ದೆಹಲಿಯಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಟ್ಯಾಕ್ಸಿ ಸೇವೆ ಸಲ್ಲಿಸುತ್ತಿರುವ ಉಬರ್ ಮತ್ತು ಇತರ ಟ್ಯಾಕ್ಸಿ ಸೇವಾ ಸಂಸ್ಥೆಗಳ ಮೇಲೆ ಕೇಂದ್ರ ಸರ್ಕಾರವು ನಿಷೇಧ ಹೇರಿರುವುದು ಮತ್ತು ಇದೇ ಬಗೆಯ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿರುವುದು ನೋಡಿದಾಗ, ನನಗೆ ಜನಪ್ರಿಯ ಗಾದೆ, ‘ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದಂತೆ’ ನೆನಪಾಗುತ್ತದೆ. ಕರ್ನಾಟಕ ರಾಜ್ಯ ಸರ್ಕಾರವು ಕೂಡ ಕೇಂದ್ರದ ನಿರ್ದೇಶನವನ್ನು ಕಣ್ಣುಮುಚ್ಚಿಕೊಂಡು ಚಾಚೂತಪ್ಪದೇ ಪಾಲಿಸಿರುವುದು ನೋಡಿದರೆ ವಿಷಾದ ಎನಿಸುತ್ತದೆ. ಈ ಪ್ರಕರಣದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ರೋಗ ವಾಸಿ ಮಾಡುವ ಬದಲಿಗೆ ಬರೀ ರೋಗ ಲಕ್ಷಣಕ್ಕೆ ಮಾತ್ರ ಚಿಕಿತ್ಸೆ ನೀಡಲು ಮುಂದಾಗಿರುವಂತೆಯೂ ಭಾಸವಾಗುತ್ತದೆ. ಅಷ್ಟೇ ಅಲ್ಲ, ಸರ್ಕಾರದ ಈ ಕ್ರಮವು ಕಾಯಿಲೆಪೀಡಿತ ಹಸು ಬಿಟ್ಟು ಆರೋಗ್ಯವಂತ ಹಸುವಿಗೆ ಚುಚ್ಚುಮದ್ದು ನೀಡಲು ಹೊರಟಿರುವಂತೆ ಕಂಡು ಬರುತ್ತದೆ.
ದೇಶದಾದ್ಯಂತ ವ್ಯಾಪಿಸಿರುವ ಹೊಸ ತಂತ್ರಜ್ಞಾನ ಬಳಕೆಯ ಪ್ರಭಾವ ಮತ್ತು ಅದರಿಂದ ಭಾರತೀಯರ ಜೀವನಮಟ್ಟದಲ್ಲಿನ ಸುಧಾರಣೆ ಮತ್ತು ಸಮಾಜದ ಎಲ್ಲ ಸ್ತರದ ಜನರಿಗೆ ಒದಗಿಸಿರುವ ವಿಪುಲ ಉದ್ಯೋಗ ಅವಕಾಶಗಳ ಪರಿಕಲ್ಪನೆಯೇ ನಮ್ಮ ರಾಜಕಾರಣಿಗಳಿಗೆ ಇಲ್ಲದಿರುವುದು ಇದರಿಂದ ಸ್ಪಷ್ಟವಾಗುತ್ತದೆ.
ಭಾರತವು ತನ್ನೊಳಗೆ ಇದ್ದ ವಿಶಿಷ್ಟ ವಂಶವಾಹಿ ಗುಣವನ್ನು (ಡಿಎನ್ಎ) ಗುರುತಿಸಿ ಅದನ್ನು ಸದ್ಬಳಕೆ ಮಾಡಿಕೊಂಡು ಸ್ವತಃ ತಾನೆ ಬೆರಗಾಗುವುದರ ಜತೆಗೆ, ಇಡೀ ವಿಶ್ವವೇ ಚಕಿತಗೊಳ್ಳುವಂತೆ ಮಾಡಿದೆ. ಈ ಮೂಲಕ ಅಭಿವೃದ್ಧಿ ಹೊಂದಿದ ಅನೇಕ ದೇಶಗಳೂ ಸೇರಿದಂತೆ ಪ್ರವರ್ಧಮಾನಕ್ಕೆ ಬರುತ್ತಿರುವ ಆರ್ಥಿಕತೆಗಳನ್ನು ಹಿಂದಿಕ್ಕಿ ಮುನ್ನಡೆಯುತ್ತಿದೆ. ಇಂಟರ್ನೆಟ್, ಸಾಮಾಜಿಕ ಮಾಧ್ಯಮ, ಮಾಹಿತಿ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ವಾಣಿಜ್ಯ ಚಟುವಟಿಕೆಗಳ ತಳಹದಿಯನ್ನೇ ಅಲುಗಾಡಿಸಿದೆ. ಇದರಿಂದ ಭಾರತೀಯರ ಜೀವನಮಟ್ಟ ಮತ್ತು ಕೆಲಸದ ವಿಧಾನವೇ ಆಮೂಲಾಗ್ರವಾಗಿ ಬದಲಾಗಿದೆ.
