ನವದೆಹಲಿ(ಪಿಟಿಐ): ರಾಷ್ಟ್ರದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರ 51ನೇ ಪುಣ್ಯತಿಥಿ ಅಂಗವಾಗಿ ಇಲ್ಲಿನ ಶಾಂತಿ ವನದಲ್ಲಿನ ನೆಹರೂ ಅವರ ಸ್ಮಾರಕಕ್ಕೆ ಬುಧವಾರ ಗೌರವ ನಮನ ಸಲ್ಲಿಸಲಾಯಿತು.
ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಮಾಜಿ ಪ್ರಧಾನಿ ಮನಮೋಹನ ಸಿಂಗ್ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಬೆಳಿಗ್ಗೆ ಯಮುನಾ ನದಿ ತೀರದಲ್ಲಿನ ಶಾಂತಿ ವನಕ್ಕೆ ತೆರಳಿ ನೆಹರೂ ಅವರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು.
ಅಖಿಲ ಭಾರತ ಕಾಂಗ್ರೆಸ್ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ ಹಾಜರಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಟ್ವಿಟ್ ಮಾಡುವ ಮೂಲಕ ಗೌರವ ಸಲ್ಲಿಸಿದ್ದಾರೆ.
ಗುಲಾಂ ನಬಿ ಆಜಾದ್, ಶೀಲಾ ದೀಕ್ಷಿತ್, ಅಹಮದ್ ಪಟೇಲ್, ಶ್ರೀ ಪ್ರಕಾಶ್ ಜೈಸ್ವಾಲ್ ಮತ್ತು ಅಜಯ್ ಮಾಕೆನ್ ಸೇರಿದಂತೆ ಕಾಂಗ್ರೆಸ್ ನಾಯಕರು ಗೌರವ ಸಲ್ಲಿಸಿದರು.
ಮೋದಿ ಟ್ವಿಟ್: ಪ್ರಥಮ ಪ್ರಧಾನಿ ಅವರ ಪುಣ್ಯತಿಥಿ ಅಂಗವಾಗಿ ನೆಹರೂ ಅವರಿಗೆ ನಮನ ಸಲ್ಲಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ‘ನಮ್ಮ ಪ್ರಥಮ ಪ್ರಧಾನಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಯನ್ನು ಎಂದಿಗೂ ಮರೆಯುವಂತಿಲ್ಲ’ ಎಂದು ಟ್ವಿಟ್ ಮಾಡಿದ್ದಾರೆ.