ವಿಶ್ವಸಂಸ್ಥೆ (ಪಿಟಿಐ): ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಜೂನ್ 30ರಿಂದ ನಡೆಯಲಿರುವ ಪ್ರದರ್ಶನದಲ್ಲಿ ಭಾರತದ ಖ್ಯಾತ ನಿರ್ದೇಶಕ ಸತ್ಯಜಿತ್ ರೇ ಅವರ ಛಾಯಾಚಿತ್ರ ಪ್ರದರ್ಶನಗೊಳ್ಳಲಿದೆ.
ವಿಶ್ವಸಂಸ್ಥೆ ಮಹಾಸಭೆ ಅಧ್ಯಕ್ಷ ಸಾಮ್ ಕುಟೇಸಾ ಅವರು ಜನಸಮುದಾಯದ ಒಳಿತಿಗೆ ಶ್ರಮಿಸಿದ ಜಗತ್ತಿನ ಹದಿನಾರು ಚಿಂತಕರು ಮತ್ತು ಕಲಾವಿದರ ಛಾಯಾಚಿತ್ರಗಳ ಪ್ರದರ್ಶನ ಏರ್ಪಡಿಸಿದ್ದು, ಈ ಪೈಕಿ ಸತ್ಯಜಿತ್ ರೇ ಅವರ ಛಾಯಾಚಿತ್ರವೂ ಪ್ರದರ್ಶನದಲ್ಲಿ ಸ್ಥಾನ ಪಡೆದುಕೊಂಡಿದೆ.
ಫ್ಯಾಬ್ರಿಜಿಯೊ ರಗೈರೊ ಅವರು ಶಿಲ್ಪಗಳು ಮತ್ತು ಭಾವಚಿತ್ರಗಳನ್ನು ಮಾಡಿದ್ದರೆ, ನಿನಾ ಮುಜ್ಜಿ ಅವರು ಪೇಪರ್ನಲ್ಲಿ ಕಲಾಕೃತಿಗಳನ್ನು ನಿರ್ಮಿಸಿದ್ದಾರೆ.
ಸತ್ಯಜಿತ ರೇ ಅಲ್ಲದೇ ಪಾಕಿಸ್ತಾನ ಹೆಣ್ಣುಮಕ್ಕಳ ಶಿಕ್ಷಣಹಕ್ಕು ಕಾರ್ಯಕರ್ತೆ, ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸುಫ್ಝೈ, ಆಫ್ರಿಕಾದ ಖ್ಯಾತ ಸಂಗೀತಕಾರ ಗೇಬನ್ ಪೈರ್ರೆ ಕ್ಲೇವರ್ ಅಕೆನ್ಡೆಂಗ್ಯೂ, ಅಮೆರಿಕದ ಲೇಖಕಿ ಮಾಯಾ ಏಂಜೆಲೊ, ಬ್ರಿಟನ್ ನಟಿ ಆಡ್ರೆ ಹೆಪ್ಬರ್ನ್ ಮತ್ತಿತರರ ಭಾವಚಿತ್ರಗಳೂ ಪ್ರದರ್ಶನದಲ್ಲಿ ಇರಲಿವೆ.