ದೆಹಲಿ ಅತ್ಯಾಚಾರ ಘಟನೆಗೆ ಸಂಬಂಧಿಸಿದಂತೆ ಟ್ಯಾಕ್ಸಿ ಸೇವಾ ಸಂಸ್ಥೆ ಉಬರ್ ಮೇಲೆ ನಿಷೇಧ ಹೇರುವ ಮೂಲಕ ಕೇಂದ್ರ ಸರ್ಕಾರವು
ಅವಸರದ ತೀರ್ಮಾನಕ್ಕೆ ಬಂದಿದೆ. ಟ್ಯಾಕ್ಸಿ ಚಾಲಕರಿಂದ ಅತ್ಯಾಚಾರ ಪ್ರಕರಣಗಳು ನಡೆಯದಂತೆ ತಡೆಯಲು ಪೊಲೀಸ್ ಮತ್ತು ಸಾರಿಗೆ ಇಲಾಖೆಯಲ್ಲಿ ವ್ಯವಸ್ಥಿತ ಬದಲಾವಣೆ ತರುವ ಬದಲಿಗೆ, ಇನ್ನಾರನ್ನೊ ಬಲಿಪಶು (ಈ ಪ್ರಕರಣದಲ್ಲಿ ಉಬರ್) ಮಾಡುವ ಸುಲಭದ ಮಾರ್ಗ ತುಳಿದಿದೆ. ವಾಹನಗಳಲ್ಲಿ ಅತ್ಯಾಚಾರ ಘಟನೆಗಳು ನಡೆಯುವುದನ್ನು ತಡೆಯಲು ಆರ್ಟಿಒ ಕಚೇರಿಗಳು ಮತ್ತು ಪೊಲೀಸ್ ವ್ಯವಸ್ಥೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸದಿರುವುದೇ ಮೂಲ ಕಾರಣವಾಗಿದೆ.
ಉಬರ್ ಟ್ಯಾಕ್ಸಿಯಲ್ಲಿ ನಡೆದ ದುರದೃಷ್ಟಕರ ಮತ್ತು ಬೆಚ್ಚಿ ಬೀಳಿಸುವ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಬಂದ ವರದಿಗಳಿಂದ ಉಂಟಾದ ಸಮೂಹ ಸನ್ನಿ ಮತ್ತು ಸರ್ಕಾರದ ದಿಢೀರ್ ನಿರ್ಧಾರವು ಜನರನ್ನು ಹಾದಿ ತಪ್ಪಿಸಿವೆ.
