ಮೈಸೂರು: ವಿಶ್ವವಿಖ್ಯಾತ ಅರಮನೆ ಪ್ರವೇಶ ನಿರ್ಬಂಧಿಸಿರುವುದರಿಂದ ಮೈಸೂರಿಗೆ ಬರುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಚಾಮುಂಡಿಬೆಟ್ಟ, ಮೃಗಾಲಯ, ಕೃಷ್ಣರಾಜಸಾಗರ (ಬೃಂದಾವನ) ಹಾಗೂ ನಂಜನಗೂಡಿನ ಶ್ರೀಕಂಠೇಶ್ವರ ದೇಗುಲದಲ್ಲಿ ಮೂರು ದಿನಗಳಿಂದ ಜನರ ಸಂಖ್ಯೆ ಕಡಿಮೆಯಾಗಿದೆ.
‘ಸಾಮಾನ್ಯವಾಗಿ ಮೈಸೂರಿಗೆ ಬರುವವರು ಯೋಜನೆ ಹಾಕಿಕೊಂಡು ಬರುತ್ತಾರೆ. ಸುತ್ತಮುತ್ತಲಿನ ಪ್ರದೇಶಕ್ಕೆ ತೆರಳಲು ಸಮಯ ನಿಗದಿ ಮಾಡಿ ಕೊಂಡಿರುತ್ತಾರೆ. ಜೂನ್ 29ರ ವರೆಗೆ ಅರಮನೆ ಪ್ರವೇಶಕ್ಕೆ ಅವಕಾಶ ಇಲ್ಲದ ಕಾರಣ ಮೈಸೂರಿಗೆ ಪ್ರವಾಸ ಬರುತ್ತಿಲ್ಲ. ಅರಮನೆ ವೀಕ್ಷಣೆ ಯಿಂದ ವಂಚಿತರಾಗಲು ಯಾರೂ ಬಯ ಸಲ್ಲ’ ಎಂದು ಪ್ರವಾಸಿ ಮಿತ್ರ ಗೃಹರಕ್ಷಕ ಕಿರಣ್ ‘ಪ್ರಜಾವಾಣಿ’ ತಿಳಿಸಿದರು.
ಅರಮನೆಗೆ ಬರುವವರಿಗೆ ಮಾಹಿತಿ ನೀಡಲೆಂದು ಪ್ರವಾಸೋದ್ಯಮ ಇಲಾಖೆ ಯಿಂದ ಐವರು ‘ಪ್ರವಾಸಿ ಮಿತ್ರ’ ಗೃಹ ರಕ್ಷಕರನ್ನು ನೇಮಿಸಲಾಗಿದೆ. ಮೈಸೂರು ಜಿಲ್ಲೆಯಲ್ಲಿ ಒಟ್ಟು 13 ಮಂದಿ ಇದ್ದಾರೆ. ಚಾಮುಂಡಿ ಬೆಟ್ಟದಲ್ಲಿ ಐವರು ಇದ್ದಾರೆ. ಸುತ್ತಮುತ್ತಲಿನ ಪ್ರವಾಸಿ ತಾಣಗಳ ಬಗ್ಗೆ ಅವರು ಪ್ರವಾಸಿಗರಿಗೆ ಮಾಹಿತಿ ನೀಡುತ್ತಾರೆ.
ಪ್ರವೇಶ ನಿರ್ಬಂಧ ಮಾಹಿತಿ ಇಲ್ಲದ ಕೆಲವರು ಅರಮನೆ ಬಾಗಿಲಲ್ಲಿ ಬಂದು ನಿಂತಿದ್ದರು. ಅವರಿಗೆಲ್ಲಾ ಈ ಪ್ರವಾಸಿ ಮಿತ್ರರೇ ಕಾರಣ ಹೇಳಿ ಕಳುಹಿಸು ತ್ತಿದ್ದರು. ಹೊರರಾಜ್ಯದವರು ಹಾಗೂ ವಿದೇಶಿಗರನ್ನು ಸಮಾಧಾನ ಮಾಡಿ ಕಳಿಸುವುದು ಅವರಿಗೆ ದೊಡ್ಡ ಸವಾಲಾಗಿದೆ.
ಇದರಿಂದ ಆಟೊ, ಟಾಂಗಾಗಳಿಗೆ ವ್ಯಾಪಾರ ಕಡಿಮೆ ಆಗಿದೆ. ಗಿರಾಕಿ ಗಳಿಲ್ಲದೆ ಚಾಲಕರು ಟಾಂಗಾದಲ್ಲೇ ಮಲಗಿದ್ದ ದೃಶ್ಯ ಸಾಮಾನ್ಯವಾಗಿತ್ತು. ರಜೆ ದಿನವಾದ ಭಾನುವಾರವೂ ಮೃಗಾಲಯಕ್ಕೆ ಭೇಟಿ ನೀಡಿದವರ ಸಂಖ್ಯೆ ಕಡಿಮೆ. ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ವಿವಾಹ ನಿಮಿತ್ತ ಜೂನ್ 24ರಿಂದ 29ರವರೆಗೆ ಅರಮನೆ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.