ಹುಬ್ಬಳ್ಳಿ: ಅತ್ಯಾಚಾರ, ಲೈಂಗಿಕ ಕಿರುಕುಳ ಪ್ರಕರಣಗಳಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ರಾಜ್ಯದಾದ್ಯಂತ ಒಕ್ಕೊರಲ ಕೂಗು ಎದ್ದಿದೆ. ಆದರೆ, ಆರೋಪ ಸಾಬೀತುಪಡಿಸುವ ನಿಟ್ಟಿನಲ್ಲಿ ಪ್ರಮಖ ಸಾಕ್ಷ್ಯ ಒದಗಿಸುವ ‘ಡಿಎನ್ಎ ಪರೀಕ್ಷೆ’ ವರದಿ ನೀಡುವ ಕೇಂದ್ರವೇ ಸಿಬ್ಬಂದಿ ಕೊರತೆಯಿಂದ ನರಳುತ್ತಿದೆ!
ಬೆಂಗಳೂರಿನ ಮಡಿವಾಳದಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿರುವ (ಎಫ್ಎಸ್ಎಲ್) ಈ ಘಟಕ ಆರಂಭವಾದಾಗಿನಿಂದಲೂ (2007 ನವೆಂಬರ್) ಸರ್ಕಾರ ಇಲ್ಲಿಗೆ ‘ಹುದ್ದೆ’ಯನ್ನೇ ಸೃಷ್ಟಿಸಿಲ್ಲ. ಎಫ್ಎಸ್ಎಲ್ನ ಇತರ ಘಟಕಗಳಿಂದ ನಿಯೋಜನೆಗೊಂಡ, ಡಿಎನ್ಎ ಪರೀಕ್ಷೆಯ ತರಬೇತಿ ಪಡೆದ ಇಬ್ಬರು ವೈಜ್ಞಾನಿಕ ಅಧಿಕಾರಿಗಳು ಆಗಿನಿಂದಲೂ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಎರಡು ತಿಂಗಳಿನಿಂದ ಹೆಚ್ಚು ಪ್ರಕರಣಗಳು ಈ ಕೇಂದ್ರಕ್ಕೆ ಬರುತ್ತಿರುವುದರಿಂದ ಎಫ್ಎಸ್ಎಲ್ನ ಬಯಾಲಾಜಿಕಲ್ ವಿಭಾಗದಿಂದ ಮೂರು ಮಂದಿಯನ್ನು ತಾತ್ಕಾಲಿಕವಾಗಿ ನೇಮಿಸಿಕೊಳ್ಳಲಾಗಿದೆ.
ಪ್ರಮುಖ ಸಾಕ್ಷ್ಯ: ಅತ್ಯಾಚಾರ, ಲೈಂಗಿಕ ಕಿರುಕುಳ, ಪಿತೃತ್ವ ವಿವಾದ, ಅಪರಿಚಿತ, ಸುಟ್ಟು ಕರಲಾದ ಮೃತದೇಹಗಳ ಗುರುತು ಪತ್ತೆ ಮತ್ತಿತರ ಪ್ರಕರಣಗಳಲ್ಲಿ ಡಿಎನ್ಎ ಪರೀಕ್ಷೆಯ ವರದಿಯನ್ನು ಪ್ರಮುಖ ಸಾಕ್ಷ್ಯವನ್ನಾಗಿ ಪರಿಗಣಿಸಲಾಗುತ್ತದೆ. ಆದರೆ, ಸಿಬ್ಬಂದಿ ಇಲ್ಲದಿರುವುದರಿಂದ ಡಿಎನ್ಎ ಪರೀಕ್ಷೆಗೆ ಬಂದ ಇಂತಹ 490 ಪ್ರಕರಣಗಳ ಸಾವಿರಾರು ಮಾದರಿಗಳು (ಸ್ಯಾಂಪಲ್) ಈ ಘಟಕದ ಶೈತ್ಯಾಗಾರದಲ್ಲಿ ತುಂಬಿಕೊಂಡಿವೆ.
