ಮುಂಬೈ (ಪಿಟಿಐ): ಮಹಾರಾಷ್ಟ್ರದಲ್ಲಿ ಅಧಿಕಾರ ಹಂಚಿಕೆಗೆ ಬಿಜೆಪಿ ಮತ್ತು ಶಿವಸೇನಾ ನಡುವೆ ತೆರೆಮರೆಯ ಕಸರತ್ತುಗಳು ನಡೆಯುತ್ತಿರುವ ಮಧ್ಯೆಯೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿರುವ ಶಿವಸೇನಾ, ಹಿಂದಿನ ಯುಪಿಎ ಸರ್ಕಾರವನ್ನು ತೆಗಳಿದೆ.
ಎನ್ಡಿಎ ಮೈತ್ರಿಕೂಟದ ಪಕ್ಷಗಳಿಗೆ ನರೇಂದ್ರ ಮೋದಿ ಅವರು ಭಾನುವಾರ ದೀಪಾವಳಿ ಚಹಾಕೂಟ ಹಮ್ಮಿಕೊಂಡಿದ್ದನ್ನು ಶಿವಸೇನಾ ಪ್ರಶಂಸಿಸಿದೆ. ದೇಶದ ಸಾಂಸ್ಕೃತಿಕ ಮುಖವನ್ನು ನರೇಂದ್ರ ಮೋದಿ ಬದಲಾಯಿತ್ತಿದ್ದಾರೆ ಎಂದು ಶಿವಸೇನಾ ಮುಖವಾಣಿ ‘ಸಾಮ್ನಾ’ ಸಂಪಾದಕೀಯದಲ್ಲಿ ಹೇಳಿದೆ.
ಇಫ್ತಾರ್ ಕೂಟಗಳನ್ನು ಆಯೋಜನೆ ಮಾಡಿ ಹಿಂದಿನ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತ ಸಮುದಾಯವನ್ನು ಓಲೈಸಿ ಮತಬ್ಯಾಂಕ್ ಗಟ್ಟಿಮಾಡಿ ಕೊಳ್ಳಲು ಮುಂದಾಗಿತ್ತು ಎಂದು ಆರೋಪಿಸಿದೆ.
‘ಈವರೆಗೆ ಈದ್ ಹಬ್ಬದ ವೇಳೆಯಲ್ಲಿ ನಾಯಕರು ಇಫ್ತಾರ್ ಕೂಟಗಳನ್ನು ಮಾತ್ರ ಆಯೋಜಿಸುತ್ತಿದ್ದರು. ಆದರೆ ಈಗ ದೀಪಾವಳಿಯನ್ನೂ ಆಚರಿಸಲಾಗು ತ್ತದೆ. ಇದೊಂದು ಗಮನಾರ್ಹವಾದ ಬದಲಾವಣೆ. ಅಲ್ಲದೆ ಎಲ್ಲರೂ ಮೆಚ್ಚತಕ್ಕ ಕಾರ್ಯ. ಈ ಮೂಲಕ ಮೋದಿ ಅವರು ದೇಶದ ಸಾಂಸ್ಕೃತಿಕ ಮುಖವನ್ನು ಬದಲಾಯಿಸುತ್ತಿದ್ದಾರೆ ಎಂದು ಸಂಪಾದಕೀಯ ಹೇಳಿದೆ.