ನವದೆಹಲಿ (ಪಿಟಿಐ): ಪ್ರತಿಷ್ಠಿತ ವಿಶೇಷ ರಕ್ಷಣಾ ದಳದ (ಎಸ್ಪಿಜಿ) ಮುಖ್ಯಸ್ಥ ಹಿರಿಯ ಐಪಿಎಸ್ ಅಧಿಕಾರಿ ಕೆ. ದುರ್ಗಾ ಪ್ರಸಾದ್ ಅವರ ಅಧಿಕಾರದ ಅವಧಿ ವಿಸ್ತರಿಸಲು ಸರ್ಕಾರ ನಿರಾಕರಿಸಿದೆ. ಸಂಪುಟದ ಮೇಲಿನ ನೇಮಕಾತಿ ಸಮಿತಿಯ ನಿರ್ದೇಶನದಂತೆ ಉತ್ತರಾಧಿಕಾರಿ ನೇಮಕದವರೆಗೆ ಹಿರಿಯ ಅಧಿಕಾರಿ ಎಸ್. ಚತುರ್ವೇದಿ ಅವರು ಎಸ್ಪಿಜಿ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ ಎಂದು ಸರ್ಕಾರ ತಿಳಿಸಿದೆ.
ಔಪಚಾರಿಕವಾಗಿ ಪ್ರಸಾದ್ ಅವರ ಅಧಿಕಾರಾವಧಿ ಈ ತಿಂಗಳ 2ರಂದೇ ಕೊನೆಗೊಂಡಿದೆ. ಆದರೆ ಸಾರ್ಕ್ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ನೇಪಾಳಕ್ಕೆ ತೆರಳಿರುವಾಗಲೇ ಪ್ರಸಾದ್ ಅವರ ಸೇವೆಯನ್ನು ಸರ್ಕಾರ ಕೊನೆಗೊಳಿಸಿರುವುದು ಅಚ್ಚರಿಗೆ ಕಾರಣವಾಗಿದೆ.
2011ರ ನವೆಂಬರ್ನಲ್ಲಿ ಪ್ರಸಾದ್ ಅವರನ್ನು ಎಸ್ಪಿಜಿ ನಿರ್ದೇಶಕರನ್ನಾಗಿ ನೇಮಿಸಲಾಗಿತ್ತು. 1981ರ ಬ್ಯಾಚ್ನ ಆಂಧ್ರಪ್ರದೇಶ ಕೇಡರ್ ಐಪಿಎಸ್ ಅಧಿಕಾರಿ ಪ್ರಸಾದ್ ಹೆಸರನ್ನು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನೇತೃತ್ವದ ಸಂಪುಟ ನೇಮಕಾತಿ ಸಮಿತಿ ಅಂತಿಮಗೊಳಿಸಿತ್ತು. ಎಸ್ಪಿಜಿ ಸಿಬ್ಬಂದಿ ಹಾಲಿ ಪ್ರಧಾನಿ ಮಾತ್ರವಲ್ಲದೆ, ಮಾಜಿ ಪ್ರಧಾನಿಗಳು ಮತ್ತು ಅವರ ಹತ್ತಿರದ ಕುಟುಂಬಕ್ಕೂ ರಕ್ಷಣೆ ನೀಡುತ್ತಿದೆ.