ನವದೆಹಲಿ (ಪಿಟಿಐ): ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿಯಿಂದ (ಪಿಸಿಎ) ಹಿರಿಯ ಮುಖಂಡ ಯೋಗೇಂದ್ರ ಯಾದವ್ ಅವರನ್ನು ಹೊರಗಿಡಲು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಭೆಯಲ್ಲಿ ಬುಧವಾರ ನಿರ್ಧರಿಸಲಾಗಿದೆ.
ಅರವಿಂದ್ ಕೇಜ್ರಿವಾಲ್ ಅವರ ಕಾರ್ಯ ವೈಖರಿಯನ್ನು ಯಾದವ್ ಹಾಗೂ ಪಕ್ಷದ ಮತ್ತೊಬ್ಬ ಹಿರಿಯ ಮುಖಂಡ ಪ್ರಶಾಂತ್ ಭೂಷಣ್ ಅವರು ಪ್ರಶ್ನಿಸಿದ ಬೆನ್ನಲ್ಲೇ ಈ ನಿರ್ಧಾರ ಹೊರಬಿದ್ದಿದೆ.
‘ಪಿಸಿಎಯಿಂದ ಹೊರಗೆ ಇಡುವುದಲ್ಲದೇ ಪಕ್ಷದ ವಕ್ತಾರದ ಹುದ್ದೆಯಿಂದಲೂ ಅವರನ್ನು ಶೀಘ್ರವೇ ತೆಗೆದು ಹಾಕಲಾಗುವುದು’ ಎಂದು ಪಕ್ಷದ ಮೂಲಗಳು ಹೇಳಿವೆ.
ಪಕ್ಷದ ರಾಷ್ಟ್ರೀಯ ಸಂಚಾಲಕ ಹುದ್ದೆಗೆ ಕೇಜ್ರಿವಾಲ್ ನೀಡಿದ್ದ ರಾಜೀನಾಮೆ ಬಗ್ಗೆ ರಾಷ್ಟ್ರೀಯ ಕಾರ್ಯಕಾರಿಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆಯೇ ಎಂಬ ಪ್ರಶ್ನೆಗೆ ‘ಇಲ್ಲ’ ಎಂದು ಪಕ್ಷದ ಮತ್ತೊಬ್ಬ ಮುಖಂಡ ತಿಳಿಸಿದ್ದಾರೆ.
‘ರಾಷ್ಟ್ರೀಯ ದಿನಪತ್ರಿಕೆಯೊಂದರಲ್ಲಿ ಪ್ರಕಟವಾದ ಲೇಖನವೊಂದಕ್ಕೆ ಮಾಹಿತಿ ಸೋರಿಕೆ ಮಾಡಿದಕ್ಕಾಗಿ ಯಾದವ್ ಅವರನ್ನು ಪಕ್ಷದ ಕೆಲವು ಮುಖಂಡರು ತರಾಟೆಗೆ ತೆಗೆದುಕೊಂಡರು’ ಎಂದು ಮೂಲಗಳು ಹೇಳಿವೆ.