ನವದೆಹಲಿ/ಬೆಂಗಳೂರು(ಐಎಎನ್ ಎಸ್): ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಹತ್ಯೆಯಾದ ಬಳಿಕ 1984ರಲ್ಲಿ ನಡೆದ ಸಿಖ್ ಹತ್ಯಾಕಾಂಡದಿಂದ ಆರಂಭಿಸಿ ಪರಿಸಮಾಪ್ತಿ ವರದಿ ಸಲ್ಲಿಸಿರುವ ಎಲ್ಲ ಪ್ರಕರಣಗಳ ಮರು ತನಿಖೆ ನಡೆಸಬೇಕು ಎಂದು ಆನ್ಲೈನ್ ಅಭಿಯಾನಕ್ಕೆ ಶನಿವಾರ ಚಾಲನೆ ಲಭಿಸಿದೆ.
ಮಾನವಹಕ್ಕುಗಳ ಹೋರಾಟ ಸಂಘಟನೆ ಆಮ್ನೆಸ್ಟಿ ಇಂಟರ್ನ್ಯಾಷನಲ್ ಬೆಂಗಳೂರು ಮತ್ತು ನವದೆಹಲಿಯಲ್ಲಿ ಆರಂಭಿಸಿರುವ ಆನ್ಲೈನ್ ಅಭಿಯಾನದಲ್ಲಿ ದೊಡ್ಡ ಪ್ರಮಾಣದಲ್ಲಿ ಜನರು ಪಾಲ್ಗೊಂಡಿದ್ದಾರೆ. ಸಿಖ್ ಹತ್ಯಾಕಾಂಡದ ಬಲಿಪಶುಗಳಿಗೆ ಸೂಕ್ತ ನ್ಯಾಯ ದೊರೆಯಬೇಕು ಎಂದು ಅಭಿಯಾನದಲ್ಲಿ ಒತ್ತಾಯಿಸಲಾಗಿದೆ.
‘ಇಂದಿರಾ ಅವರ ಹತ್ಯೆ ನಂತರದ ಸಿಖ್ ಹತ್ಯಾಕಾಂಡ ದೇಶದಲ್ಲಿ ನಡೆದ ನಾಚಿಕೆ ಘಟನೆಗಳಲ್ಲೊಂದು. ಈ ಘಟನೆ ನಡೆದು 30 ವರ್ಷ ತುಂಬಿದೆ. ಹಿಂಸಾಚಾರ ಸಂಭವಿಸಿ ಮೂರು ದಶಕಗಳು ಕಳೆದರೂ ಸಂತ್ರಸ್ತರಿಗೆ ಇನ್ನೂ ನ್ಯಾಯ ದೊರೆತಿಲ್ಲ’ ಎಂದು ಆಮ್ನೆಸ್ಟಿ ಇಂಟರ್ನ್ಯಾಷನಲ್ನ ಭಾರತ ಕಾರ್ಯಕ್ರಮ ನಿರ್ದೇಶಕ ಶೈಲೇಶ್ ರೈ ಹೇಳಿದ್ದಾರೆ. ಸಿಖ್ ವಿರೋಧಿ ಹತ್ಯಾಕಾಂಡದ ಪ್ರಕರಣಗಳ ಪಾರದರ್ಶಕ ಮತ್ತು ಪರಿಣಾಮಕಾರಿ ತನಿಖೆಗಾಗಿ ಸ್ವತಂತ್ರ ತಂಡವನ್ನು ರಚಿಸಬೇಕು ಎಂದು ಸರ್ಕಾರವನ್ನು ಜನ ಆಗ್ರಹಿಸಿದ್ದಾರೆ.
ಲೂಧಿಯಾನ ವರದಿ: ಸಿಖ್ ವಿರೋಧಿ ಹತ್ಯಾಕಾಂಡದಲ್ಲಿ ಮೃತಪಟ್ಟವರಿಗೆ ಪರಿಹಾರವಾಗಿ ₨5 ಲಕ್ಷ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದಂತೆ ಪಂಜಾಬ್ ರಾಜ್ಯದಲ್ಲಿ ಉಗ್ರರ ದಾಳಿಗೆ ಸಿಕ್ಕಿ ಮೃತಪಟ್ಟವರಿಗೂ ₨5 ಲಕ್ಷ ಪರಿಹಾರ ನೀಡಬೇಕು ಎಂದು ಆ ರಾಜ್ಯದ ಬಿಜೆಪಿ ಘಟಕ ಒತ್ತಾಯಿಸಿದೆ. ಸಿಖ್ ಹತ್ಯಾಕಾಂಡದ ಸಂತ್ರಸ್ತರಿಗೆ ಪರಿಹಾರ ನೀಡುವ ಎನ್ಡಿಎ ಸರ್ಕಾರದ ಕ್ರಮ ಸಕಾರಾತ್ಮಕವಾದ ಹೆಜ್ಜೆಯಾಗಿದೆ ಎಂದು ಬಿಜೆಪಿ ಹಿರಿಯ ಸದಸ್ಯ ಮನೋರಂಜನ್ ಕಲಿಯಾ ಹೇಳಿದ್ದಾರೆ.
ಎಸ್ಐಟಿ: ಮೋದಿ ಮಧ್ಯಪ್ರವೇಶಕ್ಕೆ ಕೇಜ್ರಿವಾಲ್ ಆಗ್ರಹ
ನವದೆಹಲಿ(ಪಿಟಿಐ): ಸಿಖ್ ವಿರೋಧಿ ಹತ್ಯಾಕಾಂಡದ ತನಿಖೆಗೆ ವಿಶೇಷ ತನಿಖಾ ದಳ (ಎಸ್ಐಟಿ) ರಚಿಸಲು ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶ ಮಾಡಬೇಕು ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ ಕೇಜ್ರಿವಾಲ್ ಆಗ್ರಹಿಸಿದ್ದಾರೆ.
ಹತ್ಯಾಕಾಂಡದಲ್ಲಿ ಮೃತಪಟ್ಟ 3,325 ಜನರ ಕುಟುಂಬಕ್ಕೆ ₨5ಲಕ್ಷ ಪರಿಹಾರ ನೀಡುವ ಕೇಂದ್ರದ ನಿರ್ಧಾರ ಸ್ವಾಗತಿಸಿ ರುವ ಕೇಜ್ರಿವಾಲ್, ಎಸ್ಐಟಿ ರಚಿಸುವ ಹಿಂದಿನ ಎಎಪಿ ಸರ್ಕಾರದ ತೀರ್ಮಾವನ್ನು ಜಾರಿ ಮಾಡಲು ಮೋದಿ ಮಧ್ಯಪ್ರವೇಶ ಮಾಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಹತ್ಯಾಕಾಂಡದಲ್ಲಿ ತಮ್ಮವರನ್ನು ಕಳೆದುಕೊಂಡಿರುವ ಜನರಿಗೆ ಕೇವಲ ಧನಸಹಾಯ ಪರಿಹಾರವಾಗದು. ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗಬೇಕು ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.