ನವದೆಹಲಿ (ಪಿಟಿಐ): ಬಾಬ್ರಿ ಮಸೀದಿ ಧ್ವಂಸ ಕುರಿತು ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ವಿವಾದಾತ್ಮಕ ಹೇಳಿಕೆ ಹಾಗೂ ಆಗ್ರಾ ಮತಾಂತರ ಪ್ರಕರಣ ಸೋಮವಾರ ಉಭಯ ಸದನಗಳಲ್ಲಿ ಭಾರಿ ಗದ್ದಲಕ್ಕೆ ಕಾರಣವಾದವು.
ಈ ವಿವಾದಾತ್ಮಕ ವಿಷಯಗಳ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು ಹಾಗೂ ಪ್ರಧಾನಿ ಈ ಬಗ್ಗೆ ಸದನಕ್ಕೆ ಹೇಳಿಕೆ ನೀಡಬೇಕು ಎಂದು ವಿರೋಧ ಪಕ್ಷಗಳು ಪಟ್ಟು ಹಿಡಿದ ಕಾರಣ ಉಭಯ ಸದನಗಳ ಕಲಾಪಗಳನ್ನು ಐದಾರು ಬಾರಿ ಮುಂದೂಡಬೇಕಾಯಿತು.
ಬಿಹಾರದ ವೈಶಾಲಿಯಲ್ಲಿ ಇತ್ತೀಚೆಗೆ ಬಿಜೆಪಿ ಸಂಸದ ಆದಿತ್ಯನಾಥ್, ಬಾಬ್ರಿ ಮಸೀದಿ ಧ್ವಂಸ ಹಿಂದೂಗಳ ಏಕತೆಗೆ ಸಾಕ್ಷಿ ಮತ್ತು ಮುಸ್ಲಿಮರ ಮರು ಮತಾಂತರ ನಿಲ್ಲಬಾರದು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ರಾಜ್ಯಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಸಿಪಿಎಂನ ಸೀತಾರಾಂ ಯೆಚೂರಿ ಹಾಗೂ ಸಿಪಿಐನ ಡಿ. ರಾಜಾ ಪ್ರಧಾನಿ ಹೇಳಿಕೆಗೆ ಪಟ್ಟು ಹಿಡಿದರು.
‘ಅಭಿವೃದ್ಧಿ ವಿಷಯವನ್ನು ಮುಂದಿಟ್ಟುಕೊಂಡು ಅಧಿಕಾರಕ್ಕೆ ಬಂದಿರುವ ಬಿಜೆಪಿ ಇದರಿಂದ ಹಿಂದೆ ಸರಿಯಬಾರದು. ಒಪ್ಪಿಗೆಯ ಮತಾಂತರ ಸರಿ. ಆದರೆ, ಬಲಾಂತರದ ಮತಾಂತರ ಕೂಡಲೇ ನಿಲ್ಲಬೇಕು’ ಎಂದು ಎನ್ಡಿಎ ಮಿತ್ರಪಕ್ಷ ವಾದ ಆರ್ಪಿಐನ ಮುಖ್ಯಸ್ಥ ರಾಮದಾಸ್ ಅಠಾವಳೆ ಒತ್ತಾಯಿಸಿದರು. ಎಡ ಪಕ್ಷಗಳ ಬೆಂಬಲಕ್ಕೆ ನಿಂತ ಕಾಂಗ್ರೆಸ್, ಟಿಎಂಸಿ ಹಾಗೂ ಜೆಡಿಯು ಸೇರಿದಂತೆ ಬಹುತೇಕ ವಿರೋಧ ಪಕ್ಷಗಳ ಸದಸ್ಯರು, ಪ್ರಧಾನಿ ಮೋದಿ ಅವರು ತಮ್ಮ ಸಂಸದರು ಹಾಗೂ ಸಂಪುಟ ಸಹೋದ್ಯೋಗಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ವಿವಾದಾತ್ಮಕ ಹೇಳಿಕೆ ನೀಡುವ ಬಿಜೆಪಿ ಸಂಸದರ ವಿರುದ್ಧ ಖಂಡಿತ ಕ್ರಮ ಕೈಗೊಳ್ಳುವುದಾಗಿ ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು ಭರವಸೆ ನೀಡಿದರು.