ಈ ಪೈಕಿ 65 ಪ್ರಕರಣಗಳು ಅತ್ಯಾಚಾರ ಮತ್ತು ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ್ದು. ಡಿಎನ್ಎ ವರದಿ ಸಿಗದೇ ಇರುವುದರಿಂದ ಈ ಪ್ರಕರಣಗಳ ದೋಷಾರೋಪ ಪಟ್ಟಿ ನ್ಯಾಯಾಲಯಗಳಿಗೆ ಇನ್ನೂ ಸಲ್ಲಿಕೆಯಾಗಿಲ್ಲ. ರಾಜ್ಯದಲ್ಲಿ ಡಿಎನ್ಎ ಕೇಂದ್ರ ಆರಂಭಕ್ಕೆ ಮುನ್ನ ತನಿಖೆಗೆ ಬೇಕಾದ ಎಲ್ಲ ಸ್ಯಾಂಪಲ್ಗಳನ್ನು ಹೈದರಾಬಾದಿಗೆ ಕಳುಹಿಸಲಾಗುತ್ತಿತ್ತು. ಇಲ್ಲಿ ಆರಂಭಗೊಂಡ ಬಳಿಕ ಡಿಎನ್ಎ ವರದಿ ತ್ವರಿತವಾಗಿ ಸಿಗಬಹುದು ಎಂದು ನಿರೀಕ್ಷಿಸಲಾಗಿತ್ತು.
2007ರಲ್ಲಿ ಈ ಕೇಂದ್ರದಲ್ಲಿ ಯಾವುದೇ ಪರೀಕ್ಷೆ ನಡೆಸಲಾಗಿಲ್ಲ. 2008ರ ಮಾರ್ಚ್ನಿಂದ ಇಲ್ಲಿ ಡಿಎನ್ಎ ಪರೀಕ್ಷೆ ಆರಂಭವಾಯಿತು. 2011ರವರೆಗಿನ ಪ್ರಕರಣಗಳ ವಿಲೇವಾರಿ ಆಗಿದೆ’ ಎಂದು ಎಫ್ಎಸ್ಎಲ್ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘2012ರಿಂದ 2014ರ ಜೂನ್ವರೆಗಿನ 717 ಪ್ರಕರಣಗಳಲ್ಲಿ ಆದ್ಯತೆ ಮೇಲೆ ಡಿಎನ್ಎ ಪರೀಕ್ಷೆ ವರದಿ ನೀಡಲಾಗಿದೆ.
ನ್ಯಾಯಾಲಯದ ಆದೇಶದ ಮೇರೆಗೆ ತ್ವರಿತವಾಗಿ ನೀಡಬೇಕಾದ ಮತ್ತು ಬೆಂಗಳೂರು– ನಾಂದೇಡ್ ರೈಲು ದುರಂತದಲ್ಲಿ ಸಾವಿಗೀಡಾದ 26 ಮಂದಿ ಗುರುತು ಪತ್ತೆ, ವೋಲ್ವೊ ಬಸ್ಗಳಲ್ಲಿ ಸುಟ್ಟು ಕರಕಲಾದ ದೇಹಗಳು ಮತ್ತಿತರ ಪ್ರಕರಣಗಳಲ್ಲಿ ಆದ್ಯತೆ ಮೇಲೆ ಡಿಎನ್ಎ ವರದಿ ನೀಡಲಾಗಿದೆ. ಹೀಗಾಗಿ ಸರದಿಯಂತೆ ವರದಿ ತಯಾರಿಸಲು ಸಾಧ್ಯವಾಗುತ್ತಿಲ್ಲ. ಆದರೂ ಇನ್ನೂ 490 ಪ್ರಕರಣಗಳ ಬಾಕಿ ಇವೆ’ ಎಂದು ಅವರು ತಿಳಿಸಿದರು.
