ಹುಣಸೂರು: ತಾಲ್ಲೂಕಿನ ಕರ್ಣಕುಪ್ಪೆ ಪಂಚಾಯಿತಿ ಮುಂಭಾಗದಲ್ಲಿದ್ದ ಕಸ, ಖಾಲಿ ಕ್ವಾಟರ್ ಬಾಟಲ್ ಹಾಗೂ ಮದ್ಯದ ಸ್ಯಾಶೆಗಳನ್ನು ಜಿ.ಪಂ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಪೊರಕೆ ಹಿಡಿದು ಗುಡಿಸಿ ಗುಡ್ಡೆ ಹಾಕಿದ ಘಟನೆ ಗುರುವಾರ ನಡೆಯಿತು.
ಕರ್ಣಕುಪ್ಪೆ ತಾಂಡಾಕ್ಕೆ ಭೇಟಿ ನೀಡಿದ್ದ ಅವರು, ಗ್ರಾಮ ಪಂಚಾಯಿತಿ ಕಚೇರಿಗೂ ತೆರಳಿದರು. ಕಚೇರಿಯ ಆವರಣ ಪ್ರವೇಶಿಸುತ್ತಿದ್ದಂತೆ ಅಲ್ಲಿ ಎಸೆದಿದ್ದ ಖಾಲಿ ಕ್ವಾಟರ್ ಬಾಟಲ್ಗಳು ಹಾಗೂ ಮದ್ಯದ ಸ್ಯಾಶೆಗಳು ಅವರನ್ನು ಸ್ವಾಗತಿಸಿದವು. ಪಂಚಾಯಿತಿ ಆವರಣ ಗಲೀಜಾಗಿರುವುದನ್ನು ಕಂಡು ಕುಪಿತರಾದ ಪುಷ್ಪಾ, ಪೊರಕೆ ತರಿಸಿ ಪಂಚಾಯಿತಿ ಆವರಣ ಸ್ವಚ್ಛಗೊಳಿಸಿದರು.
ಸ್ಥಳದಲ್ಲೇ ಇದ್ದ ಪಂಚಾಯಿತಿ ಕಾರ್ಯದರ್ಶಿ ಸಂತೋಷಕುಮಾರ್ ಅವರನ್ನು ತರಾಟೆ ತೆಗೆದುಕೊಂಡ ಪುಷ್ಪಾ ಅವರು, ಪಂಚಾಯಿತಿ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಅಧಿಕಾರಿಗೆ ನೋಟಿಸ್ ನೀಡಲು ಸೂಚಿಸಿದರು.