ಚನ್ನಪಟ್ಟಣ: ಗ್ರಾಮ ಪಂಚಾಯಿತಿಯಲ್ಲಿ ನಡೆಯುತ್ತಿರುವ ಅವ್ಯವಹಾರಗಳಿಗೆ ಕಡಿವಾಣ ಹಾಕದಿದ್ದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಸಿ.ಪಿ.ಯೋಗೇಶ್ವರ್ ಖಡಕ್ ಎಚ್ಚರಿಕೆ ನೀಡಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕಿನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಸಿದ ಯೋಗೇಶ್ವರ್, ಗ್ರಾಮ ಪಂಚಾಯಿತಿಗಳಲ್ಲಿ ಅವ್ಯವಹಾರ ಮಿತಿಮೀರಿರುವ ಸುದ್ದಿಗಳು ಬರುತ್ತಿವೆ. ಇದನ್ನು ಕೇಳಿಕೊಂಡು ಸುಮ್ಮನೆ ಕೂರುವುದಿಲ್ಲ. ಪಿಡಿಒಗಳು ಅವ್ಯವಹಾರ ನಡೆಯದಂತೆ ಎಚ್ಚರಿಕೆ ವಹಿಸದಿದ್ದರೆ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸರ್ಕಾರ ಗ್ರಾಮ ಪಂಚಾಯಿತಿಗಳಿಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡುತ್ತಿದೆ. ಆದರೆ ಅದನ್ನು ಫಲಾನುಭವಿಗೆ ತಲುಪಿಸುವಲ್ಲಿ ಗ್ರಾ.ಪಂ. ಆಡಳಿತಯಂತ್ರ ವಿಫಲಗೊಂಡಿರುವುದು ಸತ್ಯ. ಯಾರದೋ ಮುಲಾಜಿಗೆ ಒಳಗಾಗಿ ಕಳ್ಳ ಬಿಲ್ಗಳನ್ನು ಬಿಡುಗಡೆ ಮಾಡುವುದನ್ನು ಪಿಡಿಒಗಳು ಮೊದಲು ನಿಲ್ಲಿಸಬೇಕು. ದನದ ಕೊಟ್ಟಿಗೆ ನಿರ್ಮಾಣ, ಸಾಮೂಹಿಕ ಕಣ ನಿರ್ಮಾಣ ಸೇರಿದಂತೆ ಜನರಿಗೆ ಉಪಯೋಗವಾಗುವ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಗ್ರಾಮೀಣಾಭಿವೃದ್ಧಿ ಮಾಡಲು ಪ್ರಮಾಣಿಕವಾಗಿ ಪ್ರಯತ್ನಿಸಬೇಕು ಎಂದು ತಾಕೀತು ಮಾಡಿದರು.
ಅವ್ಯವಹಾರ ನಡೆಸಿರುವ ಆರೋಪಗಳಿರುವ ತಾಲ್ಲೂಕಿನ ಕೆಲವು ಎಂಜಿನಿಯರ್ಗಳ ವಿರುದ್ಧ ತನಿಖೆ ಆರಂಭಗೊಂಡಿದೆ. ಮುಂದಿನ ದಿನಗಳಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳುವುದು ಖಚಿತ. ಪಿಡಿಒಗಳು ಅಭಿವೃದ್ಧಿ ಮರೆತು ಅವ್ಯವಹಾರದಲ್ಲೇ ಮುಂದುವರೆದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಪತ್ರ ಬರೆಯುವುದು ಖಚಿತ ಎಂದರು.ಮುಂದಿನ ದಿನಗಳಲ್ಲಿ ಪ್ರತಿ ಎರಡು ತಿಂಗಳಿಗೊಮ್ಮೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುವುದು. ನಿಮ್ಮ ಸಾಧನೆಯನ್ನು ನೀವು ವೀಡಿಯೋ ಸಮೇತ ಸಭೆಗೆ ವಿವರಿಸಬೇಕು ಎಂದು ಯೋಗೇಶ್ವರ್ ಪಿಡಿಒಗಳಿಗೆ ಸೂಚಿಸಿದರು. ತಾ.ಪಂ ಕಾರ್ಯನಿರ್ವಹಣಾಧಿಕಾರಿ ರೆಡ್ಡಪ್ಪ, ಪಿಡಿಒಗಳು, ಪಂಚಾಯತ್ ರಾಜ್ ಇಲಾಖೆಯ ಸಿಬ್ಬಂದಿ ಇದ್ದರು.
ಕಿರೀಟ ಧಾರಣೆ ಮಹೋತ್ಸವ
ಮಾಗಡಿ: ತಾಲ್ಲೂಕಿನ ತಿಪ್ಪಸಂದ್ರ ಹೋಬಳಿಯ ಸಂಕೀಘಟ್ಟ ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ 9.30ಕ್ಕೆ ವೇಣುಗೋಪಾಲ್ ಸ್ವಾಮಿ ದೇವರಿಗೆ ಕಾರ್ತಿಕ ಮಹೋತ್ಸವ ಅಂಗವಾಗಿ ನೂತನವಾಗಿ ಭಕ್ತರೊಬ್ಬರು ಮಾಡಿಸಿ ಕೊಟ್ಟಿರುವ ಬೆಳ್ಳಿ ಕಿರೀಟ ಧಾರಣೆ ಮಹೋತ್ಸವ ನಡೆಯಲಿದೆ ಎಂದು ಶ್ಯಾನುಭೋಗ ಶ್ರೀನಿವಾಸ ಮೂರ್ತಿ ತಿಳಿಸಿದ್ದಾರೆ.
ದೇವರಿಗೆ ವಿಶೇಷ ಅಲಂಕಾರ ಮಾಡಲಾಗುವುದು. ವಿಶೇಷ ಹೋಮ ಹವನ ಪೂಜಾಧಿಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.