‘ಡಿಎನ್ಎ ಪರೀಕ್ಷೆಗಾಗಿ ಬಂದ ಪ್ರಕರಣಗಳಿಗೆ 10ರಿಂದ 12 ತಿಂಗಳ ಅವಧಿಯಲ್ಲಿ ವರದಿ ನೀಡಲಾಗುವುದು ಎಂದು ತಿಳಿಸಲಾಗುತ್ತದೆ. ಸ್ಯಾಂಪಲ್ಗಳ ಸಂಖ್ಯೆ ಮತ್ತು ಪ್ರಕರಣದ ಮಾದರಿಗೆ ಅನುಗುಣವಾಗಿ ವರದಿ ತಯಾರಿಸಲು ಸಮಯಾವಕಾಶ ಬೇಕಾ-ಗುತ್ತದೆ. ಸಾಮೂಹಿಕ ಅತ್ಯಾಚಾರ ಪ್ರಕರಣಗಳಲ್ಲಿ ವಿಶ್ಲೇಷಣೆ ಮಾಡಲು ಇನ್ನೂ ಹೆಚ್ಚು ಸಮಯ ಬೇಕಾಗುತ್ತದೆ. ಒಬ್ಬ ವೈಜ್ಞಾನಿಕ ಅಧಿಕಾರಿ ತಿಂಗಳಿಗೆ ಗರಿಷ್ಠ 10 ಪ್ರಕರಣಗಳ ವರದಿ ತಯಾರಿಸಲು ಸಾಧ್ಯ.
ಸದ್ಯ ಸರಾಸರಿ ತಿಂಗಳಿಗೆ 40 ಪ್ರಕರಣಗಳು ಬರುತ್ತಿವೆ. ತ್ವರಿತವಾಗಿ ವರದಿ ನೀಡುವಂತೆ ನ್ಯಾಯಾಲಯದಿಂದ ಬರುವ ಆದೇಶಗಳನ್ನು
ಆದ್ಯತೆ ಮೇಲೆ ತೆಗೆದುಕೊಂಡು ವರದಿ ನೀಡಲಾಗುತ್ತಿದೆ. ಈಗಿರುವ ಸಿಬ್ಬಂದಿಗೆ ಆ ಕೆಲಸ ಮಾಡಲಷ್ಟೇ ಸಾಧ್ಯ’ ಎಂದರು. ‘ಕೇಂದ್ರಕ್ಕೆ ಸುಸಜ್ಜಿತ ಕಟ್ಟಡ, ಅತ್ಯಾಧುನಿಕ ಸೌಲಭ್ಯ ಇದೆ. ಈಗ ಬರುವ ಪ್ರಕರಣಗಳ ಸಂಖ್ಯೆ ಗಮನಿಸಿದರೆ ನಾಲ್ವರು ಸಿಬ್ಬಂದಿ (ಸಹಾಯಕ ನಿರ್ದೇಶಕ, ಯುನಿಟ್ ಅಧಿಕಾರಿ, ಇಬ್ಬರು ವೈಜ್ಞಾನಿಕ ಅಧಿಕಾರಿ) ಇರುವ ಕನಿಷ್ಠ ಮೂರು ಯೂನಿಟ್ ತಕ್ಷಣ ಅಗತ್ಯವಿದೆ. ಈ ಬಗ್ಗೆ
ಸದ್ಯದಲ್ಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದರು.
‘ಅತ್ಯಾಚಾರ, ಲೈಂಗಿಕ ಪ್ರಕರಣಗಳ ವಿಚಾರಣೆಗೆ ತ್ವರಿತ ನ್ಯಾಯಾಲಯ ಸ್ಥಾಪಿಸುವ ಕುರಿತು ಸರ್ಕಾರ ಚಿಂತನೆ ನಡೆಸಿದೆ. ಆಗ ದೋಷಾರೋಪ ಪಟ್ಟಿಯನ್ನು ತಿಂಗಳ ಒಳಗೆ ಸಲ್ಲಿಸಬೇಕಾಗಿ ಬರುವುದರಿಂದ ಡಿಎನ್ಎ ವರದಿಯೂ ತ್ವರಿತವಾಗಿ ಲಭ್ಯವಾಗಬೇಕು. ಈಗಿನ ವ್ಯವಸ್ಥೆಯಲ್ಲಿ ಅದು ಅಸಾಧ್ಯ. ಸಣ್ಣಪುಟ್ಟ ಪ್ರಕರಣಗಳೂ ಡಿಎನ್ಎ ವರದಿಗೆ ಬರುತ್ತಿವೆ. ಮುಂದೆ ಡಿಎನ್ಎ ವರದಿ ಕಡ್ಡಾಯಗೊಳಿಸುವ ಸಾಧ್ಯತೆ ಇರುವುದರಿಂದ ಗೃಹ ಇಲಾಖೆ ಈ ಬಗ್ಗೆ ತುರ್ತು ಗಮನಹರಿಸಬೇಕಾಗಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.