ಇತರ ಸೇವಾ ಸಂಸ್ಥೆಗಳಂತೆ ಉಬರ್ ಟ್ಯಾಕ್ಸಿ ಸಂಸ್ಥೆಯು ಕೂಡ ತಂತ್ರಜ್ಞಾನದ ಸದ್ಬಳಕೆ ಮಾಡಿಕೊಂಡು, ಗ್ರಾಹಕರಿಗೆ ಸಕಾಲಕ್ಕೆ ಟ್ಯಾಕ್ಸಿಗಳನ್ನು ಬಾಡಿಗೆಗೆ ಒದಗಿಸುತ್ತದೆ. ತಂತ್ರಜ್ಞಾನ ಮತ್ತು ಲಭ್ಯ ಸಂಪನ್ಮೂಲಗಳನ್ನು ಗರಿಷ್ಠ ಬಳಕೆ ಮಾಡಿಕೊಳ್ಳುವುದು ಅರ್ಥ ವ್ಯವಸ್ಥೆಯಲ್ಲಿ ವ್ಯಾಪಕ ಬದಲಾವಣೆಗೆ ಕಾರಣವಾಗುತ್ತದೆ. ಗ್ರಾಹಕರಿಗೆ ಟ್ಯಾಕ್ಸಿ ಸೇವೆಯ ಅಗತ್ಯ ಬಿದ್ದು ಕರೆ ಮಾಡಿದಾಗ ಭೌಗೋಳಿಕವಾಗಿ ಅವರಿಗೆ ಹತ್ತಿರದಲ್ಲಿ ಇರುವ ಟ್ಯಾಕ್ಸಿ ಸೇವೆಯನ್ನು ಅತ್ಯಂತ ಕಡಿಮೆ ಸಮಯದಲ್ಲಿ ಒದಗಿಸಲು ಜಿಪಿಎಸ್ ತಂತ್ರಜ್ಞಾನ, ಸ್ಮಾರ್ಟ್ಫೋನ್ ಮತ್ತು ಬಹುತೇಕ ಮೊಬೈಲ್ಗಳಲ್ಲಿ ಬಳಕೆಯಾಗುತ್ತಿರುವ ವಾಟ್ಸ್ಆ್ಯಪ್ ಸೌಲಭ್ಯದ ನೆರವು ಪಡೆಯಲಾಗುತ್ತದೆ. ಈಗಾಗಲೇ ಲೈಸನ್ಸ್ ಹೊಂದಿರುವ ಟ್ಯಾಕ್ಸಿಗಳನ್ನೇ ಉಬರ್ ಸಂಸ್ಥೆಯು ಈ ಉದ್ದೇಶಕ್ಕೆ ಬಳಸುತ್ತದೆ. ಸಂಸ್ಥೆ ಜತೆ ನೋಂದಾಯಿಸಿಕೊಂಡಿರುವ ಟ್ಯಾಕ್ಸಿ ಮಾಲೀಕರ ಫೋನ್ಗೆ ಗ್ರಾಹಕರಿಂದ ಅಥವಾ ಸಂಸ್ಥೆಗಳಿಂದ ಬರುವ ದೂರವಾಣಿ ಕರೆ ಆಧರಿಸಿ ಟ್ಯಾಕ್ಸಿ ಸೇವೆ ಒದಗಿಸಲಾಗುತ್ತದೆ. ಗ್ರಾಹಕರಿಲ್ಲದೇ ಟ್ಯಾಕ್ಸಿ ನಿಲ್ಲಿಸುವ ಬದಲಿಗೆ, ಟ್ಯಾಕ್ಸಿ ಸೇವಾ ಸಂಸ್ಥೆ ಜತೆ ಒಪ್ಪಂದ ಮಾಡಿಕೊಳ್ಳುವ ಟ್ಯಾಕ್ಸಿ ಚಾಲಕರು ಅಸಂಖ್ಯ ಗ್ರಾಹಕರಿಗೆ ಸಕಾಲಕ್ಕೆ ಸೇವೆ ಸಲ್ಲಿಸಲು ನೆರವಾಗುತ್ತಾರೆ. ಇದರಿಂದ ಉದ್ಯೋಗ ಅವಕಾಶಗಳು ಹೆಚ್ಚುವುದರ ಜತೆಗೆ ಅರ್ಥ ವ್ಯವಸ್ಥೆ ಮೇಲೂ ಸಕಾರಾತ್ಮಕ ಪರಿಣಾಮ ಉಂಟಾಗುತ್ತದೆ. ಈ ವಹಿವಾಟು, ಆನ್ಲೈನ್ ಮಾರಾಟ ಸಂಸ್ಥೆ ಫ್ಲಿಪ್ಕಾರ್ಟ್ನ ಯಶೋಗಾಥೆಯನ್ನು ಹೋಲುತ್ತದೆ.
