ಬೆಂಗಳೂರು: ಬಾಹ್ಯ ಅಭ್ಯರ್ಥಿಯಾಗಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಬರೆದು ಉತ್ತೀರ್ಣರಾದವರಿಗೆ ಪದವಿ ಕಾಲೇಜುಗಳಲ್ಲಿ ಪ್ರವೇಶ ನೀಡದಿರುವ ಸಂಬಂಧ ಹೊರಡಿಸಿರುವ ಆದೇಶವನ್ನು ವಾಪಸ್ ಪಡೆಯಬೇಕು ಎಂದು ವಿಧಾನ ಪರಿಷತ್ ಉಪ ಸಭಾಪತಿ ಪುಟ್ಟಣ್ಣ ಸೋಮವಾರ ಆಗ್ರಹಿಸಿದರು.
ಈ ತೀರ್ಮಾನದಿಂದಾಗಿ ಬೆಂಗಳೂರು ವ್ಯಾಪ್ತಿಯಲ್ಲಿ ಸುಮಾರು 25 ಸಾವಿರ ವಿದ್ಯಾರ್ಥಿಗಳು ಸಂಕಷ್ಟಕ್ಕೀಡಾಗಿದ್ದು, ಬಡ ವಿದ್ಯಾರ್ಥಿಗಳ ಭವಿಷ್ಯವನ್ನು ಮೊಟಕುಗೊಳಿಸುವ ಹುನ್ನಾರ ಇದರ ಹಿಂದೆ ಇದೆ ಎಂದು ಆರೋಪಿಸಿದರು.
ತಕ್ಷಣ ಸರ್ಕಾರ ಮಧ್ಯಪ್ರವೇಶಿಸಿ ಆದೇಶ ವಾಪಸಾತಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
‘ದೂರ ಶಿಕ್ಷಣದ ಪದ್ಧತಿಯ ಅಡಿಯಲ್ಲಿ ಶಿಕ್ಷಣ ಪಡೆಯಲು ಸರ್ಕಾರ ದೀರ್ಘ ಕಾಲದಿಂದ ಅವಕಾಶ ನೀಡುತ್ತಾ ಬಂದಿದೆ. ಈ ಪದ್ಧತಿಯಲ್ಲಿ ಶಿಕ್ಷಣ ಪಡೆದವರಿಗೆ ಪ್ರಮಾಣಪತ್ರ, ಉದ್ಯೋಗವನ್ನೂ ಸರ್ಕಾರ ನೀಡುತ್ತಾ ಬಂದಿದೆ. ಹೀಗಿರುವಾಗ ಇಂತಹ ಆದೇಶ ಹೊರಡಿಸುವ ಅಗತ್ಯ ಏನಿತ್ತು? ಹಾಗಿದ್ದರೆ ಸರ್ಕಾರ ಈ ಶಿಕ್ಷಣ ಪದ್ಧತಿಯನ್ನೇ ರದ್ದು ಮಾಡಲಿ’ ಎಂದು ಅವರು ಹೇಳಿದರು.
ಸಾವಿರಾರು ಬಡ ವಿದ್ಯಾರ್ಥಿಗಳು ಕೆಲಸ ಮಾಡಿಕೊಂಡು ದೂರ ಶಿಕ್ಷಣದ ಮೂಲಕ ವ್ಯಾಸಾಂಗ ಮಾಡುತ್ತಿದ್ದಾರೆ. ಈ ಆದೇಶದಿಂದ ಈ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕುತ್ತು ಬಂದಿದ್ದು, ಉನ್ನತ ಶಿಕ್ಷಣ ಇಲಾಖೆಯು ತಕ್ಷಣ ಮಕ್ಕಳ ಹಿತವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಹೇಳಿದರು.
ರಜನೀಶ್ ಗೋಯಲ್ ವಿರುದ್ಧ ಟೀಕೆ: ಇದೇ ಸಂದರ್ಭದಲ್ಲಿ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಜನೀಶ್ ಗೋಯಲ್ ವಿರುದ್ಧ ಪುಟ್ಟಣ್ಣ ವಾಗ್ದಾಳಿ ನಡೆಸಿದರು.
ರಜನೀಶ್ ಅವರು ಇಲಾಖೆಗೆ ಬಂದ ನಂತರ ಕಡತ ವಿಲೇವಾರಿ ಸರಿಯಾಗಿ ನಡೆಯುತ್ತಿಲ್ಲ. ಬಿಬಿಎಂಪಿಯಿಂದ ಹೊರ ಹಾಕಿದವರನ್ನು ಉನ್ನತ ಶಿಕ್ಷಣ ಇಲಾಖೆಗೆ ತಂದು ಕೂರಿಸಲಾಗಿದೆ ಎಂದು ದೂರಿದರು.
‘ಗೋಯಲ್ ವಿರುದ್ಧ ನಾವು ಮಾಡಿದ್ದ ಅವ್ಯವಹಾರ ಆರೋಪದ ತನಿಖೆಗೆ ಮುಖ್ಯಮಂತ್ರಿಯವರು ನೇಮಿಸಿದ್ದ ಐಎಎಸ್ ಅಧಿಕಾರಿ ಕೃಷ್ಣರಾವ್ ನೇತೃತ್ವದ ಸಮಿತಿಯು ವರದಿ ಸಲ್ಲಿಸಿದ್ದು, ವರದಿ ಅನ್ವಯ ಕ್ರಮ ಕೈಗೊಳ್ಳದೇ ಹೋದರೆ ಮುಖ್ಯಮಂತ್ರಿ ಮನೆ ಮುಂದೆ ಧರಣಿ ನಡೆಸುತ್ತೇವೆ’ ಎಂದು ಪುಟ್ಟಣ್ಣ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.