ದೊಡ್ಡಬಳ್ಳಾಪುರ: ದೇಶದ ಪ್ರತಿಯೊಬ್ಬ ಪ್ರಜೆಗೂ ವಿಮೆ ದೊರೆತ ದಿನ ದೇಶದ ಅಭಿವೃದ್ಧಿ ಪರಿಪೂರ್ಣವಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಐಸಿ ಪ್ರತಿನಿಧಿಗಳು ಕಾರ್ಯ ಪ್ರವೃತ್ತರಾಗಬೇಕು ಎಂದು ಭಾರತೀಯ ವಿಮಾ ನಿಗಮದ ದೊಡ್ಡಬಳ್ಳಾಪುರ ಶಾಖೆ ಮುಖ್ಯ ವ್ಯವಸ್ಥಾಪಕ ಬಿ.ಸಿ.ಚನ್ನಕೇಶವ ಹೇಳಿದರು.
ಅವರು ನಗರದಲ್ಲಿ ನಡೆದ ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಸಂಘದ ಸುವರ್ಣ ಹಬ್ಬ ಮತ್ತು ೨೦೧೪-–೧೫ನೇ ಸಾಲಿನ ಸರ್ವ ಸದಸ್ಯರ ಮಹಾಸಭೆಯಲ್ಲಿ ಮಾತನಾಡುತ್ತಿದ್ದರು. ಪ್ರತಿನಿಧಿಗಳು ಬದಲಾಗುತ್ತಿರುವ ಸ್ಪರ್ಧಾತ್ಮಕ ಯುಗಕ್ಕೆ ಹೊಂದಿಕೊಂಡು ಹೋಗಬೇಕು. ಭಾರತೀಯ ಜೀವ ವಿಮಾ ನಿಗಮ ಸಾರ್ವಜನಿಕರ ನಂಬಿಕೆಯನ್ನು ಉಳಿಸಿಕೊಂಡು ಬರುತ್ತಿದೆ. ನಮ್ಮ ಒಳಿತಷ್ಟೇ ಮುಖ್ಯ ಅಲ್ಲ, ಗ್ರಾಹಕರ ಸೇವೆಯೇ ಮುಖ್ಯ ಎಂದರು.
‘ಲಿಯಾಫಿ’ ದಕ್ಷಿಣ ಮಧ್ಯ ವಲಯ ಅಧ್ಯಕ್ಷ ಸಿಂಗಾಪುರ ಶ್ರೀನಿವಾಸ್ ಮಾತನಾಡಿದರು. ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಸಂಘದ ತಾಲ್ಲೂಕು ಅಧ್ಯಕ್ಷ ಸೋಮಶೇಖರ್, ಗೌರವಾಧ್ಯಕ್ಷ ಜಿ.ಮಾರೇಗೌಡ, ಪ್ರಧಾನ ಕಾರ್ಯದರ್ಶಿ ಎಂ.ಮಂಜುನಾಥ್, ಖಜಾಂಚಿ ಟಿ.ಕೆ.ಶ್ರೀನಿವಾಸ್, ಉಪಾಧ್ಯಕ್ಷ ಎಂ.ನಾಗರಾಜು ಜಿ.ಎನ್. ವೆಂಕಟೇಶ್, ಸಿ. ಎನ್ಗಂಗಾಧರ್, ಎನ್.ಕೆ. ಹನುಮಂತೇಗೌಡ, ಅಖಿಲ ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಸಂಘದ ಅಧ್ಯಕ್ಷ ಎಸ್.ಬಿ. ಶ್ರೀನಿವಾಸಾಚಾರಿ, ಆಲ್ ಇಂಡಿಯಾ ಏಜೆಂಟ್ಸ್ ವೆಲ್ ಪೇರ್ ಕಮಿಟಿ ಚೇರಮನ್ ಸಿ.ಜಿ.ಲೋಕೇಂದ್ರ, ದಕ್ಷಿಣ ಮದ್ಯ ವಲಯದ ಐ.ಟಿ ಚೇರ್ಮನ್ ಎನ್.ಕೃಷ್ಣ, ದಕ್ಷಿಣ ವಲಯ ಉಪಾಧ್ಯಕ್ಷ ಎಚ್.ಎ. ಚಂದ್ರಶೇಖರ್ ಇದ್ದರು. ಇದೇ ಸಂದರ್ಭದಲ್ಲಿ ಸಂಘದ ಸದಸ್ಯರ ಮಕ್ಕಳಿಗೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದವರಿಗೆ ಪ್ರತಿಭಾಪುರಸ್ಕಾರ ನೀಡಲಾಯಿತು. ಸಂಘಕ್ಕೆ ಅತಿ ಹೆಚ್ಚು ಸದಸ್ಯರನ್ನು ನೋಂದಣಿ ಮಾಡಿದ ಸದಸ್ಯರು ಮತ್ತು ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು.