ಬೆಂಗಳೂರು: ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನಿಸುವಂತೆ ಒತ್ತಾಯಿಸಿ ಹುದ್ದೆಯ ಆಕಾಂಕ್ಷಿಗಳು ಇದೇ 21ರಿಂದ ಎರಡು ದಿನಗಳ ಕಾಲ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
‘ಸರ್ಕಾರ 2009ರಿಂದ ಪಿಎಸ್ಐ ಹುದ್ದೆಗೆ ಅರ್ಜಿ ಆಹ್ವಾನಿಸಿಲ್ಲ. ಇದರಿಂದಾಗಿ ಎಸ್ಐ ಆಗಬೇಕೆಂಬ ಕನಸು ಕಟ್ಟಿಕೊಂಡು ಅಭ್ಯಾಸ ನಡೆಸಿದವರ ವಯೋಮಿತಿ ಮೀರುತ್ತಿದೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಪಿಎಸ್ಐ ಹುದ್ದೆಗೆ ವಯೋಮಿತಿ ಕಡಿಮೆ ಇದೆ. ಹೀಗಾಗಿ ಸರ್ಕಾರ ಕೂಡಲೇ ವಯೋಮಿತಿಯನ್ನು ಏರಿಸಿ ಹುದ್ದೆಗೆ ಅರ್ಜಿ ಆಹ್ವಾನಿಸಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
‘ಹುದ್ದೆಯ ಎಲ್ಲ ಆಕಾಂಕ್ಷಿಗಳು ಈ ಹೋರಾಟದಲ್ಲಿ ಪಾಲ್ಗೊಂಡು ಸರ್ಕಾರಕ್ಕೆ ಸಮಸ್ಯೆಯ ಗಂಭೀರತೆಯ ಅರಿವು ಮೂಡಿಸಬೇಕು’ ಎಂದು ಪ್ರತಿಭಟನಾಕಾರರು ಮನವಿ ಮಾಡಿದ್ದಾರೆ.