ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಹದಲ್ಲಿ ಪ್ರಬಲರಾಗಿ

ಈ ಜೀವನಾ 
Last Updated 19 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

‘ಪ್ರವಾಹಕ್ಕಾಗಿ ಕಾಯಬೇಡಿ, ಮಳೆಯಲ್ಲಿ ನೃತ್ಯ ಮಾಡಲು ಕಲಿಯಿರಿ’
– ವಿವಿಯಾನ್ ಗ್ರೀನ್‌.

ಈ ಹೇಳಿಕೆ ಇನ್ನೊಬ್ಬರ ಸಹಾಯ ಅಪೇಕ್ಷಿಸದೆ ಆತ್ಮಹತ್ಯೆ ಆಲೋಚನೆಗಳನ್ನು ತಡೆಗಟ್ಟುವ ಮಾರ್ಗದ ಮಹತ್ವವನ್ನು ಹೇಳುತ್ತದೆ. ಬದುಕಿನಲ್ಲಿ ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸುತ್ತಿರುವವರು ಆತ್ಮಹತ್ಯೆಗೆ ಪ್ರಯತ್ನಿಸುತ್ತಾರೆ. ಇಂಥ ಸಮಯದಲ್ಲಿ ತನಗೆ ತಾನೆ ಹೇಗೆ ಸಹಾಯ ಮಾಡಿಕೊಳ್ಳಬಹುದು ಎಂದು ತಿಳಿದುಕೊಳ್ಳಲು ಹಲವು ಮಾರ್ಗಗಳಿವೆ.

ಮನೋಜ್ (ಹೆಸರು ಬದಲಿಸಲಾಗಿದೆ), 26 ವರ್ಷದ ಐಟಿ ಉದ್ಯೋಗಿ. ಆತ ನಿಷ್ಠಾವಂತ ಕೆಲಸಗಾರನಾಗಿದ್ದ. ಆತನ ಕಾರ್ಯದಕ್ಷತೆಗೆ ಸಹೋದ್ಯೋಗಿಗಳು ಮತ್ತು ಬಾಸ್ ಶಹಬ್ಬಾಸ್ ಎಂದಿದ್ದರು. ಆತನಿಗೆ ಇತ್ತೀಚೆಗೆ ಕೆಲಸ ಕಷ್ಟವೆನಿಸಿತ್ತು. ಸಾಕಷ್ಟು ಸಲ ದಣಿದಂತೆ ಕಾಣುತ್ತಿದ್ದ. ಏಕಾಗ್ರತೆ ಕಳೆದುಕೊಂಡಿದ್ದ. ಆತನಿಗೆ ಸರಿಯಾಗಿ ನಿದ್ರಿಸಲು ಸಾಧ್ಯವಾಗುತ್ತಿರಲಿಲ್ಲ. ಇವಿಷ್ಟಕ್ಕೂ ಕಾರಣ ಆತನ ಕೌಟಂಬಿಕ ಸಮಸ್ಯೆಗಳು.

ಆತನ ತಂದೆ ಕುಡುಕ. ಕುಡಿದು ಬಂದು ತಾಯಿಗೆ ಹೊಡೆಯುತ್ತಿದ್ದ. ಇತ್ತೀಚಿನ ದಿನಗಳಲ್ಲಿ ಮನೋಜ್ ತನ್ನ ತಂದೆಯ ಕುಡಿತದ ಕುರಿತು ಹೆಚ್ಚು ಚಿಂತಿತನಾಗಿದ್ದ. ತಾಯಿ ಆರೋಗ್ಯ ಮತ್ತು ಮನೆಯ ಆರ್ಥಿಕ ಸಂಕಷ್ಟ ಮನೋಜ್ ನಿದ್ದೆಗೆಡಿಸಿತ್ತು. ಜೊತೆಗೆ ಆತ ತನ್ನ ಬದುಕನ್ನು ಅಂತ್ಯಗೊಳಿಸಿಕೊಳ್ಳುವ ಆಲೋಚನೆ ಮಾಡುತ್ತಿದ್ದ. ಆತ ಕಾಲೇಜಿನಲ್ಲಿ ಸೆಕೆಂಡ್ ಸೆಮಿಸ್ಟರ್‌ನಲ್ಲಿ ಫೇಲಾದಾಗಲೂ ಇದೇ ರೀತಿ ಆತ್ಮಹತ್ಯೆ ಆಲೋಚನೆ ಮಾಡಿದ್ದ.

