ವಿಧಾನಸಭೆಯಿಂದ ವಿಧಾನ ಪರಿಷತ್ಗೆ ನಡೆಯುವ ಚುನಾವಣೆಯಲ್ಲಿ ಪ್ರತಿಯೊಬ್ಬ ಶಾಸಕರ ಮತಕ್ಕೂ ಒಂದು ಕೋಟಿ ರೂಪಾಯಿ ಕೊಡಬೇಕಾಗುತ್ತದೆ ಎನ್ನುವ ಮಾತು ಜನತಂತ್ರ ವ್ಯವಸ್ಥೆಗೆ ಕಪ್ಪುಚುಕ್ಕೆ. ತಮ್ಮ ಪಕ್ಷದ ವಿಜಾಪುರ ಜಿಲ್ಲೆಯ ಮುಖಂಡರೊಬ್ಬರ ಅಭಿಮಾನಿಗಳ ಜತೆಗೆ ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಮಾತನಾಡಿದ್ದೆನ್ನಲಾದ ಧ್ವನಿಮುದ್ರಿಕೆಯ ವಿವರ ಮಾಧ್ಯಮಗಳಲ್ಲಿ ಬಹಿರಂಗವಾಗಿದೆ. ‘ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಂದ ತಲಾ ಒಂದು ಕೋಟಿ ರೂಪಾಯಿ ಕೊಡಿಸುವಂತೆ ನಮ್ಮ ಶಾಸಕರು ಬೇಡಿಕೆ ಇಟ್ಟಿದ್ದಾರೆ’ ಎಂದು ಕುಮಾರಸ್ವಾಮಿಯವರು ಖುದ್ದಾಗಿ ಹೇಳಿರುವುದು ಇಡೀ ವ್ಯವಸ್ಥೆ ಎಷ್ಟೊಂದು ಕೊಳಕು ತುಂಬಿ ನಾರುತ್ತಿದೆ ಎನ್ನುವುದಕ್ಕೆ ಸ್ಪಷ್ಟಸಾಕ್ಷಿ.
‘ನಾನು ಯಾರಿಂದಲೂ ಹಣ ಕೇಳಿಲ್ಲ. ವಾಸ್ತವ ಸ್ಥಿತಿ ಬಗ್ಗೆಯಷ್ಟೆ ಮಾತನಾಡಿದ್ದೇನೆ. ಯಾವ ಪಕ್ಷವೂ ಸಾಚಾ ಅಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಕೂಡಾ ಉದ್ಯಮಿಗಳಿಂದ ಹಣ ಸಂಗ್ರಹಿಸುತ್ತವೆ’ ಎಂದೆಲ್ಲಾ ಆ ಬಳಿಕ ಕುಮಾರಸ್ವಾಮಿಯವರು ಮಾಧ್ಯಮಗಳಲ್ಲಿ ಸ್ಪಷ್ಟನೆ ನೀಡಿದ್ದಾರೆ. ಆದರೆ ಒಂದು ರಾಜಕೀಯ ಪಕ್ಷದ ಜವಾಬ್ದಾರಿಯುತ ನಾಯಕರಾಗಿ ಅವರು ಆಡಿರುವ ಮಾತು ಯಾವುದೇ ರೀತಿಯಿಂದಲೂ ಸಮರ್ಥನೆಗೆ ಅರ್ಹವಲ್ಲ. ಮೇಲ್ಮನೆಗೆ ಅದರದ್ದೇ ಆದ ಘನತೆ, ಗೌರವ ಇದೆ. ನೇರವಾಗಿ ಚುನಾವಣೆಯಲ್ಲಿ ಗೆದ್ದು ಕೆಳಮನೆ ಪ್ರವೇಶಿಸುವ ಶಾಸಕರು ಮಾಡುವ ಕಾನೂನುಗಳನ್ನು ಪರಾಮರ್ಶಿಸಲೆಂದೇ ವಿಧಾನ ಪರಿಷತ್ತನ್ನು ಸ್ಥಾಪಿಸಲಾಗಿದೆ. ಅಲ್ಲಿ ರಾಜಕೀಯ ರಂಗದ ಅನುಭವಿ ಮುತ್ಸದ್ದಿಗಳು ಹಾಗೂ ವಿವಿಧ ಕ್ಷೇತ್ರಗಳ ತಜ್ಞರು ಸ್ಥಾನ ಪಡೆಯಬೇಕು. ಅದು ಬಿಟ್ಟು ಕೋಟಿಗಟ್ಟಳೆ ಹಣ ಸುರಿಯುವ ಏಕೈಕ ಅರ್ಹತೆಯುಳ್ಳವರಿಗೆ ಅಲ್ಲಿ ಮಣೆ ಹಾಕಲಾಗುತ್ತದೆ ಎನ್ನುವುದು ನಾಚಿಕೆಗೇಡಿನ ಸಂಗತಿ.
