ನವದೆಹಲಿ (ಪಿಟಿಐ): ಕೇಂದ್ರ ಸರ್ಕಾರವು ತಮ್ಮ ಅಧಿಕೃತ ನಿವಾಸಕ್ಕೆ ವಿದ್ಯುತ್ ಹಾಗೂ ನೀರು ಸರಬರಾಜು ನಿಲ್ಲಿಸಿದ ಮಾರನೆಯ ದಿನವೇ ಮಾಜಿ ಸಚಿವ ಅಜಿತ್ ಸಿಂಗ್ ಅವರು ಇದೇ ತಿಂಗಳ ೨೫ರೊಳಗೆ ಸರ್ಕಾರಿ ಬಂಗಲೆ ತೆರವುಗೊಳಿಸುವುದಾಗಿ ತಿಳಿಸಿದ್ದಾರೆ.
‘ನಾನು ೩೬ ವರ್ಷಗಳಿಂದ ಇಲ್ಲಿ ನೆಲೆಸಿದ್ದೇನೆ. ನನ್ನ ತಂದೆ ( ದಿ.ಚೌಧರಿ ಚರಣ್ ಸಿಂಗ್) ೧೯೭೮ರಲ್ಲಿ ಇಲ್ಲಿಗೆ ಬಂದಿದ್ದರು. ಈ ಬಂಗಲೆ ತೆರವುಗೊಳಿಸುವ ಮುನ್ನ ಅನೇಕ ಸಂಗತಿಗಳನ್ನು ನಾನು ಇತ್ಯರ್ಥಪಡಿಸಿಕೊಳ್ಳಬೇಕಿದೆ. ಬಂಗಲೆ ತೆರವು ಮಾಡುವಂತೆ ಆಗಸ್ಟ್ ೧೧ಕ್ಕೆ ನನಗೆ ನೋಟಿಸ್ ಬಂದಿತ್ತು. ಇದೇ ೨೪, ೨೫ ರಂದು ನಾನು ಇಲ್ಲಿಂದ ನಿರ್ಗಮಿಸುವೆ. ಈಗ ಪಿತೃಪಕ್ಷ. ಅದು ಮುಗಿದ ಮೇಲೆ ನಾನು ಇಲ್ಲಿಂದ ತೆರಳುವೆ’ ಎಂದು ತಿಳಿಸಿದ್ದಾರೆ.