ಮನೋಜ್ ತನ್ನ ರೂಮೆಟ್ ರವಿಯ ಜೊತೆ ಈ ಆತ್ಮಹತ್ಯೆ ಆಲೋಚನೆ ಹಂಚಿಕೊಂಡು ರಿಲ್ಯಾಕ್ಸ್ ಆಗಿದ್ದ. ಆ ಸಮಯದಲ್ಲಿ ಮನೋಜ್ ಕಾಲೇಜ್ ಕ್ರಿಕೆಟ್ ತಂಡದಲ್ಲಿದ್ದ. ಮುಂಬರುವ ಟೂರ್ನಮೆಂಟ್‌ಗಾಗಿ ಅಭ್ಯಾಸ ಮಾಡಬೇಕಿತ್ತು. ಆತ ಕ್ರಿಕೆಟ್‌ನತ್ತ ಹೆಚ್ಚು ಗಮನ ಹಾಯಿಸಿದ್ದರಿಂದ ಮತ್ತು ರವಿ ಜೊತೆ ಮಾತಾಡಿದ್ದರಿಂದ ಆತನ ಆತ್ಮಹತ್ಯೆ ಚಿಂತನೆ ಕಡಿಮೆಯಾಯಿತು. ರವಿ ಜೊತೆ ಅಧ್ಯಯನ ಮಾಡಲು ಶುರು ಮಾಡಿದ ಮತ್ತು ಕ್ರಿಕೆಟ್ ಟೂರ್ನಿಯಲ್ಲಿ ಗೆಲುವು ಸಾಧಿಸಿದ. ಆಗ ಆತ್ಮಹತ್ಯೆ ಚಿಂತನೆ ಸಂಪೂರ್ಣವಾಗಿ ದೂರವಾಯ್ತು.

ತನ್ನ ಕಾಲೇಜು ದಿನಗಳಲ್ಲಿ ತಾನು ಹೇಗೆ ಎಲ್ಲವನ್ನೂ ಜಯಿಸಿ ಬಂದೆ ಎಂಬುದನ್ನು ನೆನಪಿಸಿಕೊಂಡ ಮನೋಜ್, ಈಗಲೂ ಅದೇ ರೀತಿ ಈಜಿ ಜಯಿಸಿಲು ನಿರ್ಧರಿಸಿದ. ರವಿಗೆ ಕರೆ ಮಾಡಿ ಪ್ರತಿನಿತ್ಯ ವ್ಯಾಯಾಮ ಮಾಡಲು ಆರಂಭಿಸಿದ. ಮನೋಜ್‌ನ ಆತ್ಮಹತ್ಯೆ ನಿರ್ಧಾರ ನಿಧಾನವಾಗಿ ದೂರವಾಗತೊಡಗಿತು. ಕೆಲಸದಲ್ಲಿ ಆತನ ಕಾರ್ಯದಕ್ಷತೆ ಹೆಚ್ಚಾಯ್ತು. ಆತ್ಮಹತ್ಯೆ ಆಲೋಚನೆ ಬದಿಗಿಟ್ಟು ಆತ ತನ್ನ ಕುಟುಂಬದ ಕುರಿತು, ಮುಂದಿನ ಯೋಜನೆಗಳ ಕುರಿತು ಯೋಚಿಸಿದ್ದು ಆತನಿಗೆ ಸಹಾಯವಾಯ್ತು. ರವಿಯ ಸಹಾಯ ತೆಗೆದುಕೊಂಡು ಹೊಸ ಯೋಚನೆಗಳೊಂದಿಗೆ ಕೆಲಸದಲ್ಲೂ ಉತ್ಕೃಷ್ಟನಾದ.

