ಬೆಂಗಳೂರು: ಸುಬ್ರಹ್ಮಣ್ಯಪುರ ಸಮೀ-ಪದ ಆರ್ಬಿಐ ಕಾಲೊನಿಯಲ್ಲಿ ಸ್ಕೂಟರ್ನಲ್ಲಿ ಬಂದ ಯುವತಿಯೊಬ್ಬಳು, ವಾಯುವಿಹಾರ ಮಾಡುತ್ತಿದ್ದ ವೆಂಕಟರಾಮಯ್ಯ (75) ಎಂಬುವರಿಂದ 25 ಗ್ರಾಂನ ಚಿನ್ನದ ಸರ ದೋಚಿ ಪರಾರಿಯಾಗಿದ್ದಾಳೆ.
ಆರ್ಬಿಐ ಲೇಔಟ್ನ ಬ್ರಿಗೇಡ್ ಗಾರ್ಡೇನಿಯಾ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿರುವ ವೆಂಕಟರಾಮಯ್ಯ ಅವರು ಸಮೀಪದ ಉದ್ಯಾನದಲ್ಲಿ ಬೆಳಿಗ್ಗೆ 8 ಗಂಟೆ ಸುಮಾರಿಗೆ ವಾಯುವಿಹಾರ ಮಾಡುತ್ತಿದ್ದರು. ಆಗ ಸ್ಕೂಟರ್ನಲ್ಲಿ ಬಂದ ಯುವತಿ ತಾನು ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡು ಈ ಕೃತ್ಯ ಎಸಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಕಳ್ಳತನ ಮಾಡಲು ಸುತ್ತಮುತ್ತಲಿನ ಮನೆಗಳನ್ನು ಗಮನಿಸುತ್ತಿದ್ದೀರಿ. ನಿಮ್ಮನ್ನು ತಪಾಸಣೆ ಮಾಡಬೇಕು ಠಾಣೆಗೆ ಬನ್ನಿ ಎಂದು ಆಕೆ ಕರೆದಳು. ಆದರೆ, ಆಕೆಯೊಂದಿಗೆ ಹೋಗದೆ ಮನೆ ಕಡೆಗೆ ಹೋಗುತ್ತಿದ್ದಾಗ ಹಿಂಬಾಲಿಸಿ ಬಂದು ಕತ್ತಿನಲ್ಲಿದ್ದ ಚಿನ್ನದ ಸರ ಹಾಗೂ ಉಂಗುರ ಕಿತ್ತುಕೊಂಡು ನನ್ನನ್ನು ತಳ್ಳಿ ಪರಾರಿಯಾದಳು’ ಎಂದು ವೆಂಕಟರಾಮಯ್ಯ ದೂರು ನಿಡಿದ್ದಾರೆ.
ವೆಂಕಟರಾಮಯ್ಯ, ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ವಿಷಯ ತಿಳಿಸಿದರು. ಕೂಡಲೇ ಸುಬ್ರಹ್ಮಣ್ಯಪುರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯ ವಯಸ್ಸು 25ರಿಂದ 30 ವರ್ಷ ಎಂದು ತಿಳಿದಿದ್ದು, ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.