾಖಲೆ ದೊರಕಿದೆ. ಹಾಗೆಯೇ ಎರಡನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರೂ ವೇತನ ನಿರಾಕರಿಸಿದ್ದರು. ಅದನ್ನೂ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ನೀಡಿದ್ದ ವಿವರ ಪತ್ತೆಯಾಗಿದೆ.
ಮತ್ತೊಂದು ಕಡತದಲ್ಲಿ, ಮಹಾತ್ಮ ಗಾಂಧಿ ಅವರ ಸಾವನ್ನು ಅಧಿಕೃತವಾಗಿ ಘೋಷಿಸುವುದಕ್ಕೂ ಮೊದಲು ನಡೆದ ಸಂಪುಟ ಸಭೆಯ ವಿವರ ಇದೆ.
‘ಹಳೆಯ ಕಡತಗಳನ್ನು ‘ಎ’, ‘ಬಿ’ ಮತ್ತು ‘ಸಿ’ ಎಂದು ವಿಂಗಡಿಸಲಾಯಿತು. ಐದು ವರ್ಷಗಳಷ್ಟು ಹಳೆಯದ್ದನ್ನು ‘ಎ’, 10ರಿಂದ 15 ವರ್ಷ ಹಿಂದಿನದ್ದನ್ನು ‘ಬಿ’ ಮತ್ತು 15 ವರ್ಷಗಳಿಗೂ ಹಳೆಯ ಕಡತಗಳನ್ನು ‘ಸಿ’ ಎಂದು ವಿಭಜಿಸಲಾಯಿತು. ನಂತರ ಐತಿಹಾಸಿಕ ಮಹತ್ವವುಳ್ಳ ಕಡತಗಳನ್ನು ರಾಷ್ಟ್ರೀಯ ಪತ್ರಾಗಾರಕ್ಕೆ ಕಳುಹಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಧಾನಿ ಅವರ ಸೂಚನೆ ಮೇರೆಗೆ ಹಳೆಯ ಕಡತಗಳನ್ನು ವಿಲೇವಾರಿ ಮಾಡಿರುವ ವಿವಿಧ ಸಚಿವಾಲಯಗಳು, ಅನುಪಯುಕ್ತ ಕಡತಗಳನ್ನು ನಾಶ ಮಾಡಿವೆ. ಅನೇಕ ವರ್ಷಗಳಿಂದ ಪೇರಿಸಿ ಇಟ್ಟಿದ್ದ ಮುರಿದ ಪೀಠೋಪಕರಣಗಳನ್ನೂ ಸ್ಥಳಾಂತರಿಸಿವೆ.