ಪ್ರತಿ ಮೂರು ವ್ಯಕ್ತಿಗಳಲ್ಲಿ ಒಬ್ಬರು ಬದುಕಿನ ಯಾವುದಾದರೂ ಸಮಯದಲ್ಲಿ ಆತ್ಮಹತ್ಯೆ ಯೋಚನೆ ಮಾಡುತ್ತಾರೆ. ಜೀವನದಲ್ಲಿ ಸೋಲು, ನಿರಾಸೆ ಮತ್ತು ಕಹಿ ಘಟನೆಗಳಾದಾಗ ಆತ್ಮಹತ್ಯೆ ಯೋಚನೆ ಸಾಮಾನ್ಯ. ಬೇರೆಯವರೊಂದಿಗೆ ಹಂಚಿಕೊಳ್ಳಲು ಕಷ್ಟ. ಅವರು ಇದನ್ನು ತಪ್ಪಾಗಿ ಅರ್ಥೈಸಿಕೊಂಡು ಬೇಸರಪಡಬಹುದೆಂಬ ಭಯ. ಇನ್ನೂ, ಈ ಆಲೋಚನೆಗಳನ್ನು ಹಂಚಿಕೊಳ್ಳುವವರು ಅತಿಯಾಗಿ ಮಾತನಾಡುತ್ತಿರುವಂತೆ, ಭಾವ ಉದ್ರೇಕಕ್ಕೆ ಒಳಗಾದವರಂತೆ ಭಾಸವಾಗುತ್ತಾರೆ. ಆದಾಗ್ಯೂ ಆತ್ಮಹತ್ಯೆ ಕುರಿತ ಆಲೋಚನೆ ಹಂಚಿಕೊಳ್ಳುವುದು ಮನದೊಳಗಿನ ನೋವು ದೊಡ್ಡ ಮಟ್ಟದಲ್ಲಿ ಕಡಿಮೆಯಾಗುತ್ತದೆ.

ಆತ್ಮಹತ್ಯೆ ಆಲೋಚನೆಗಳು ಮರುಕಳಿಸುತ್ತವೆ ಮತ್ತು ಏಕಾಂಗಿಯಾಗಿದ್ದಾಗ, ಕೆಲಸವಿಲ್ಲದೆ ಖಾಲಿ ಇರುವಾಗ ಹೆಚ್ಚಾಗುತ್ತವೆ. ಕುಟುಂಬದೊಂದಿಗೆ ಅಥವಾ ಹತ್ತಿರದ ಸ್ನೇಹಿತರೊಂದಿಗೆ ಚಟುವಟಿಕೆ ಆರಂಭಿಸುವುದು ಆತ್ಮಹತ್ಯೆ ಆಲೋಚನೆಗಳನ್ನು ಕಡಿಮೆ ಮಾಡುತ್ತದೆ. ಈ ಸಂದರ್ಭದಲ್ಲಿ ಮನಸ್ಸಿಗೆ ಸಂತೋಷ ಕೊಡುವ ಹವ್ಯಾಸದಲ್ಲಿ ಮತ್ತು ಕೆಲಸದಲ್ಲಿ ತೊಡಗಿಕೊಳ್ಳುವುದರಿಂದ ಆತ್ಮಹತ್ಯೆ ಯೋಚನೆಗಳು ಕಡಿಮೆಯಾಗುತ್ತವೆ.

ಹಿಂದಿನ ಕಷ್ಟಕರ ಪರಿಸ್ಥಿತಿಗಳನ್ನು ಎದುರಿಸಿದ ಉದಾಹರಣೆಗಳನ್ನು ನೆನೆಯುವುದು ಮನಸ್ಸಿಗೆ ಧೈರ್ಯ ತುಂಬುತ್ತದೆ. ಮನೋಜ್ ತನ್ನ ಪ್ರಸ್ತುತ ಸನ್ನಿವೇಶದಿಂದ ಹೊರಬರಲು ಹಿಂದಿನ ಸಂಗತಿಗಳನ್ನು ಬಳಸಿಕೊಂಡ. ಧನಾತ್ಮಕ ಭವಿಷ್ಯದ ಅನುಭವಗಳನ್ನು ಯೋಚಿಸಿದ. ಇದು ಆತ್ಮಹತ್ಯೆ ಯೋಚನೆಯನ್ನು ಕುಗ್ಗಿಸಿತು.

