ಬೆಂಗಳೂರು: ‘ಅಸ್ಸಾಂನಲ್ಲಿ ಪ್ರವಾಸಿ ತಾಣಗಳ ಅಭಿವೃದ್ಧಿ ಜತೆಗೆ ಪ್ರವಾಸಿಗರಿಗೆ ಉತ್ತಮ ಸೌಲಭ್ಯ ಒದಗಿಸಲು ಹೆಚ್ಚು ಒತ್ತು ಕೊಡಲಾಗುತ್ತಿದೆ’ ಎಂದು ಅಸ್ಸಾಂ ಪ್ರವಾಸೋದ್ಯಮ ಇಲಾಖೆ ಆಯುಕ್ತ ಅಶುತೋಷ್ ಅಗ್ನಿಹೋತ್ರಿ ಅವರು ಹೇಳಿದರು.
ಅಸ್ಸಾಂ ಪ್ರವಾಸೋದ್ಯಮ ಇಲಾಖೆ ವತಿಯಿಂದ ನಗರದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಕಾಜಿರಂಗ ರಾಷ್ಟ್ರೀಯ ಉದ್ಯಾನ, ಕಾಮಾಕ್ಯ ದೇವಸ್ಥಾನ, ಟೀ ತೋಟಗಳು, ಗಾಲ್ಫ್ ಮೈದಾನಗಳು ಸೇರಿದಂತೆ ಅಸ್ಸಾಂನಲ್ಲಿ ರಮಣೀಯ ಪ್ರವಾಸಿ ತಾಣಗಳಿವೆ. ಹೀಗಾಗಿ ವರ್ಷದಿಂದ ವರ್ಷಕ್ಕೆ ಪ್ರವಾಸಿಗರ ಸಂಖ್ಯೆಯೂ ಹೆಚ್ಚುತ್ತಿದೆ’ ಎಂದರು.
ಕಳೆದ ವರ್ಷ 43 ಲಕ್ಷ ದೇಶೀಯ ಪ್ರವಾಸಿಗರು ಹಾಗೂ 23 ಸಾವಿರ ವಿದೇಶಿ ಪ್ರವಾಸಿಗರು ಅಸ್ಸಾಂಗೆ ಭೇಟಿ ನೀಡಿದ್ದರು. ಪ್ರವಾಸಿಗರ ಅನುಕೂಲಕ್ಕಾಗಿ ಟೀ ತೋಟಗಳು ಹಾಗೂ ಗಾಲ್ಫ್ ಮೈದಾನ ಗಳ ಬಳಿ ಸುಸಜ್ಜಿತ ರೆಸ್ಟೋರೆಂಟ್, ಹೋಂ ಸ್ಟೇ, ಹೋಟೆಲ್ಗಳನ್ನು ನಿರ್ಮಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.