ಉಬರ್ ಮತ್ತು ಇಂತಹ ಇತರ ಟ್ಯಾಕ್ಸಿ ಸೇವೆಗಳನ್ನು ಒದಗಿಸುವ ಸಂಸ್ಥೆಗಳು ಗ್ರಾಹಕರ ಸುರಕ್ಷತೆ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತವೆ. ಚಾಲಕರ ಛಾಯಾಚಿತ್ರ ಮತ್ತಿತರ ವೈಯಕ್ತಿಕ ವಿವರಗಳನ್ನು ಮುಂಚಿತವಾಗಿಯೇ ರವಾನಿಸುವ ಮೂಲಕ ಗ್ರಾಹಕರಲ್ಲಿ ಸುರಕ್ಷತಾ ಭಾವನೆ ಮೂಡಿಸುತ್ತವೆ. ಒಂದು ವೇಳೆ ಚಾಲಕರು ಗ್ರಾಹಕರ ಜತೆ ಅನುಚಿತವಾಗಿ ವರ್ತಿಸಿದರೆ, ಚಾಲಕರ ಮಾಹಿತಿಯನ್ನು ಪೊಲೀಸರಿಗೆ ತ್ವರಿತವಾಗಿ ನೀಡಲು ಸುಲಭವಾಗುತ್ತದೆ. ವೈಯಕ್ತಿಕ ನೆಲೆಯಲ್ಲಿ ಟ್ಯಾಕ್ಸಿ ಸೇವೆ ಒದಗಿಸುವ ಚಾಲಕರಿಂದ ಇಂತಹ ಮಾಹಿತಿ ಪಡೆಯಲು ಸಾಧ್ಯವಾಗುವುದಿಲ್ಲ.
ಟ್ಯಾಕ್ಸಿ ಚಾಲಕರಿಂದ ನಡೆಯುವ ಅತ್ಯಾಚಾರ ಪ್ರಕರಣಗಳಲ್ಲಿ ಅಪರಾಧ ಪ್ರವೃತ್ತಿಯ ಚಾಲಕರ ಮೇಲೆ ನಿಗಾ ಇಡುವಲ್ಲಿ ಪೊಲೀಸ್ ಇಲಾಖೆ ಮತ್ತು ಆರ್ಟಿಒಗಳ ಕಾರ್ಯವೈಖರಿಯಲ್ಲಿಯೇ ಮೂಲ ದೋಷ ಇದೆ.
ಸರ್ಕಾರ ತಳೆದ ನಿರ್ಧಾರಕ್ಕೆ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಎತ್ತಿದ ಪ್ರಶ್ನೆಗಳು ಸರಿಯಾಗಿಯೇ ಇವೆ. ರೈಲ್ವೆ ಬೋಗಿಯಲ್ಲಿ ಒಬ್ಬಂಟಿ ಮಹಿಳಾ ಪ್ರಯಾಣಿಕಳ ಮೇಲೆ ಟಿಕೆಟ್ ಕಲೆಕ್ಟರ್ನಿಂದ, ವೈಯಕ್ತಿಕ ನೆಲೆಯಲ್ಲಿ ಸೇವೆ ಸಲ್ಲಿಸುವ ಖಾಸಗಿ ಟ್ಯಾಕ್ಸಿಯಲ್ಲಿ ಅದರ ಚಾಲಕನಿಂದ, ಆಟೊರಿಕ್ಷಾದಲ್ಲಿ ಆಟೊ ಚಾಲಕನಿಂದ ಅಥವಾ ಕಾಲ್ಸೆಂಟರ್ನಲ್ಲಿ ಅಲ್ಲಿನ ಸಿಬ್ಬಂದಿಯಿಂದ ಅತ್ಯಾಚಾರ ನಡೆದರೆ, ರೈಲ್ವೆ, ಆಟೊ, ಖಾಸಗಿ ಟ್ಯಾಕ್ಸಿ ಸೇವೆಗಳನ್ನು ಮತ್ತು ಕಾಲ್ ಸೆಂಟರ್ಗಳನ್ನೇ ನಿಷೇಧಿಸಲಿಕ್ಕಾದೀತೆ? ಉಬರ್ ಮತ್ತಿತರ ಟ್ಯಾಕ್ಸಿ ಸೇವಾ ಸಂಸ್ಥೆಗಳು ದೇಶದ ಅನೇಕ ನಗರಗಳಲ್ಲಿ ಕೆಲ ವರ್ಷಗಳಿಂದಲೂ ಕಾರ್ಯನಿರ್ವಹಿಸುತ್ತಿವೆ. ಈ ಸಂಸ್ಥೆಗಳು ಮುಚ್ಚುಮರೆಯಿಂದೇನೂ ಸೇವೆ ಸಲ್ಲಿಸುತ್ತಿಲ್ಲ. ಸರ್ಕಾರದ ಎಲ್ಲ ಇಲಾಖೆಗಳಿಗೆ ಇವುಗಳ ಅಸ್ತಿತ್ವದ ಬಗ್ಗೆ ಮನವರಿಕೆ ಇದ್ದೇ ಇದೆ.