ಆತ್ಮಹತ್ಯೆಯ ಯೋಚನೆಗಳು ದಿನದ ಎಲ್ಲ ಸಮಯದಲ್ಲಿ ಅಥವಾ ಎಲ್ಲ ದಿನಗಳಲ್ಲಿ ಒಂದೇ ರೀತಿಯಾಗಿರದೆ ಏರುಪೇರಾಗಿರುತ್ತದೆ. ಮತ್ತು ಇದು ಕೆಲ ದಿನ ಅಥವಾ ತಿಂಗಳು ಮುಂದುವರಿಯಬಹುದು. ಬದುಕಲು ಇರುವ ಕಾರಣಗಳನ್ನು ಬರೆದಿಡಿ (ಉತ್ತೇಜನ, ಭವಿಷ್ಯದ ಯೋಜನೆಗಳು, ನಿಮ್ಮ ಕುರಿತು ಕಾಳಜಿ ವಹಿಸುವ ವ್ಯಕ್ತಿಗಳು, ಹಿಂದಿನ ಧನಾತ್ಮಕ ಅನುಭವಗಳು) 

ಅಂಥ ಯೋಚನೆಗಳಿಂದ ಹೊರತರುವ ಚಟುವಟಿಕೆಗಳಲ್ಲಿ ಮಗ್ನರಾಗಿ
* ನಂಬಿಗಸ್ಥ ವ್ಯಕ್ತಿಗಳನ್ನು ಸಂಪರ್ಕಿಸುವ ಅಥವಾ ಅವರೊಂದಿಗೆ ನಿತ್ಯ ಮಾತನಾಡುವ ವ್ಯವಸ್ಥೆ ಮಾಡಿಕೊಳ್ಳಿ
* ಆತ್ಮಹತ್ಯೆ ತಡೆ ಸಹಾಯವಾಣಿ ಅಥವಾ ಸಲಹೆಗಾರರ ನಂಬರ್ ತೆಗೆದುಕೊಳ್ಳಿ
ಈ ಯೋಜನೆಗಳನ್ನು ನಿಮ್ಮ ನಂಬಿಗಸ್ಥ ವ್ಯಕ್ತಿಗಳ ಜೊತೆ ಹಂಚಿಕೊಳ್ಳಿ. ನಿಮ್ಮ ಬಳಿ ಒಂದು ಪ್ರತಿ ಇಟ್ಟುಕೊಳ್ಳಿ.
ಆತ್ಮಹತ್ಯೆ ಯೋಚನೆಗಳಿಂದ ಹೊರಬರಲು ಅತ್ಯುತ್ತಮ ವಿಧಾನವೆಂದರೆ ಸ್ವಯಂ ಸಹಾಯ. ಪ್ರಾರಂಭದಲ್ಲಿ ಉಲ್ಲೇಖಿಸಿದ ವಿವಿಯಾನ್ ಹೇಳಿಕೆಯಂತೆ ಪ್ರವಾಹಕ್ಕಾಗಿ ಕಾಯದೆ ಆಗಾಗ ಮಳೆಯಲ್ಲಿ ನೆನೆದು ಪ್ರಬಲರಾಗುವುದು ಉತ್ತಮ. 

–ಡಾ. ವಿ.ಸೆಂತಿಲ್ ಕುಮಾರ್ ರೆಡ್ಡಿ
ಸಹಾಯಕ ಪ್ರಾಧ್ಯಾಪಕರು, ಸೈಕ್ಯಾಟ್ರಿ ವಿಭಾಗ, ನಿಮ್ಹಾನ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT