ಹಾನಗಲ್: ನಡೆದಾಡುವ ದೇವ ರೆಂದು ಪ್ರಸಿದ್ಧರಾಗಿರುವ ಪಂಂಡಿತ ಪುಟ್ಟರಾಜರ ಜನ್ಮ ಶತಮಾನೋತ್ಸವ ಮತ್ತು ಪಂಡಿತ ಪಂಚಾಕ್ಷರಿ ಗವಾಯಿಯವರ ನಾಟ್ಯ ಸಂಘದ 75ನೇ ವರ್ಷದ ವಜ್ರಮಹೋತ್ಸವದ ಅಂಗವಾಗಿ ‘ಶ್ರೀಗುರು ಪುಟ್ಟರಾಜರ ಮಹಾಜ್ಯೋತಿ’ ನಾಡಿನೆಲ್ಲೆಡೆ ಸಂಚರಿ ಸಲಿದೆ ಎಂದು ಗದುಗಿನ ಶತಮಾನೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ನಿಂಗಪ್ಪ ಕೆಂಗಾರ ಹೇಳಿದರು.
ಹಾನಗಲ್ ಲಿಂಗೈಕ್ಯ ಕುಮಾರ ಶಿವಯೋಗಿಗಳಿಂದ ಪಂಡಿತ ಪಂಚಾಕ್ಷರಿ ಹಾಗೂ ಪಂಡಿತ ಪುಟ್ಟರಾಜ ಗವಾಯಿಯವರ ಸಂಗೀತ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇಬ್ಬರೂ ಸಂಗೀತ ಲೋಕದ ದಿಗ್ಗಜ ಮುನಿಗಳು ಇದೇ ತಾಲ್ಲೂಕಿನವರಾದ ಕಾರಣ ಪುಟ್ಟರಾಜರ ಮಹಾಜ್ಯೋತಿಯು ಹಾನಗಲ್ ಕುಮಾರ ಶಿವಯೋಗಿಗಳ ವಿರಕ್ತಮಠದಿಂದ ಹೊರಡಲಿದೆ ಎಂದರು.
ಜನವರಿ 1ರಿಂದ ಆರಂಭವಾಗುವ ಯಾತ್ರೆ ಜೂನ್ 1ರಂದು ಗದುಗಿನ ಪುಣ್ಯಾಶ್ರಮ ತಲುಪುತ್ತದೆ. ಹಾವೇರಿ, ದಾವಣಗೆರೆ, ಬಳ್ಳಾರಿ, ರಾಯಚೂರು, ವಿಜಯಪುರ, ಕೊಪ್ಪಳ, ಧಾರವಾಡ ಮತ್ತು ಗದಗ ಜಿಲ್ಲೆಗಳ ವಿವಿಧ ತಾಲ್ಲೂಕುಗಳಲ್ಲಿ ಒಟ್ಟು 6 ತಿಂಗಳುಗಳ ಕಾಲ ಸಂಚರಿಸಲಿದೆ.
ಇಲ್ಲಿನ ವಿರಕ್ತಮಠದಲ್ಲಿ ಹಾನಗಲ್ ಕುಮಾರ ಸ್ವಾಮೀಜಿ ಯಾತ್ರೆಗೆ ಚಾಲನೆ ನೀಡುವರು. ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಅಕ್ಕಿಆಲೂರು ವಿರಕ್ತಮಠದ ಶಿವಬಸವ ಸ್ವಾಮೀಜಿ, ಕೂಡಲದ ಗುರುನಂಜೇಶ್ವರ ಶಿವಾಚಾರ್ಯರು, ಬಮ್ಮನಹಳ್ಳಿಯ ಶಿವಯೋಗೀಶ್ವರ ಸ್ವಾಮೀಜಿ, ಅಡ್ನೂರ–ಗದಗ ದಾಸೋಹ ಮಠದ ಪಂಚಾಕ್ಷರ ಶಿವಾಚಾರ್ಯ, ಹೋತನಹಳ್ಳಿ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ಮತ್ತು ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಸಾನ್ನಿಧ್ಯ ವಹಿಸುವರು ಎಂದರು.
ಮಾಜಿ ಸಚಿವ ಸಿ.ಎಂ.ಉದಾಸಿ ಅಧ್ಯಕ್ಷತೆ ವಹಿಸುವರು. ಶತಮಾ ನೋತ್ಸವ ಸಮಿತಿ ಉಪಾಧ್ಯಕ್ಷ, ಸಂಸದ ಶಿವಕುಮಾರ ಉದಾಸಿ ಭಾಗವಹಿ ಸುವರು ಎಂದು ಕೆಂಗಾರ ತಿಳಿಸಿದರು. ಜೂನ್ 1ರಿಂದ ಗದುಗಿನಲ್ಲಿ ಒಂದು ವಾರ ನಾಡಿನ ವಿವಿಧ ಮಠಾಧೀಶರು, ಸಂಗೀತ ವಿದ್ವಾಂಸರು, ಸಾಹಿತಿಗಳು, ರಂಗಕಲಾವಿದರನ್ನು ಒಳಗೊಂಡ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ.
ಜೂನ್ 4ರಂದು 100 ಹಿರಿಯ ಕಲಾವಿದರಿಗೆ ಸನ್ಮಾನ, 5ರಂದು 100 ಸಂಗೀತ ಕಲಾವಿದರಿಗೆ ಸನ್ಮಾನ ಮತ್ತು ಪುಟ್ಟರಾಜ ಗವಾಯಿಗಳ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಗುತ್ತದೆ. ಸಂಗೀತ ಕ್ಷೇತ್ರದಲ್ಲಿ ದೇಶದಲ್ಲಿ ಹೆಸರು ಗಳಿಸಿರುವ ಒಬ್ಬ ಕಲಾವಿದರಿಗೆ ₨ 2.50 ಲಕ್ಷ ನಗದು ಪುರಸ್ಕಾರ ನೀಡುವ ಯೋಚನೆಯಿದೆ ಎಂದರು. ಸಮಿತಿಯ ಬಸವರಾಜ ಹಿಡಕಿಮಠ. ಪ್ರಕಾಶ ಬಸರಿಗಿಡದ, ಪಿ.ಸಿ.ಹಿರೇಮಠ, ವಸಂತಗೌಡ ಪೊಲೀಸ್ಪಾಟೀಲ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.