ಉಬರ್ ಘಟನೆ ನಂತರವಾದರೂ ನಿಯಮಗಳನ್ನು ಕಠಿಣಗೊಳಿಸಲು ನಿರ್ಧರಿಸಿದ್ದರೂ ಎಲ್ಲ ಟ್ಯಾಕ್ಸಿ ಸೇವಾ ಸಂಸ್ಥೆಗಳು ಅವುಗಳನ್ನು ಜಾರಿಗೆ ತರಲು ಕನಿಷ್ಠ ಒಂದು ತಿಂಗಳ ಸಮಯಾವಕಾಶವನ್ನಾದರೂ ಕೊಡಬಾರದೇ? ಎನ್ನುವ ಪ್ರಶ್ನೆಯೂ ಇಲ್ಲಿ ಕಾಡುತ್ತದೆ.
ಈ ಪ್ರಕರಣದಲ್ಲಿ ಸರ್ಕಾರ ಇನ್ನಷ್ಟು ಪ್ರಾಮಾಣಿಕತೆಯಿಂದ ವರ್ತಿಸಬೇಕಾಗಿತ್ತು. ಜತೆಗೆ, ಕೇಂದ್ರ ಮತ್ತು ರಾಜ್ಯಗಳ ಮಟ್ಟದಲ್ಲಿ ಪೊಲೀಸ್ ವ್ಯವಸ್ಥೆಯನ್ನೇ ಸ್ವಚ್ಛಗೊಳಿಸುವ ವಾಸ್ತವಿಕ ನೆಲೆಯಲ್ಲಿ ಜಾರಿಗೆ ತರಬಹುದಾದ ಕ್ರಿಯಾ ಯೋಜನೆಯನ್ನೂ ಪ್ರಕಟಿಸಬಹುದಿತ್ತು.
ಪೊಲೀಸ್ ವ್ಯವಸ್ಥೆಯಲ್ಲಿ ಅರ್ಥಪೂರ್ಣ ಬದಲಾವಣೆ ತರಲು ಪೊಲೀಸ್ ಸುಧಾರಣಾ ಕ್ರಮಗಳನ್ನು ಜಾರಿಗೆ ತರುವುದೇ ಮುಖ್ಯ ಎನ್ನುವುದು ಅತಿಶಯೋಕ್ತಿ ಹೇಳಿಕೆ ಏನಾಗದು.
ಅಧಃಪತನದತ್ತ ಸಾಗಿರುವ ಪೊಲೀಸ್ ವ್ಯವಸ್ಥೆ ಸುಧಾರಿಸಲು, ಅದನ್ನು ಭ್ರಷ್ಟಾಚಾರ ಮತ್ತು ರಾಜಕಾರಣಿಗಳ ಹಸ್ತಕ್ಷೇಪದಿಂದ ಮುಕ್ತಗೊಳಿಸುವುದೇ ಸದ್ಯಕ್ಕೆ ಇರುವ ಏಕೈಕ ಮಾರ್ಗೋಪಾಯವಾಗಿದೆ.
ಸ್ವಾತಂತ್ರ್ಯಾನಂತರ ಪೊಲೀಸ್ ವ್ಯವಸ್ಥೆ ಸುಧಾರಣೆಗೆ ಕೇಂದ್ರ ಸರ್ಕಾರವು ನೇಮಿಸಿರುವ ಪ್ರತಿಯೊಂದು ಆಯೋಗದ ಮುಖ್ಯಸ್ಥರು ಜಾರಿಗೆ ತರಬಹುದಾದ ಅನೇಕ ಶಿಫಾರಸುಗಳನ್ನು ನೀಡಿದ್ದಾರೆ. ಆದರೆ, ಅವುಗಳೆಲ್ಲ ವರ್ಷಗಳಿಂದ ಕಡತಗಳಲ್ಲೇ ಉಳಿದಿವೆ. ಪೊಲೀಸ್ ಇಲಾಖೆಯ ಇತರ ಕೊರತೆಗಳ ಹೊರತಾಗಿಯೂ, ಭ್ರಷ್ಟಾಚಾರ ಮತ್ತು ರಾಜಕೀಯ ಹಸ್ತಕ್ಷೇಪಗಳೇ ಪ್ರಮುಖ ಸಮಸ್ಯೆಗಳಾಗಿವೆ.