ವಿಧಾನ ಪರಿಷತ್ಗೆ ಕಾಂಗ್ರೆಸ್ ಸರ್ಕಾರ ವಿವಿಧ ಕ್ಷೇತ್ರಗಳ ತಜ್ಞರನ್ನು ನಾಮನಿರ್ದೇಶನ ಮಾಡುವ ಸಂದರ್ಭದಲ್ಲೂ ಕೇವಲ ಪಕ್ಷನಿಷ್ಠ ರಾಜಕಾರಣಿಗಳನ್ನು ನೇಮಕ ಮಾಡಿರುವ ಇತ್ತೀಚಿನ ಉದಾಹರಣೆ ನಮ್ಮ ಕಣ್ಣಮುಂದಿದೆ. ಈ ದುಷ್ಟಪ್ರವೃತ್ತಿಯನ್ನು ಪಕ್ಷಭೇದವಿಲ್ಲದೆ ಎಲ್ಲರೂ ಅನುಸರಿಸಿಕೊಂಡು ಬರುತ್ತಿದ್ದಾರೆ. ಪ್ರಜಾಪ್ರಭುತ್ವದ ಮೂಲತತ್ವಗಳನ್ನೇ ನಾಶ ಮಾಡುವ ಇಂತಹ ರೊಕ್ಕಸೊಕ್ಕಿನ ರಾಜಕೀಯವನ್ನು ಬುಡಮಟ್ಟದಲ್ಲೇ ಚಿವುಟಿ ಹಾಕಬೇಕಾದ ಅಗತ್ಯವಿದೆ. ದುಡ್ಡಿನ ಕುಳಗಳ ಪ್ರತಿಷ್ಠೆ ಮೆರೆಸುವ ಅಥವಾ ಸೋತ ಪುಢಾರಿಗಳ ರಾಜಕೀಯ ಪುನರ್ವಸತಿ ಕೇಂದ್ರವಾಗಿಯಷ್ಟೇ ಪರಿಷತ್ತು ಉಳಿದುಕೊಳ್ಳುವುದಾದರೆ ಅದರ ಅಗತ್ಯವಾದರೂ ಏನು? ಸಂಸದೀಯ ವ್ಯವಸ್ಥೆಯಲ್ಲಿ ಜನರ ನಂಬಿಕೆಯನ್ನು ನಾಶಗೊಳಿಸುವಂತಹ ವಿದ್ಯಮಾನಗಳು ಹೆಚ್ಚಾಗುತ್ತಿವೆ.
ಲೋಕಸಭೆಯಲ್ಲಿ ಪ್ರಶ್ನೆಗಳನ್ನು ಕೇಳಲೂ ಕೆಲವು ಸಂಸದರು ಹಣ ಪಡೆಯುತ್ತಿದ್ದರೆಂಬ ಸಂಗತಿ ಬಹಿರಂಗವಾಗಿದೆ. ರಾಜ್ಯಸಭೆ ಚುನಾವಣೆಗೂ ಕೆಲವೊಮ್ಮೆ ಕಾಂಚಾಣದ ‘ಕಳಂಕ’ ಅಂಟಿದ ನಿದರ್ಶನಗಳಿವೆ. ಚುನಾವಣೆಯಲ್ಲಿ ಗೆಲ್ಲಲು ಅಕ್ರಮ ದಾರಿಗಳಲ್ಲಿ ಕೋಟಿಗಟ್ಟಳೆ ಖರ್ಚು ಮಾಡಿ, ಅದನ್ನು ಮರಳಿ ಗಳಿಸಲು ಸಂಸತ್ತು ಮತ್ತು ವಿಧಾನಮಂಡಲವನ್ನು ದುರ್ಬಳಕೆ ಮಾಡಿಕೊಳ್ಳುವ ಈ ಪ್ರವೃತ್ತಿ ಪ್ರಜಾಪ್ರಭುತ್ವದ ಮೂಲಬೇರುಗಳನ್ನೇ ನಾಶ ಮಾಡಲಿದೆ. ಈ ಅನಿಷ್ಟ ಪ್ರವೃತ್ತಿಯಿಂದ ಪ್ರಜಾಪ್ರಭುತ್ವದ ಬುನಾದಿ ಕುಸಿದುಬೀಳುವ ಮುನ್ನ ಜನರು ಎಚ್ಚೆತ್ತುಕೊಳ್ಳಬೇಕಿದೆ. ವ್ಯವಸ್ಥೆಯನ್ನು ಶುದ್ಧೀಕರಿಸಲು ಪ್ರಬಲ ಜನಾಂದೋಲನವೇ ನಡೆಯಬೇಕಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.