ಒಂದೆಡೆ ‘ಮುಸ್ಲಿಮರ ಮತ ಹಕ್ಕು ರದ್ದುಪಡಿಸಿ’ ಎಂದು ಶಿವಸೇನಾ ಮುಖವಾಣಿ ‘ಸಾಮ್ನಾ’ ಆವಾಜ್ ಹಾಕಿದರೆ, ಇನ್ನೊಂದೆಡೆ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ‘ಭಾರತದಲ್ಲಿ ಇರುವವರೆಲ್ಲ ಹಿಂದೂಗಳೇ’ ಎಂದೂ; ‘ಮುಸ್ಲಿಮರ ಡಿ.ಎನ್.ಎ. ಪರೀಕ್ಷೆ ಮಾಡಿಸಿದರೆ ಅವರ ಪೂರ್ವಜರೆಲ್ಲ ಹಿಂದೂಗಳೇ ಎಂಬುದು ಸ್ಪಷ್ಟವಾಗುತ್ತದೆ’ (ಪ್ರ.ವಾ., ಏ. 13) ಎಂದೂ ಸಂಶೋಧನೆ ಮಾಡಿರುತ್ತಾರೆ. ಇದೆಲ್ಲ ಯಾಕಾಗಿ? ಅಲ್ಪ ಸಂಖ್ಯಾತರ ಬದುಕಿನ ಹಕ್ಕನ್ನೇ ಕಸಿದುಕೊಂಡು ಅವರನ್ನು ಎರಡನೇ ದರ್ಜೆ ಪ್ರಜೆಗಳನ್ನಾಗಿ ಮಾಡುವುದಕ್ಕೆ ಪೂರ್ವಪೀಠಿಕೆಯಲ್ಲವೆ?
‘ನೋ ರೇಸ್ ಈಸ್ ಪ್ಯೂರ್’ ಎಂಬುದನ್ನು ಆಧುನಿಕ ವಿಜ್ಞಾನ ಎಂದೋ ಸಾದರಪಡಿಸಿದೆ. ಇಂಡೋ ಆರ್ಯನ್, ಕಕೇಶಿಯನ್, ಮಂಗೋಲಿಯನ್, ದ್ರಾವಿಡ ಮುಂತಾಗಿ ಅನೇಕ ಜನಾಂಗಗಳು ಬೆರೆತು, ಕಲೆತು ಕಸಿಗೊಂಡ ಜನಾಂಗಗಳು ಈಗ ಬದುಕುತ್ತಿವೆ. ಅವುಗಳ ಬೇರುಗಳನ್ನು ವೃಥಾ ಕೆದಕುವುದು ಯಾಕೆ?
ಹಾಗೆ ನೋಡಿದರೆ ಇವತ್ತಿನ ವೈದಿಕ ಬ್ರಾಹ್ಮಣರ ಡಿ.ಎನ್.ಎ. ಪರೀಕ್ಷಿಸಿದರೆ ಅಲ್ಲಿ ದ್ರಾವಿಡ ವರ್ಗದ ಡಿ.ಎನ್.ಎ. ದೊರೆಯುತ್ತದೆ. ಆದ್ದರಿಂದ ಸ್ವಾಮಿ ಅಂಥವರ ಮಾತು ತೀರಾ ಬಾಲಿಶ ಎನಿಸುತ್ತದೆ.
ಸರ್ವಜನಾಂಗವೂ ಕೂಡಿ ಬಾಳಬೇಕಾದುದು ಇಂದಿನ ತುರ್ತು. ಹಾಗಲ್ಲದೆ ಅಲ್ಪಸಂಖ್ಯಾತ ಸಮುದಾಯಗಳ ಬಗ್ಗೆ ನಿರ್ದಯವಾಗಿ ನಡೆದುಕೊಳ್ಳುವುದು ಸಂವಿಧಾನಬದ್ಧ ಅವರ ಹಕ್ಕನ್ನು ಕಸಿದುಕೊಂಡಂತೆಯೇ ಸರಿ.
ಆದಕಾರಣ, ಕೋಮುಸೌಹಾರ್ದ ಮಾತ್ರ ಇಂದು ಭಾರತದ ಪ್ರಗತಿಗೆ ತೆರೆದ ಮಾರ್ಗ ಎಂಬುದನ್ನು ಇವರು ಮನಗಾಣಬೇಕು.