ನವದೆಹಲಿ (ಪಿಟಿಐ/ಐಎಎನ್ಎಸ್): ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಮವಾರ ಬಾಲಿವುಡ್ ನಟ ಹಾಗೂ ನಿರ್ಮಾಪಕ ಅಮೀರ್ ಖಾನ್ ಅವರು ಭೇಟಿ ಮಾಡಿದರು.
ಭೇಟಿಯ ವೇಳೆ ಖಾನ್ ಅವರು, ತಾವು ಟಿವಿಯಲ್ಲಿ ನಡೆಸಿಕೊಡುವ ‘ಸತ್ಯಮೇವ ಜಯತೆ’ ಕಾರ್ಯಕ್ರಮದಲ್ಲಿ ಚರ್ಚಿಸಿದ ಸಾಮಾಜಿಕ ಪಿಡುಗುಗಳ ಕುರಿತು ಮಾತುಕತೆ ನಡೆಸಿದರು ಎನ್ನಲಾಗಿದೆ.
ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ಈ ವೇಳೆ ಪ್ರಧಾನಿ ಭರವಸೆ ನೀಡಿದರು ಎಂದು ಅಮೀರ್ ಖಾನ್ ನಂತರ ತಿಳಿಸಿದರು.
ಸಾಮಾಜಿಕ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿದ ‘ಸತ್ಯಮೇವ ಜಯತೆ’ ಕಾರ್ಯಕ್ರಮದ ಮೂಲಕ ‘ಬದಲಾವಣೆಗಾಗಿ ಮತ’ ಎಂಬ ನಮ್ಮ ಅಭಿಯಾನಕ್ಕೆ ದೇಶದಾದ್ಯಂತ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿತ್ತು ಎಂಬುದನ್ನು ಪ್ರಧಾನಿ ಅವರ ಗಮನಕ್ಕೆ ತಂದಿರುವುದಾಗಿಯೂ ಅಮೀರ್ಖಾನ್ ಟ್ವೀಟ್ ಮಾಡಿದ್ದಾರೆ.
ಮೋದಿ ಹಾಗೂ ಖಾನ್ ಅವರ ನಡುವಣ ಭೇಟಿಯನ್ನು ಸೌಜನ್ಯದ ಭೇಟಿ ಎಂದು ಪ್ರಧಾನಿ ಕಚೇರಿ ಹೇಳಿದೆ.