ಆರ್ಟಿಒಗಳಲ್ಲಿಯಂತೂ ಆಡಳಿತಾರೂಢ ಪಕ್ಷಗಳ ಜತೆಗಿನ ಸಂಪರ್ಕದಿಂದಾಗಿ ಭ್ರಷ್ಟಾಚಾರವು ಕೊಳೆತು ನಾರುತ್ತಿದೆ. ಇಲಾಖೆಯಲ್ಲಿನ ಲಂಚದ ಸಾಮ್ರಾಜ್ಯದ ಬೇರುಗಳ ಬಗ್ಗೆ ಮಾಧ್ಯಮಗಳು ಹಲವಾರು ಬಾರಿ ಮಾರುವೇಷದ ಕಾರ್ಯಾಚರಣೆಯಲ್ಲಿ ಬೆಳಕಿಗೆ ತಂದಿವೆ. ಚಾಲನಾ ಪರೀಕ್ಷೆ ನಡೆಸದೆ ಕೆಲವೇ ಕೆಲ ನೂರು ರೂಪಾಯಿಗಳಿಗೆ ನಕಲಿ ಚಾಲನಾ ಪತ್ರ ಮತ್ತು ಸಾವಿರ ರೂಪಾಯಿಗಳಿಗೆ ನೈಜ ಚಾಲನಾ ಪತ್ರವನ್ನು (ಡ್ರೈವಿಂಗ್ ಲೈಸನ್ಸ್) ‘ಆರ್ಟಿಒ’ಗಳಲ್ಲಿ ಸುಲಭವಾಗಿ ಪಡೆಯಬಹುದಾಗಿದೆ.
ಪೊಲೀಸ್ ವ್ಯವಸ್ಥೆ ಸುಧಾರಣೆ ಬಗ್ಗೆ ಆಯೋಗಗಳು ಮಾಡಿರುವ ಶಿಫಾರಸುಗಳನ್ನು ಸ್ವೀಕರಿಸಿ ಅವುಗಳನ್ನು ಹಾಡಿ ಹೊಗಳುವ ಮತ್ತು ಅವುಗಳನ್ನು ತುರ್ತಾಗಿ ಜಾರಿಗೆ ತರುವುದರ ಬಗ್ಗೆ ಮಾತನಾಡುವ ಸರ್ಕಾರಗಳು, ದಶಕಗಳು ಉರುಳಿದರೂ ವರದಿಗಳನ್ನು ಕಡತಗಳಲ್ಲಿಯೇ ಉಳಿಸಿವೆ. ಪೊಲೀಸ್ ವ್ಯವಸ್ಥೆ ಮೇಲಿನ ತಮ್ಮ ನಿಯಂತ್ರಣ ಕೈಬಿಡಲು ರಾಜಕಾರಣಿಗಳಿಗೆ ಮನಸ್ಸು ಇಲ್ಲದಿರುವುದೇ ಇದಕ್ಕೆ ಕಾರಣ. ಪೊಲೀಸರನ್ನು ತಮ್ಮ ಕೈಗೊಂಬೆ ಮಾಡಿಕೊಳ್ಳಲು ಪ್ರತಿಯೊಬ್ಬ ರಾಜಕಾರಣಿ ಬಯಸುತ್ತಾನೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ.
ತಂತ್ರಜ್ಞಾನದ ಬಳಕೆ ಮತ್ತು ಅದರ ಉಪಯುಕ್ತತೆ ಬಗ್ಗೆಯೂ ಇಲ್ಲಿ ಪ್ರಸ್ತಾಪಿಸಬೇಕಾಗುತ್ತದೆ. ದೇಶದಲ್ಲಿನ ಎಲ್ಲ ವಾಹನಗಳ ಚಾಲಕರ ಹೆಸರು ಮತ್ತು ಲೈಸನ್ಸ್ ವಿವರಗಳು ಪೊಲೀಸ್ ಠಾಣೆ ಮತ್ತು ಆರ್ಟಿಒ ಕಚೇರಿಗಳಲ್ಲಿ ಲಭ್ಯ ಇರುತ್ತವೆ. ಅಪರಾಧ ದಾಖಲೆಗಳು ಈ ಎರಡೂ ಇಲಾಖೆಗಳೂ ಸೇರಿದಂತೆ ತನಿಖಾ ತಂಡಗಳ ಬಳಿಯೂ ಇರುತ್ತವೆ. ಆದರೆ, ಪೊಲೀಸರೂ ಸೇರಿದಂತೆ ತನಿಖಾ ತಂಡಗಳ ಬಳಿ ಇಚ್ಛಾಶಕ್ತಿ ಮತ್ತು ತುರ್ತಾಗಿ ಕಾರ್ಯನಿರ್ವಹಿಸುವ ಮನೋಭಾವ ಮಾತ್ರ ಕಂಡು ಬರುವುದಿಲ್ಲ.
