ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಸ್ವಚ್ಛತಾ ಅಭಿಯಾನ’ ದೇಶದಲ್ಲಷ್ಟೆ ಅಲ್ಲ ವಿದೇಶದಲ್ಲೂ ಗಮನ ಸೆಳೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಿಡಿದು ಸ್ಥಳೀಯ ಸಣ್ಣ–ಪುಟ್ಟ ನಾಯಕರು ಕೂಡ ಪೊರಕೆ– ಗುದ್ದಲಿಗಳನ್ನು ಹಿಡಿದು ಮಾಧ್ಯಮಗಳೆದುರು ಸಾಂಕೇತಿಕವಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ, ಈಗೀಗ ಶಾಲಾ– ಕಾಲೇಜುಗಳಿಗೂ ಈ ಅಭಿಯಾನ ವಿಸ್ತರಿಸಿದೆ. ಸ್ವಚ್ಛತೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಇದೊಂದು ಒಳ್ಳೆಯ ಆಂದೋಲನವಾದರೂ, ಪುರಸಭೆಗಳಿಂದ ಮಹಾನಗರಗಳ ಬೀದಿ ಗುಡಿಸಿ, ಕಸ ಎತ್ತುವ ಪೌರ ಕಾರ್ಮಿಕರ ಬಗ್ಗೆ ಇದುವರೆಗೂ ಯಾರೂ ಸೊಲ್ಲೆತ್ತಿಲ್ಲ.
ಪಟ್ಟಣ ಮತ್ತು ನಗರಗಳ ನೈರ್ಮಲ್ಯಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ಈ ಪೌರ ಕಾರ್ಮಿಕರ ಸಮಸ್ಯೆ, ತ್ಯಾಜ್ಯ ನಿರ್ವಹಣೆ ಹಾಗೂ ವಿಲೇವಾರಿ ಕುರಿತು ರಾಷ್ಟ್ರಮಟ್ಟದಲ್ಲಿ ಎಲ್ಲಿಯೂ ಪ್ರಸ್ತಾಪವಾಗುತ್ತಿಲ್ಲ. ಹೀಗಿರುವಾಗ ‘ಸ್ವಚ್ಛತಾ ಅಭಿಯಾನ’ದ ನಿಜವಾದ ಉದ್ದೇಶ ಈಡೇರುವುದಾದರೂ ಹೇಗೆ? ಮನೆ ಮತ್ತು ಕಚೇರಿಯೊಳಗಿನ ಕಸ ಮತ್ತು ಕೊಳಕು ಒಳಗಿನವರಿಗಷ್ಟೆ ಅರಿವಿಗೆ ಬಂದರೆ, ಬೀದಿಯ ಕೊಳಕು ಮತ್ತು ಕಸ ಪ್ರತಿಯೊಬ್ಬರ ಗಮನಕ್ಕೂ ಬರುತ್ತದೆ. ಆದರೆ ಯಾರೂ ಇದನ್ನು ಸ್ವಚ್ಛಗೊಳಿಸುವ ಅಥವಾ ವಿಲೇವಾರಿ ಮಾಡುವ ಗೊಡವೆಗೆ ಹೋಗುವುದಿಲ್ಲ. ಬದಲಿಗೆ ಆ ಕೆಲಸಗಳೇನಿದ್ದರೂ ಪೌರ ಕಾರ್ಮಿಕರಿಗಷ್ಟೆ ಸೀಮಿತ. ಹಾಗಾಗಿ ಅವರ ಹಾಗೂ ಅವರ ವೃತ್ತಿ ಸಮಸ್ಯೆಗಳು ಬಗೆಹರಿದಾಗ ಮಾತ್ರ ಈ ‘ಸ್ವಚ್ಛತಾ ಅಭಿಯಾನ’ಕ್ಕೆ ನಿಜವಾಗಿಯೂ ಅರ್ಥ ಬರುತ್ತದೆ.