ನವದೆಹಲಿ: ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಬೇಡಿಕೆಗೆ ತನ್ನ ಬೆಂಬಲವಿಲ್ಲ ಎಂದು ಭಾರತೀಯ ಜನತಾ ಪಕ್ಷ ಬುಧವಾರ ಸ್ಪಷ್ಟಪಡಿಸಿದೆ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಎನ್ನುವುದು ಮಾಜಿ ಸಚಿವ ಉಮೇಶ್ ಕತ್ತಿ ಅವರ ಸ್ವಂತ ಅಭಿಪ್ರಾಯ. ಅದಕ್ಕೆ ರಾಜ್ಯ ಮಟ್ಟದಲ್ಲಿ ಅಥವಾ ರಾಷ್ಟ್ರ ಮಟ್ಟದಲ್ಲಿ ಪಕ್ಷದ ಬೆಂಬಲವಿಲ್ಲ ಎಂದು ರಾಜ್ಯದ ಉಸ್ತುವಾರಿ ಹೊತ್ತಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮುರಳೀಧರರಾವ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಉತ್ತಮ ಆಡಳಿತದ ದೃಷ್ಟಿಯಿಂದ ಚಿಕ್ಕ ರಾಜ್ಯಗಳು ಇರಬೇಕು ಎನ್ನುವುದು ಬಿಜೆಪಿ ನಿಲುವಾಗಿದ್ದರೂ, ಎಲ್ಲ ರಾಜ್ಯಗಳ ವಿಷಯದಲ್ಲಿ ಈ ವಾದ ಸಮರ್ಥನೀಯವಲ್ಲ ಕರ್ನಾಟಕ ಹೋಳು ಮಾಡುವ ಕುರಿತು ಯಾವುದೇ ಸಂದರ್ಭಗಳಲ್ಲೂ ಪಕ್ಷದೊಳಗೆ ಚರ್ಚೆ ನಡೆದಿಲ್ಲವೆಂದು ಅವರು ಹೇಳಿದರು.
ಉಮೇಶ್ ಕತ್ತಿ ಯಾವ ಪರಿಸ್ಥಿತಿಯಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಎಂದು ಮಾತನಾಡಿದ್ದಾರೆ. ಅದಕ್ಕೆ ಕಾರಣವೇನು, ಯಾವಾಗ ಹೇಳಿದ್ದಾರೆಂದು ಮಾಹಿತಿ ಪಡೆಯಲಾಗುವುದು. ಅನಂತರ ಅವರೊಂದಿಗೆ ಮಾತನಾಡುವ ವಿಚಾರವಿದೆ ಎಂದು ಮುರಳೀಧರರಾವ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರಾಜ್ಯದ ಉಸ್ತುವಾರಿ ಆಗಿ ನೇಮಕಗೊಂಡ ಬಳಿಕ ಬೆಂಗಳೂರಿಗೆ ಹೋಗಿಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತಿತರ ನಾಯಕರೊಂದಿಗೆ ಮಾತುಕತೆ ಮಾಡಲಾಗಿದೆ. ಈ ತಿಂಗಳ 13ರಂದು ಬೆಂಗಳೂರಿಗೆ ಭೇಟಿ ನೀಡುವ ಕಾರ್ಯಕ್ರಮವಿದೆ. ಎಲ್ಲ ನಾಯರೊಂದಿಗೆ ಪಕ್ಷ ಬಲಪಡಿಸುವ ಬಗ್ಗೆ ಚರ್ಚಿಸಲಾಗುವುದು.
ದಕ್ಷಿಣ ಭಾರತದಲ್ಲಿ ಬಿಜೆಪಿ ನೆಲೆ ವಿಸ್ತರಿಸುವುದಾಗಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಈಗಾಗಲೇ ಹೇಳಿದ್ದಾರೆ. ಈ ದೃಷ್ಟಿಯಿಂದ ಕರ್ನಾಟಕ ಅತ್ಯಂತ ಮಹತ್ವದ ರಾಜ್ಯ. ಅಲ್ಲಿ ಮರಳಿ ಅಧಿಕಾರ ಹಿಡಿಯುವುದು ಸವಾಲಿನ ಪ್ರಶ್ನೆ ಎಂದು ಅವರು ನುಡಿದರು.