‘ಆಧಾರ್’ ಕಾರ್ಡ್ ಜಾರಿಗೆ ತರುವ ಮೊದಲೇ, ಕೇಂದ್ರ ಗೃಹ ಇಲಾಖೆಯು ರಾಷ್ಟ್ರೀಯ ಬೇಹುಗಾರಿಕಾ ಜಾಲ (ಎನ್ಎಟಿ ಗ್ರಿಡ್) ಸ್ಥಾಪಿಸಿ, ದೇಶದ ಎಲ್ಲ ಪ್ರಜೆಗಳ ಮಾಹಿತಿ ಸಂಗ್ರಹಿಸಲು ಮುಂದಾಗಿತ್ತು. ಹಿಂದಿನ ‘ಯುಪಿಎ–2’ ಸರ್ಕಾರದ ಅವಧಿಯಲ್ಲಿ ಈ ಎರಡೂ ಸಂಸ್ಥೆಗಳ ವಿರುದ್ಧ ಟೀಕಾಪ್ರಹಾರ ಕೇಳಿಬಂದಿತು. ದೇಶದ ಭದ್ರತೆ ಒತ್ತೆ ಇಟ್ಟು ಅಕ್ರಮ ವಲಸಿಗರನ್ನೂ ದೇಶದ ಪ್ರಜೆಗಳೆಂದು ನೋಂದಾಯಿಸಿಕೊಳ್ಳಲಾಗುತ್ತಿದೆ ಎನ್ನುವ ಹುಯಿಲೂ ಕೇಳಿ ಬಂದಿತು. ಈ ವಿವಾದ ಆಮೇಲೆ ತಣ್ಣಗಾಯಿತು. ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳೂ ಸೇರಿದಂತೆ ಎಲ್ಲ ಬಗೆಯ ಅಪರಾಧ ಮತ್ತು ಭಯೋತ್ಪಾದನಾ ಕೃತ್ಯಗಳನ್ನು ತಡೆಯಲು ಇಂತಹ ಮಾಹಿತಿಯನ್ನು ದಕ್ಷ ರೀತಿಯಲ್ಲಿ ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಲು ಮುಂದಾಗುವುದು ಸದ್ಯದ ತುರ್ತು ಕೆಲಸವಾಗಿದೆ.
ಸಾಮಾಜಿಕ ಮಾಧ್ಯಮಗಳ ಮನ್ನಣೆಗೆ ಪಾತ್ರವಾಗಿರುವ, ಪ್ರಚಾರಕ್ಕೆ ನವ ಮಾಧ್ಯಮಗಳನ್ನೇ ನೆಚ್ಚಿಕೊಂಡಿರುವ ನರೇಂದ್ರ ಮೋದಿ ಸರ್ಕಾರ ಮತ್ತು ಮಾಹಿತಿ ತಂತ್ರಜ್ಞಾನ ರಂಗದಲ್ಲಿ ಮುಂಚೂಣಿಯಲ್ಲಿ ಇರುವ ಕರ್ನಾಟಕ ಸರ್ಕಾರ, ಮಹಿಳೆಯರ ಸುರಕ್ಷತೆ ಮತ್ತು ಅವರ ಮೇಲೆ ನಡೆಯುವ ಅಪರಾಧ ಕೃತ್ಯಗಳನ್ನು ತಡೆಗಟ್ಟಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವುದು ಬಿಟ್ಟು, ತಂತ್ರಜ್ಞಾನ ಆಧಾರಿತ ಟ್ಯಾಕ್ಸಿ ಸೇವಾ ಸಂಸ್ಥೆಗಳನ್ನೇ ನಿರ್ಬಂಧಿಸುವ ಕ್ರಮಗಳನ್ನು ಕೈಗೊಂಡಿರುವುದು ಆಶ್ಚರ್ಯ ಮತ್ತು ಗೊಂದಲವನ್ನೂ ಮೂಡಿಸಿದೆ.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.