ಭಾಲ್ಕಿ: ಸಾಮಾನ್ಯವಾಗಿ ಪೊಲೀಸ್ ಠಾಣೆಯಲ್ಲಿ ಹೊದರೆ ಹೊಡಿ, ಬಡಿ ಆತಿಥ್ಯ, ಜೊತೆಗೆ ಬೈಯ್ಗುಳದ ಮಂಗಳಾರತಿ. ಪೊಲೀಸ್ ಸಿಬ್ಬಂದಿ ಬೀದಿಯಲ್ಲಿ ಹೊರಟರೆ ಅವರ ದರ್ಪದ ನುಡಿಗಳಿಗೆ ಜನಸಾಮಾನ್ಯರು ಮಾರು ದೂರ ಸರಿಯುವದನ್ನು ಎಲ್ಲೆಡೆ ಕಾಣುತ್ತೇವೆ. ಆದರೆ, ಇದಕ್ಕೆಲ್ಲ ಅಪವಾದ ಭಾಲ್ಕಿಯ ನಗರ ಠಾಣೆ.
ಸಾಹಿತ್ಯದಲ್ಲಿ ಅಪಾರ ಆಸಕ್ತಿ ಇರುವ ಡಿವೈಎಸ್ಪಿ ಬಿ.ಎಸ್ ಮಾಲಗತ್ತಿ , ಜನಪದ, ತತ್ವಪದ, ದಾಸರ ಪದ, ವಚನ ಗಾಯನದಲ್ಲಿ ಆಸಕ್ತಿ ಹೊಂದಿರುವ ಸರ್ಕಲ್ ಇನ್ಸ್ಪೆಕ್ಟರ್ ಜ್ಯೋತಿರ್ಲಿಂಗ ಹೊನಕಟ್ಟಿ ಅವರ ಇಂಪಾದ ಧ್ವನಿ, ಎಎಸ್ಐ ಹಣಮಂತಪ್ಪ ಚಿದ್ರಿ ಕೊಳಲುವಾದಕ. ಇನ್ನೊಬ್ಬ ಎಎಸ್ಐ ಚಂದ್ರಕಾಂತ ಥಮಕೆ, ಕಾನ್ಸ್ಟೆಬಲ್ ಭಾಗವತ್, ಸುಧಾಕರ್, ಮಡೋಳಪ್ಪ, ಶಿವಾನಂದ ಮುಂತಾದವರು ತಬಲಾ, ತಂಬೂರಿ, ತಾಳ ಬಾರಿಸುವದರಲ್ಲಿ ಪಳಗಿದವರು.
ಶಾಲಾ ವಾರ್ಷಿಕೋತ್ಸವ, ಬೀಳ್ಕೊಡುವ ಸಮಾರಂಭ, ದೇವಸ್ಥಾನಗಳಲ್ಲಿ ನಡೆಯುವ ಧರ್ಮ ಸಭೆಗಳಲ್ಲಿ ಈಗ ನಗರ ಠಾಣೆಯ ಸಿಬ್ಬಂದಿಯನ್ನು ಅತಿಥಿಗಳಾಗಿ ಕರೆಯುವುದೇ ಒಂದು ಹೆಮ್ಮೆ ಎಂಬಂತಾಗಿದೆ. ಪೊಲೀಸ್ ಸಿಬ್ಬಂದಿ ಈಚೆಗೆ ಭಾಲ್ಕಿಯಲ್ಲಿ ನಡೆದ ವಚನ ಜಾತ್ರೆ ಹಾಗೂ ಲಿಂ.ಡಾ. ಚನ್ನಬಸವ ಪಟ್ಟದ್ದೇವರ ಸ್ಮರಣೋತ್ಸವದಲ್ಲಿ ಕಾರ್ಯಕ್ರಮ ನೀಡಿ ಜನಮನ ಸೂರೆಗೊಂಡರು.
ಸಿಪಿಐ ಜ್ಯೋತಿರ್ಲಿಂಗ ಹೊನಕಟ್ಟಿಯವರ ಗಾಯನ ಮಂತ್ರ ಮುಗ್ಧರನ್ನಾಗಿಸಿತ್ತು. ಬಾಗಲಕೋಟೆಯವರಾದ ಹೊನಕಟ್ಟಿ ಅವರು ಜನಪದದಲ್ಲಿ ಪದವಿಧರರು. ಜನಪದ ಗಾಯನ, ಗೀಗೀ ಪದ, ದಾಸರ ಪದ, ವಚನ ಗಾಯನ, ಹಂತಿ ಪದ, ಡಪ್ಪಿನ ಪದ ಮುಂತಾದ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡುತ್ತಾರೆ. ಅವರ ಹಾಡಿಗೆ ಪೊಲೀಸ್ ಸಿಬ್ಬಂದಿ ಸಾಥ್ ನೀಡುತ್ತಾರೆ.
ಹಾಗಂತ ಅಪರಾಧಿಗಳಿಗೆ ಬಿಡುಗಡೆ ಇದೆ ಅಂತ ಭಾವಿಸಬೇಕಿಲ್ಲ. ಇದೇ ಠಾಣೆಯ ಸಿಬ್ಬಂದಿ ಅಪರಾಧಿಗಳಿಗೆ ಸಿಂಹ ಸ್ವಪ್ನರಾಗಿದ್ದಾರೆ. ಸಜ್ಜನರ ರಕ್ಷಕರಾಗಿ, ಅಪರಾಧಿಗಳನ್ನು ದಂಡಿಸುವ ಮಾಲಗತ್ತಿ ಮತ್ತು ಹೊನಕಟ್ಟಿ , ಸಿಬ್ಬಂದಿ ಬಗ್ಗೆ ಜನರಲ್ಲಿ ಅಭಿಮಾನ ಇದೆ ಎಂದುಭಾಲ್ಕಿಯ ಹಿರಿಯ ಮುಖಂಡ ರಾಚಪ್ಪ ಗೋರ್ಟೆ ಮತ್ತು ಅಪ್ಪಾ ಸಾಹೇಬ್ ದೇಶಮುಖ್ ಅಭಿಪ್ರಾಯಪಡುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.