ಬೆಂಗಳೂರು: ಬೆಳಗಾವಿ ಜಿಲ್ಲೆ ಯಳ್ಳೂರ ಗ್ರಾಮದಲ್ಲಿ ‘ಮಹಾರಾಷ್ಟ್ರ ರಾಜ್ಯ’ ಎಂಬ ನಾಮಫಲಕ ಮರುಸ್ಥಾಪನೆ ಹಾಗೂ ಅದಕ್ಕೆ ಸಂಬಂಧಿಸಿದ ವಿದ್ಯಮಾನಗಳ ಬಗ್ಗೆ ಹೈಕೋರ್ಟ್ ಸೋಮವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ಯಳ್ಳೂರಿನಲ್ಲಿ ‘ಮಹಾರಾಷ್ಟ್ರ ರಾಜ್ಯ, ಯಳ್ಳೂರ’ ಎಂದು ಹಾಕಿದ್ದ ನಾಮಫಲಕ ತೆರವು ಮಾಡಿಸಲು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎನ್.ಕುಮಾರ್ ಹಾಗೂ ಬಿ.ಮನೋಹರ ಅವರಿದ್ದ ಪೀಠ ಮುಂದುವರಿಸಿತು.
ಅರ್ಜಿದಾರರ ಪರ ವಕೀಲ ಬಿ.ಎಸ್.ಹಾದಿಮನಿ ಅವರು, ನಾಮಫಲಕ ತೆರವಿಗೆ ಹೈಕೋರ್ಟ್ ಆದೇಶಿಸಿದ ನಂತರ ಯಳ್ಳೂರ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಪೀಠದ ಗಮನಕ್ಕೆ ತಂದರು.
‘ಅಲ್ಲಿ ನಾಮಫಲಕ ತೆರವುಗೊಳಿಸಿದ ನಂತರವೂ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ತನ್ನ ಪುಂಡಾಟಿಕೆ ಮುಂದುವರಿಸಿದೆ. ಯಳ್ಳೂರ ಮಾತ್ರವಲ್ಲದೆ ಗಡಿಯೊಳಗಿನ ಇನ್ನೂ ಕೆಲ ಗ್ರಾಮಗಳಲ್ಲೂ ‘ಮಹಾರಾಷ್ಟ್ರ ರಾಜ್ಯ’ ಎಂಬ ನಾಮಫಲಕಗಳನ್ನು ಹಾಕಲಾಗಿದೆ’ ಎಂದು ವಿವರಿಸಿದರು.
ಈ ವಿವರಣೆ ಕೇಳಿದ ಬಳಿಕ ನ್ಯಾಯಪೀಠವು ಪೊಲೀಸರ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತಲ್ಲದೆ, ‘ಏನು ಮಾಡುತ್ತಿದ್ದೀರಿ’ ಎಂದು ಸರ್ಕಾರಿ ವಕೀಲರನ್ನು ಪ್ರಶ್ನಿಸಿತು. ಆಗ ಸರ್ಕಾರಿ ವಕೀಲರು, ‘ಸರ್ಕಾರ ಸೂಕ್ತ ಕ್ರಮ ಕೈಗೊಂಡಿದೆ’ ಎಂದು ತಿಳಿಸಿದರಾದರೂ ಪೀಠ ಅದಕ್ಕೆ ಅತೃಪ್ತಿ ವ್ಯಕ್ತಪಡಿಸಿ ವಿಚಾರಣೆ ಮುಂದೂಡಿತು.